ವಿಷ್ಣುವರ್ಧನ್ 'ನಾಗರಹಾವು' ರೋಷಕ್ಕೆ ನಲವತ್ತು ವರ್ಷ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು "ಹಾವಿನ ದ್ವೇಷ ಹನ್ನೆರಡು ವರ್ಷ ನನ್ನ ರೋಷ ನೂರು ವರುಷ... ಈ ರಾಮಾಚಾರಿನ ಕೆಣಕೋ ಗಂಡು ಇನ್ನು ಹುಟ್ಟಿಲ್ಲ ಆ ಗಂಡೇ ಹುಟ್ಟಿಲ್ಲ" ಎಂದು ಅಬ್ಬರಿಸಿ ಇದೇ ಡಿಸೆಂಬರ್ 29ಕ್ಕೆ ನಲವತ್ತು ವರ್ಷಗಳಾಗುತ್ತಿದೆ. ವಿಷ್ಣು ನಾಯಕ ನಟನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು'.
ಈ ಶುಭ ಸಂದರ್ಭದಲ್ಲಿ 'ನಾಗರಹಾವು' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 220 ಪುಟಗಳ ಈ ಪುಸ್ತಕದ ಬೆಲೆ ರು.130. ಕೆ.ಆರ್. ಜನಾರ್ಧನ ರಾವ್ ಸಾಳಂಕೆ ಬರೆದಿರುವ ಈ ಪುಸ್ತಕವನ್ನು ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಪ್ರಕಾಶನ ಹೊರತಂದಿದೆ.

"ಬಾರೆ ಬಾರೆ ಚೆಂದದ ಚೆಲುವಿನ ತಾರೆ..." ಎಂಬ ಹಾಡನ್ನು ಸ್ಲೋ ಮೋಷನ್ ನಲ್ಲಿ ತೋರಿಸಿದ ಮೊಟ್ಟ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೂ 'ನಾಗರಹಾವು' ಚಿತ್ರ ಪಾತ್ರವಾಗಿದೆ. ಖ್ಯಾತ ಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾವ್ ಅವರ 'ನಾಗರಹಾವು' ಕಾದಂಬರಿ ಆಧಾರಿತ ಚಿತ್ರ ಇದು. ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡ ಮೊದಲ ಕನ್ನಡ ಚಿತ್ರ.
ರಾಮಾಚಾರಿಯಾಗಿ ವಿಷ್ಣುವರ್ಧನ್, ಅಲಮೇಲು ಪಾತ್ರದಲ್ಲಿ ಆರತಿ, ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಕೆ.ಎಸ್.ಅಶ್ವತ್ಥ್ ಹಾಗೂ ಜಲೀಲನಾಗಿ ಅಂಬರೀಶ್ ಪಾತ್ರ ಇಂದಿಗೂ ಪ್ರೇಕ್ಷಕರ ಮೇಲೆ ಅಚ್ಚಳಿಯದ ಮುದ್ರೆ ಒತ್ತಿದೆ. ನಾಗರಹಾವು ಪುಸ್ತಕದ ಪತ್ರಿಗಳಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ ಸುರೇಶ್: 98808 02551. (ಒನ್ಇಂಡಿಯಾ ಕನ್ನಡ)


Click it and Unblock the Notifications











