'ಯಜಮಾನ'ರ ಹಾದಿಯಲ್ಲಿ ವಿಷ್ಣುಸೇನೆ : ಬಡ ಐಎಎಸ್ ವಿದ್ಯಾರ್ಥಿಗಳಿಗೆ ಆಸರೆ
ಡಾ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನ ಮಾಡುತ್ತಿರುವ 'ಡಾ ವಿಷ್ಣು ಸೇನಾ ಸಮಿತಿ' ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈಹಾಕಿದೆ. ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ಕೈಗೊಳ್ಳಲು ಇಚ್ಚಿಸುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಜವಬ್ದಾರಿಯನ್ನು ವಹಿಸಿಕೊಳ್ಳುವ ಮಹತ್ವದ 'ಹೊಂಬಿಸಿಲು' ಎಂಬ ಯೋಜನೆಯನ್ನು ಡಾ.ವಿಷ್ಣು ಸೇನಾ ಸಮಿತಿ ಆರಂಭಿಸಿದೆ.
ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಐಎಎಸ್ ಮತ್ತು ಕೆಎಎಸ್ ಓದಲಿಚ್ಚಿಸುವ ಸುಮಾರು 25 ಬಡ ವಿದ್ಯಾರ್ಥಿಗಳ ಹೊಣೆಯನ್ನು ಡಾ.ವಿಷ್ಣು ಸೇನಾ ಸಮಿತಿ ಹೊರಲಿದೆ. ಈ ಯೋಜನೆಯನ್ನು ನಾಡಿನ ಪ್ರಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ತರಲು ತೀರ್ಮಾನಿಸಲಾಗಿದೆ.
ಈ 25 ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಡಾ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರು ವಹಿಸಿಕೊಳ್ಳಲಿದ್ದಾರೆ. ಈ ಯೋಜನೆಯ ಸಮನ್ವಯಕಾರರಾಗಿ ಡಾ.ವಿಷ್ಣು ಸೇನಾ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷರೂ, ವಕೀಲರೂ ಆದ ಎಂ.ಎನ್. ಶಶಿವರ್ಧನ್ ಮತ್ತು ಹಿರೇಹಡಗಲಿ ವಿಷ್ಣು ಸೇನಾ ಸಮಿತಿ ಪದಾಧಿಕಾರಿಯಾದ Suneel Kotagi ಅವರು ವಹಿಸಿಕೊಳ್ಳಲಿದ್ದಾರೆ.

'ಡಾ.ವಿಷ್ಣು ಅವರ ಹೆಸರಿನಲ್ಲಿ ಸಾರ್ಥಕ ಕೆಲಸಗಳಾಗಬೇಕು ಮತ್ತು ಕನ್ನಡಿಗರು ಅವಕಾಶ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ನಮಗೆ ಸಾಧನಕೋಚಿಂಗ್ಸೆಂಟರ್ ಸಹಯೋಗ ನೀಡುತ್ತಿದೆ. ಡಾ.ಜ್ಯೋತಿ ಎಂಬ ಕ್ರಾಂತಿಕಾರಿ ಹೆಣ್ಣು ಮಗಳು ನಮ್ಮ ಉದ್ದೇಶಕ್ಕೆ ಬೆನ್ನೆಲುಬಾಗಿದ್ದಾರೆ' ಎಂದು ವೀರಕಪುತ್ರ ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳದೆ ಒಂದು ಸುವರ್ಣಾವಕಾಶವನ್ನಾಗಿ ಭಾವಿಸುವವರು ಮಾತ್ರ ಸಂಪರ್ಕಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಬಳಿ ಬರುವ ವಿದ್ಯಾರ್ಥಿಗೆ ಸಾಧಿಸುವ ಹಸಿವಿರಬೇಕೇ ವಿನಃ, ಉಚಿತವಾಗಿರುವ ಕಾರಣಕ್ಕೆ ಟ್ರೈ ಮಾಡಿ ನೋಡುತ್ತೇನೆ ಎಂಬ ಮನೋಭಾವ ಇರಬಾರದು.

ನೂರು ಕೆಟ್ಟ ವಿದ್ಯಾರ್ಥಿಗಳು ಆಯ್ಕೆಯಾಗದಿದ್ದರೂ ಪರವಾಗಿಲ್ಲ ಆದ್ರೆ ಒಬ್ಬೇ ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಮೋಸವಾಗದಿರಲಿ. ಆ ಮೂಲಕ ವಿದ್ಯಾರ್ಥಿ ಬದುಕಲ್ಲಿ 'ಹೊಂಬಿಸಿಲು' ಮೂಡಲಿ ಎಂದು ಕರೆ ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗಬಯಸುವವರು ವಿಷ್ಣು ಸೇನಾ ಸಮಿತಿಯನ್ನ ಸಂಪರ್ಕಿಸಬಹುದು.


Click it and Unblock the Notifications











