ದಾದಾ ಅಭಿಮಾನಿಗಳಿಗಾಗಿ ಅಕ್ಟೋಬರ್ 20ಕ್ಕೆ ವಿಶೇಷ ಕಾರ್ಯಕ್ರಮ, ಮಿಸ್ ಮಾಡಬೇಡಿ
ಸಾಹಸಸಿಂಹ ವಿಷ್ಣುವರ್ಧನ್ ಅಗಲಿ 15 ವರ್ಷವಾಗುತ್ತಾ ಬಂತು. ಆದರೆ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ವಿಷ್ಣುದಾದಾ ಶಾಶ್ವತ ಸ್ಥಾನ ಗಳಿಸಿದ್ದಾರೆ. ತಮ್ಮ ವ್ಯಕ್ತಿತ್ವ ಹಾಗೂ ಸಿನಿಮಾಗಳಿಂದ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದಿದ್ದಾರೆ. ಇದೀಗ ದಾದಾ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಆಗುತ್ತಿದೆ.
ಸೆಪ್ಟೆಂಬರ್ 18ರಂದು ಅಭಿಮಾನಿಗಳು ಸಾಹಸಸಿಂಹನ 74ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿರುವ ದಾದಾ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದೇ ಸಂಭ್ರಮದಲ್ಲಿ ಡಾ. ವಿಷ್ಣುಸೇನಾ ಸಮಿತಿ ಸಂಘದಿಂದ 'ದಾದಾ ಡಿಜೆ' ಎನ್ನುವ ಕಲರ್ಫುಲ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿತ್ತು. ಅದಕ್ಕಾಗಿ ಸಮಯ, ಸ್ಥಳ ಸಹ ನಿಗದಿಯಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

ಇದೀಗ ಮತ್ತೆ 'ದಾದಾ ಡಿಜೆ' ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಹೊಸ ದಿನಾಂಕ, ಸಮಯ, ಸ್ಥಳ ನಿಗದಿ ಮಾಡಿ ಡಾ. ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ದಾದಾನ ಸಂಭ್ರಮಿಸಲು ಎಲ್ಲರೂ ಬನ್ನಿ ಎಂದು ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಚಿತ್ರಗಳ ಗೀತೆಗಳನ್ನು 'ದಾದಾ ಡಿಜೆ' ಕಾರ್ಯಕ್ರಮದಲ್ಲಿ ಹೊಸ ರೂಪದಲ್ಲಿ ಕೇಳಿಸಲಾಗುತ್ತಿದೆ. ಅಭಿಮಾನಿಗಳು ಹಾಡುಗಳನ್ನು ಕೇಳಿ, ಗುನುಗಿ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುತ್ತಿದೆ. "ಗೀತೆಗಳನ್ನು ಹೊಸ ರೂಪದಲ್ಲಿ ಕೇಳಲು ನೆಲ ನಡುಗುವಂತೆ, ಬೆವರಿಳಿಯುವಂತೆ ಕುಣಿಯಲು ಯಜಮಾನರನ್ನು ಅಮೋಘವಾಗಿ ಹೊಸ ರೀತಿಯಲ್ಲಿ ನೆನೆಯಲು ದಾದಾ ಡಿಜೆ ಕಾರ್ಯಕ್ರಮ" ಎಂದು ಹೇಳಲಾಗಿದೆ.
ಸೆಪ್ಟೆಂಬರ್ 18ರಂದು ಬೆಂಗಳೂರಿನ ವಿಜಯನಗರದ ಬಾಲ ಗಂಗಾಧರ ಸ್ವಾಮೀಜಿ ಕ್ರೀಡಾಂಗಣದಲ್ಲಿ ದಾದಾ ಡಿಜೆ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಇದೀಗ ಅಕ್ಟೋಬರ್ 20ರಂದು ನಗರದ ವಿದ್ಯಾಪೀಠ ಬಳಿಯ ಶಂಕರ್ ನಾಗ್ ಸರ್ಕಲ್ನಲ್ಲಿರುವ ಕೆಂಪೇಗೌಡ ಮೈದಾನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಸಾಕಷ್ಟು ಸರ್ಪ್ರೈಸಿಂಗ್ ವಿಚಾರಗಳು ಕಾಯ್ತಿದೆ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
1950ರಲ್ಲಿ ಹುಟ್ಟಿದ ಸಂಪತ್ಕುಮಾರ್ ಮುಂದೆ ವಿಷ್ಣುವರ್ಧನ್ ಆಗಿ ಚಿತ್ರರಂಗಕ್ಕೆ ಬಂದಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸಿಗೆ ವಿಷ್ಣು ಲಗ್ಗೆ ಹಾಕಿದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು. ನೂರಾರು ಸಿನಿಮಾಗಳಲ್ಲಿ ವಿವಿಧ ಬಗೆಯ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರನ್ನು ರಂಜಿಸಿದರು. ಅದ್ಭುತ ಸಿನಿಮಾಗಳಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದರು.
ಡಿಸೆಂಬರ್ 30, 2009ರಲ್ಲಿ ವಿಷ್ಣುವರ್ಧನ್ ಅನಾರೋಗ್ಯದಿಂದ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ ವಿಷ್ಣುವರ್ಧನ್ ವಿಧಿವಶರಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆದಿತ್ತು. ಆದರೆ ಸಮಾಧಿ ಜಾಗ ವಿವಾದಕ್ಕೆ ಈಡಾಗಿದೆ. ಮೈಸೂರಿನ ಉದ್ದೂರು ಗೇಟ್ ಬಳಿಯ ಹಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ.
'ಆಪ್ತರಕ್ಷಕ' ಚಿತ್ರದಲ್ಲಿ ಕೊನೆಯದಾಗಿ ದಾದಾ ನಟಿಸಿದ್ದರು. 'ಬಂಧನ', 'ಖೈದಿ', 'ಆಪ್ತಮಿತ್ರ', 'ಸಾಹಸಸಿಂಹ', 'ಮುತ್ತಿನ ಹಾರ', ಯಜಮಾನ, ಸಿಂಹಾದ್ರಿಯ ಸಿಂಹ, 'ಕಳ್ಳ-ಕುಳ್ಳ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿ ಗೆದ್ದಿದ್ದರು. ಸದ್ಯ 'ದಾದಾ ಡಿಜೆ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಈ ಕಾರ್ಯಕ್ರಮಕ್ಕೆ ದಾದಾ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.


Click it and Unblock the Notifications











