ಡಾ. ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಣೆ
ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಪುರಸ್ಕರಿಸಿ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡುವಂತೆ ಬೇಡಿಕೆ ಹೆಚ್ಚಾಗಿತ್ತು. ಕೊನೆಗೂ ಇಬ್ಬರು ಮಹನೀಯರಿಗೆ ಗೌರವ ಸಿಗುತ್ತಿದೆ.
ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್ ಮನವಿ ಮಾಡಿದ್ದರು. ಅದಕ್ಕೂ ಮುನ್ನ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ್ ಕೂಡ ಸಿಎಂ ಬಗ್ಗೆ ಈ ಬಗ್ಗೆ ವಿನಂತಿಸಿದ್ದರು.

ಮುಂದಿನ ವಾರ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಇಂತಹ ಹೊತ್ತಲ್ಲೇ ಕರ್ನಾಟಕ ರತ್ನ ಘೋಷಣೆ ಆಗಿರುವುದು ಸಂತಸ ತಂದಿದೆ. ಪುನೀತ್ ರಾಜ್ಕುಮಾರ್ ಬಳಿಕ ಇಬ್ಬರೂ ಕಲಾವಿದರಿಗೆ ಈ ಗೌರವ ಸಿಕ್ಕಂತಾಗಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ದಾದಾ ನಟಿಸಿದ್ದಾರೆ. ಅಣ್ಣಾವ್ರ ಬಳಿಕ ಕನ್ನಡ ಚಿತ್ರರಂಗಕ್ಕೆ ವಿಷ್ಣು ಕೊಡುಗೆ ಅಪಾರ.
ಇದೇ ವರ್ಷ ಜುಲೈ 14ರಂದು ಬಹುಭಾಷಾ ನಟಿ ಬಿ. ಸರೋಜಾ ದೇವಿ ವಿಧಿವಶರಾಗಿದ್ದರು. ಅವರು ಕನ್ನಡ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ಇವರಿಬ್ಬರಿಗೂ ಕರ್ನಾಟಕ ರತ್ನ ಘೋಷಣೆ ಆಗಿರುವುದು ಸಿನಿರಸಿಕರಿಗೆ ಖುಷಿ ತಂದಿದೆ. ಈ ಬಗ್ಗೆ ಆಪ್ತರು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ದಾದಾಗೆ ಬಹಳ ಹಿಂದೆಯೇ ಸಿಗಬೇಕಿದ್ದ ಗೌರವ ಅಂತೂ ಇಂತೂ ಸಿಕ್ಕಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಎಲ್ಲಿ, ಯಾವಾಗ ಕರ್ನಾಟಕ ರತ್ನ ಪ್ರದಾನ ಮಾಡಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುತ್ತಿದೆ. ಈ ಬಗ್ಗೆ ಕನ್ನಡ & ಸಂಸ್ಕೃತಿ ಇಲಾಖೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಸಭೆಯಲ್ಲಿ ತೀರ್ಮಾನಿಸಲಾಗಿದೆ.
'ವಂಶವೃಕ್ಷ' ಚಿತ್ರದ ಮೂಲಕ ವಿಷ್ಣುವರ್ಧನ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ 'ನಾಗರಹಾವು' ಚಿತ್ರದಲ್ಲಿ ನಟಿಸಿ ಸ್ಟಾರ್ ಆಗಿಬಿಟ್ಟಿದ್ದರು. ಮುಂದೆ 'ಬಂಧನ', 'ಸಾಹಸಸಿಂಹ', 'ಮುತ್ತಿನ ಹಾರ', 'ಯಜಮಾನ', 'ಆಪ್ತಮಿತ್ರ', 'ಆಪ್ತರಕ್ಷಕ' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಹಿನ್ನೆಲೆ ಗಾಯಕರಾಗಿಯೂ ಹಾಡುಗಳನ್ನು ಹಾಡಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸ್ಮಾರಕ ಧ್ವಂಸ ಪ್ರಕರಣ ಇತ್ತೀಚೆಗೆ ವಿವಾದ ಹುಟ್ಟುಹಾಕಿತ್ತು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಬಿ. ಸರೋಜಾ ದೇವಿ ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿ ಮೋಡಿ ಮಾಡಿದ್ದರು. ಪದ್ಮಶ್ರೀ, ಪದ್ಮಭೂಷಣ್ ಸೇರಿ ಸಾಕಷ್ಟು ಪ್ರಶಸ್ತಿ ಗೌರವಗಳು ಅವರಿಗೆ ಲಭಿಸಿತ್ತು. ಕನ್ನಡದ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸರೋಜಾ ದೇವಿ ಮುಂದೆ ಎಂಜಿಆರ್, ಎನ್ಟಿಆರ್, ಶಿವಾಜಿ, ಎಎನ್ಆರ್ ಹಾಗೂ ಡಾ. ರಾಜ್ಕುಮಾರ್ ಸೇರಿದಂತೆ ಆ ಕಾಲದ ಖ್ಯಾತ ನಟರ ಜೊತೆ ತೆರೆ ಹಂಚಿಕೊಂಡಿದ್ದರು. ಸತತ 29 ವರ್ಷಗಳ ಕಾಲ ನಾಯಕಿಯಾಗಿಯೇ ಸಿನಿಮಾಗಳಲ್ಲಿ ನಟಿಸಿ ದಾಖಲೆ ಬರೆದಿದ್ದರು.


Click it and Unblock the Notifications











