ಡಾ.ವಿಷ್ಣುವರ್ಧನ್ ಗೆ ಭಾರತ ರತ್ನ: ಒಕ್ಕೊರಲ ಆಗ್ರಹ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಬಂದ ಹಿನ್ನೆಲೆಯಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೂ ಭಾರತರತ್ನ ಕೊಡಬೇಕೆಂಬ ಆಗ್ರಹ ಫೇಸ್ ಬುಕ್ ನಲ್ಲಿ ಮುಗಿಲುಮುಟ್ಟಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಚಿನ್ ಹಾಗೂ ವಿಷ್ಣುಗೆ ಇರುವ ಹೋಲಿಕೆಗಳನ್ನೂ ಪಟ್ಟಿ ಮಾಡಿ ಪ್ರಚಾರ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ನಟ ವಿಷ್ಣುವರ್ಧನ್ ತಮ್ಮ ಅಭಿಮಾನಿಗಳಿಂದ ಕರ್ನಾಟಕದ ಕರ್ಣ ಎಂದು ಕರೆಸಿಕೊಂಡವರು.
ವಿಷ್ಣುವರ್ಧನ್ ಅವರು ಕೇವಲ ನಟನಾಗಿ ಮಾತ್ರ ಇರಲಿಲ್ಲ. ಅವರಲ್ಲೊಬ್ಬ ಗಾಯಕ, ಕ್ರೀಡಾಪಟು ಎಲ್ಲಕ್ಕಿಂತಲೂ ಮುಖ್ಯವಾಗಿ ಸಮಾಜಸೇವಕನಿದ್ದ. ಯುಗ ಯುಗಳೇ ಸಾಗಲಿ ಡಾ.ವಿಷ್ಣುವರ್ಧನ್ ಅವರ ನೆನಪು ಕನ್ನಡ ಚಿತ್ರರಂಗದಲ್ಲಿ ಶಾಶ್ವತ. ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ಕಲಾವಿದನಿಗೆ ಭಾರತ ರತ್ನ ಕೊಡಬೇಕೆ ಬೇಡವೆ ಎಂಬುದು ಈಗ ಚರ್ಚನೀಯ ವಿಷಯವಾಗಿದೆ.
ಕನ್ನಡ ಚಿತ್ರರಂಗದ 'ಯಜಮಾನ' ಇಂದು ಅಭಿಮಾನಿಗಳ ನಡುವೆ ಇಲ್ಲದಿದ್ದರೂ ಅವರ ನೆನಪು ಮಾತ್ರ ಸದಾ ಹಸಿರು. ಬಂಗಾರದ ಕಳಸ, ಸಿಂಹಾದ್ರಿಯ ಸಿಂಹ, ಸಾಹಸ ಸಿಂಹ, ಕರುನಾಡ ಜಮೀನ್ದಾರ್ರು, ಅಭಿನಯ ಭಾರ್ಗವ... ಮುಂತಾದ ಬಿರುದುಗಳನ್ನು ಪಡೆದ ವಿಷ್ಣು ಹಾಗೂ ಸಚಿನ್ ನಡುವಿನ ಹೋಲಿಕೆಗಳು ಸ್ಲೈಡ್ ನಲ್ಲಿ ನೋಡಿ...

ಎರಡೂ ಹೆಸರುಗಳಲ್ಲೂ 15 ಅಕ್ಷರಗಳು!
Dr Vishnuvardhan ಹಾಗೂ Sachin Tendulkar ಇಬ್ಬರ ಹೆಸರುಳಲ್ಲೂ ಹದಿನೈದು ಅಕ್ಷರಗಳಿವೆ. ಇದೊಂದು ರೀತಿ ವಿಚಿತ್ರ ಹೋಲಿಕೆ ಅನ್ನಿಸುತ್ತದೆ ಅಲ್ಲವೆ? ಅಭಿಮಾನಿಗಳ ಅಭಿಮಾನಕ್ಕೆ ಏನನ್ನೋಣ.

ಇಬ್ಬರಿಗೂ 200 ಬಹಳ ಮುಖ್ಯವಾದ ಅಂಕಿ
ಡಾ.ವಿಷ್ಣುವರ್ಧನ್ ಅವರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಚಿನ್ ಸಹ ರಿಟೈರ್ ಆಗಿದ್ದು 200ನೇ ಟೆಸ್ಟ್ ಮ್ಯಾಚ್ ಆಡಿ. ಈ ಹೋಲಿಕೆಯಲ್ಲಿ ಅಂತಹ ಅತಿಶಯೋಕ್ತಿ ಏನೂ ಇಲ್ಲ ಬಿಡಿ. ಎಲ್ಲರೂ ಒಪ್ಪಬಹುದು ಅಲ್ಲವೆ?

ಇಬ್ಬರೂ 'ಎಡ'ಪಂಥೀಯರು
ವಿಷ್ಣುವರ್ಧನ್ ಅವರು ಎಡಗೈಯನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಹಾಗೆಯೇ ಸಚಿನ್ ಸಹ ಬರವಣಿಗೆಗೆ ಎಡಗೈ ಬಳಸುತ್ತಿದ್ದರು. ಇಬ್ಬರು Left Handed ಎಂಬ ಕಾರಣಕ್ಕೆ ಭಾರತರತ್ನ ಕೊಡಬೇಕೆ ಎಂಬ ಪ್ರಶ್ನೆಯೂ ಕಾಡುತ್ತದೆ. ಇದೊಂದು ರೀತಿ ತಮಾಷೆ ಎನ್ನಿಸಿದರೂ ಅಭಿಮಾನಿಗಳ ಒತ್ತಾಯಕ್ಕೆ ಎಂಥವರೂ ಮಣಿಯಲೇಬೇಕು.

ಇಬ್ಬರೂ ಆಲ್ ರೌಂಡರ್ ಗಳೇ
ಬೆಳ್ಳಿಪರದೆ ಮೇಲೆ ವಿಷ್ಣುವರ್ಧನ್ ಅವರು ಆಲ್ ರೌಂಡರ್ ಆಗಿದ್ದರು. ಅದೇ ರೀತಿ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಆಲ್ ರೌಂಡರ್. ಈ ಹೋಲಿಕೆಯಲ್ಲಿ ಯಾವುದೇ ವಿರೋಧಾಭಾಸ ಇಲ್ಲದಿದ್ದರೂ ಒಪ್ಪಿಕೊಳ್ಳಲೇಬೇಕು.

ಕನ್ನಡ ಚಿತ್ರರಂಗದ ದೇವರು, ಕ್ರಿಕೆಟ್ ದೇವರು
ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರನ್ನು ದೇವರೆಂದೇ ಕರೆಯುತ್ತಾರೆ ಅವರ ಅಭಿಮಾನಿಗಳು. ಇನ್ನು ಕ್ರಿಕೆಟ್ ದೇವರೆಂದರೆ ಗೂಗಲ್ ಸರ್ಚ್ ಎಂಜಿನ್ ಹುಡುಕಿ ಕೊಡುವುದು ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು.

ಲಾಸ್ಟ್ ಬಟ್ ನಾಟ್ ದ ಲೀಸ್ಟ್ ಹೋಲಿಕೆ
ಕನ್ನಡ ಚಿತ್ರರಂಗದಲ್ಲಿ ವಿಷ್ಣು ಅವರು ತಮ್ಮದೇ ಆದಂತಹ ಅಭಿನಯಕ್ಕೆ ಹೆಸರಾದವರು. ಚಿತ್ರರಂಗದಲ್ಲಿ ಅತ್ಯುನ್ನತ ಎತ್ತರಕ್ಕೆ ಏರಿದ ಕಲಾವಿದ. ಸಚಿನ್ ಸಹ ಅಷ್ಟೆ ಕ್ರಿಕೆಟ್ ನಲ್ಲಿ ತನ್ನದೇ ಆದಂತಹ ಶೈಲಿಯ ಆಟಕ್ಕೆ ಹೆಸರಾದವರು. ಅಷ್ಟೇ ಎತ್ತರಕ್ಕೆ ಏರಿದವರು. ಈಗ ಹೇಳಿ ವಿಷ್ಣುವರ್ಧನ್ ಭಾರತರತ್ನಕ್ಕೆ ಅರ್ಹರೆ?


Click it and Unblock the Notifications











