ರಾಕಿ ಭಾಯ್ ಯಶ್ ಗೆ ನೋಟಿಸ್: ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಟೀಸರ್ ಗೆ ಸಂಬಂಧಿಸಿದಂತೆ ಯಶ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ನೋಟಿಸ್ ಅಲ್ಲ ಮನವಿ ಅಷ್ಟೆ ಎಂದು ಹೇಳಿದ್ದಾರೆ.
Recommended Video
ಯಶ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಬಹುನಿರೀಕ್ಷೆಯ ಕೆಜಿಎಫ್-2 ಟೀಸರ್ ನಂ.1 ಟ್ರೆಂಡಿಂಗ್ ನಲ್ಲಿದೆ. ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡು ಟೀಸರ್ ದಾಖಲೆ ನಿರ್ಮಿಸಿದೆ. ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ ಚಿತ್ರದ ಟೀಸರ್ ಗೆ ಈ ಪರಿ ಪ್ರತಿಕ್ರಿಯೆ ಸಿಕ್ಕಿರುವುದು ನೋಡಿ ಭಾರತೀಯ ಸಿನಿಮಾರಂಗ ದಂಗ್ ಆಗಿದೆ. ಟೀಸರ್ ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟೀಸರ್ ಸಂಬಂಧ ಯಶ್ ಗೆ ನೋಟಿಸ್ ನೀಡಿದೆ.

ಕೆಜಿಎಫ್-2 ಟೀಸರ್ ಗೆ ಆಕ್ಷೇಪ
ಟೀಸರ್ ನಲ್ಲಿ ಯಶ್ ಗನ್ ನಿಂದ ಸಿಗರೇಟ್ ಹಚ್ಚುವ ದೃಶ್ಯವಿದೆ. ನಿಯಮದ ಪ್ರಕಾರ 'ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ' ಎನ್ನುವ ಸೂಚನೆ ಹಾಕಬೇಕು. ಆದರೆ ಟೀಸರ್ ನಲ್ಲಿ ಹಾಕಿಲ್ಲ. ಇದು ಧೂಮಪಾನ ಪ್ರಚೋದಿಸುತ್ತಿದೆ ಹಾಗೂ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ-2003 ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಹಾಗಾಗಿ ಈ ದೃಶ್ಯವನ್ನು ತೆಗೆದು ಹಾಕುವಂತೆ ಹೇಳಿದೆ.

ಅಭಿಮಾನಿಗಳು ಇದನ್ನೇ ಅನುಸರಿಸುತ್ತಾರೆ
ಲಕ್ಷಾಂತರ ಯುವ ಅಭಿಮಾನಿಗಳನ್ನು ಹೊಂದಿರುವ ಮತ್ತು ಸಾಮಾಜಿಕ ಕಳಕಳಿ ಇರುವ ಯಶ್ ಇಂತಹ ದೃಶ್ಯಗಳನ್ನು ಯುವ ಜನತೆ ಅನುಸರಿಸುವುದು ಸಾಮಾನ್ಯ. ಇದರಿಂದ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಯುವ ಜನರು ಒಳಗಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ಡಾ. ಸುಧಾಕರ್ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ.ಸುಧಾಕರ್, ನಟ ಯಶ್ ಗೆ ಮನವಿ ಮಾಡಿದ್ದಷ್ಟೇ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನವಿ ಮಾಡಲಾಗಿದೆ ಎಂದಿದ್ದಾರೆ. ಯಶ್ ಮಾತ್ರವಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರೆ. ಹಾಗಾಗಿ ಇಂತಹ ದೃಶ್ಯಗಳನ್ನು ತೋರಿಸಬಾರದು. ನಟರು ಈ ಬಗ್ಗೆ ಜಾಗೃತಿ ಮೂಡಿಸಬೇಕು' ಎಂದು ಹೇಳಿದ್ದಾರೆ.

ಯಶ್ ಸಿಗರೇಟ್ ದೃಶ್ಯ ಸಿಕ್ಕಾಪಟ್ಟೆ ವೈರಲ್
ಅಂದಹಾಗೆ ಟೀಸರ್ ನಲ್ಲಿ ಯಶ್ ಸಿಗರೇಟ್ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗನ್ ನಿಂದ ಸಿಗರೇಟು ಹಚ್ಚುತ್ತಿರುವ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಈ ದೃಶ್ಯಕ್ಕೆ ಈಗ ಆಕ್ಷೇಪ ವ್ಯಕ್ತವಾಗಿದೆ.


Click it and Unblock the Notifications











