ವಿಷ್ಣುವರ್ಧನ್ ಜನ್ಮದಿನದ ಸವಿನೆನಪು: ಸಾಹಸ ಸಿಂಹನನ್ನು ನೆನೆದ ಸುದೀಪ್ ಮತ್ತು ರಮೇಶ್ ಅರವಿಂದ್
ಸಾಹಸ ಸಿಂಹ, ಅಭಿನಯ ಭಾರ್ಗವ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ 71ನೇ ವರ್ಷದ ಜನ್ಮದಿನ. ಅಭಿಮಾನಿಗಳ ಪ್ರೀತಿಯ ವಿಷ್ಣುದಾದಾ ಇಂದು ದೈಹಿಕವಾಗಿ ಇಲ್ಲದಿದ್ದರೂ ಸಿನಿಮಾಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ. 200 ಸಿನಿಮಾಗಳಲ್ಲಿ ನಟಿಸಿ ಬಣ್ಣದ ಲೋಕದಿಂದ, ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಶಾಶ್ವತವಾಗಿ ದೂರವಾದರು. ಇಂದು ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ಕಲಾವಿದರು ಸಹ 'ಹೃದಯವಂತ'ನನ್ನು ಸ್ಮರಿಸುತ್ತಿದ್ದಾರೆ.
ಹಿರಿಯ ನಟ ರಮೇಶ್ ಅರವಿಂದ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಅನೇಕರು ವಿಷ್ಣುದಾದಾನನ್ನು ನೆನೆಪಿಸಿಕೊಂಡಿದ್ದಾರೆ. ನಟ ರಮೇಶ್ ಅರವಿಂದ್ ಮತ್ತು ವಿಷ್ಣುವರ್ಧನ್ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರು ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆಪ್ತಮಿತ್ರ, ಏಕದಂತ, ವರ್ಷ ಸಿನಿಮಾಗಳಲ್ಲಿ ವಿಷ್ಣವರ್ಧನ್ ಜೊತೆ ರಮೇಶ್ ಅರವಿಂದ್ ಬಣ್ಣಹಚ್ಚಿದ್ದಾರೆ. ತೆರೆಮೇಲಿನ ಇಬ್ಬರ ಕಾಂಬಿನೇಷನ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು.
ಇಂದು ವಿಷ್ಣುವರ್ಧನ್ ಇಲ್ಲ. ಆದರೆ ಅವರ ನೆನಪನ್ನು ಹಂಚಿಕೊಂಡಿದ್ದಾರೆ ರಮೇಶ್ ಅರವಿಂದ್. ವಿಷ್ಣುವರ್ಧನ್ ಜೊತೆ ಇರುವ ಫೋಟೋ ಶೇರ್ ಮಾಡಿ, "ಸ್ನೇಹದ ಕಡಲಲ್ಲಿ....ನೆನಪಿನ ದೋಣಿಯಲಿ..." ಎಂದು ಬರೆದುಕೊಂಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ವಿಷ್ಣುದಾದಾ ಮೇಲೆ ಅಪಾರ ಗೌರವ, ಪ್ರೀತಿ ಇಟ್ಟುಕೊಂಡಿರುವ ನಟ. ಸುದೀಪ್ ಆಗಾಗ ವಿಷ್ಣುವರ್ಧನ್ ಬಗ್ಗೆ ಹೇಳುತ್ತಿರುತ್ತಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ವಿಷ್ಣುವರ್ಧನ್ ಭಾವಚಿತ್ರಕ್ಕೆ ನಮಿಸುತ್ತಿರುವ ಫೋಟೋ ಶೇರ್ ಮಾಡಿ, "ವಿಷ್ಣುವರ್ಧನ್ ಅವರಿಗೆ ಅಭಿಮಾನಿಗಳ ಸಾಗರವೇ ಇದೆ. ನಾನು ಆ ಸಾಗರದಲ್ಲಿ ಒಂದು ಹನಿ ಅಷ್ಟೆ. ಇಂದು ಮಾತ್ರವಲ್ಲ, ನೀವು ಪ್ರತಿ ಕ್ಷಣ ಪ್ರತಿ ದಿನ ನೆನಪಾಗುತ್ತೀರಿ ವಿಷ್ಣು ಸರ್" ಎಂದು ಬರೆದುಕೊಂಡಿದ್ದಾರೆ.

ಇನ್ನು ಸಾಹಸ ಸಿಂಹನ ಹುಟ್ಟುಹಬ್ಬವನ್ನು ಕುಟುಂಬದವರು ಇಂದು ಮೈಸೂರಿನಲ್ಲಿ ಆಚರಿಸುತ್ತಿದ್ದಾರೆ. ಆ ಬಗ್ಗೆ ನಟ ಅನಿರುದ್ಧ ಮಾಹಿತಿ ನೀಡಿದ್ದಾರೆ. "ಎಚ್.ಡಿ. ಕೋಟೆ ರಸ್ತೆಯಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಜಾಗದಲ್ಲಿ ಬೆಳಗ್ಗೆ 11 ಗಂಟೆಗೆ ನಾವು ಜನ್ಮದಿನ ಆಚರಿಸುತ್ತೇವೆ. ಭಾರತಿ ವಿಷ್ಣುವರ್ಧನ್, ಕೀರ್ತಿ ಸೇರಿದಂತೆ ನಾವೆಲ್ಲ ಇರುತ್ತೇವೆ. ಅಭಿಮಾನಿಗಳು ಬರಲೇಬೇಕು ಅಂತ ನಾನು ಹಠ ಹಿಡಿಯುತ್ತಿಲ್ಲ. ಯಾಕೆಂದರೆ ಕೊರೊನಾ ಇದೆ. ಬರಬೇಕು ಎಂಬ ಆಸೆ ಇರುವವರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಬನ್ನಿ" ಎಂದು ಮಾಹಿತಿ ನೀಡಿದ್ದಾರೆ.


Click it and Unblock the Notifications











