ನಾಯಿ ಪದ ಬಳಸಿದ ಜಗ್ಗೇಶ್ ವಿರುದ್ಧ ಡಿಎಸ್ಎಸ್ ರಘು ದೂರು
ತಮ್ಮ ವಿರುದ್ಧ ನಾಯಿ, ಅಧಮ ಶಬ್ದಗಳ ಪ್ರಯೋಗ ಮಾಡಿದ್ದಾರೆಂದು ಆರೋಪಿಸಿ ಡಿಎಸ್ಎಸ್ ಮುಖಂಡ ಸಿ.ಎಸ್.ರಘು ನಟ ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಜಗ್ಗೇಶ್ ಸಹೋದರ, ನಟ ಕೋಮಲ್ ಬಿಬಿಎಂಪಿ ವ್ಯಾಪ್ತಿ ಶಾಲೆ-ಕಾಲೇಜು ಮಕ್ಕಳಿಗೆ ಸ್ವೆಟರ್ ಹಂಚುವ ಟೆಂಡರ್ ಪಡೆದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಸಿ.ಎಸ್ ರಘು ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಇದೇ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರಘು, ಕೋಮಲ್, ನಟ ಜಗ್ಗೇಶ್, ಸಚಿವ ಆರ್.ಅಶೋಕ್ ಹಾಗೂ ಕೆಲವು ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಆರೋಪ ಮಾಡಿದ್ದರು.
ರಘು ಆರೋಪಗಳ ಹಿನ್ನೆಯಲ್ಲಿ ಟ್ವೀಟ್ ಮಾಡಿದ್ದ ನಟ ಜಗ್ಗೇಶ್, ''ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯೆರ್ಥ ತೋರಿಕೆ ಏಕೆಬೇಕು! ಆನೆ ರಾಜಮಾರ್ಗದಲ್ಲಿ ಆಗಲಿ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ! ನಮ್ಮಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು! ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ! ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ'' ಎಂದಿದ್ದರು. ಟ್ವೀಟ್ನಲ್ಲಿ ಎಲ್ಲೂ ಸಂಘಟನೆ ಹೆಸರು ಅಥವಾ ಮುಖಂಡನ ಹೆಸರನ್ನು ಉಲ್ಲೇಖಿಸಿದಿದ್ದರೂ ಈ ಟ್ವೀಟ್ ತಮ್ಮ ವಿರುದ್ಧ ಮಾಡಲಾದ ಆರೋಪದ ಕುರಿತಾಗಿಯೇ ಆಗಿತ್ತು ಎಂಬುದು ಬಹುತೇಕ ಸ್ಪಷ್ಟವಾಗಿತ್ತು.

ಈ ಟ್ವೀಟ್ನಲ್ಲಿ ಜಗ್ಗೇಶ್ ಬಳಸಿರುವ 'ಅಧಮ', 'ನಾಯಿ' ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿಎಸ್ಎಸ್ ಮುಖಂಡ ಸಿ.ಎಸ್.ರಘು, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ರವೀಂದ್ರನಾಥ್ ಬಳಿ ದೂರು ದಾಖಲಿಸಿದ್ದಾರೆ. ಕೆಲವು ಡಿಎಸ್ಎಸ್ ಸದಸ್ಯರು, ಜಗ್ಗೇಶ್ ತಮ್ಮ ಸಂಘವನ್ನು ನಾಯಿಗೆ ಹೋಲಿಸಿದ್ದಾರೆ ಎಂದು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದ ಜಗ್ಗೇಶ್ ಸಿ.ಎಸ್.ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ದಾಖಲೆಗಳನ್ನು ಸಹ ಹಂಚಿಕೊಂಡರು. ಜೆಪಿ ಅಸೋಸಿಯೇಟ್ಸ್ ಲಾ ಫರ್ಮ್ ಮೂಲಕ ಜಗ್ಗೇಶ್ ಲೀಗಲ್ ನೊಟೀಸ್ ಅನ್ನು ನೀಡಿದ್ದಾರೆ. ದಾಖಲೆ ಹಂಚಿಕೊಳ್ಳುವ ಜೊತೆಗೆ ''ಮಾನ್ಯ ರಘು ಅವರಿಗೆ, ಮಾನ್ಯರೇ ತಾವು ಹಾಗೂ ತಮ್ಮ ವಿಳಾಸ ತಿಳಿಯದ ಕಾರಣ ಸಾಮಾಜಿಕ ಜಾಲತಾಣ (ಟ್ವಿಟ್ಟರ್) ಮೂಲಕ ತಮಗೆ ತಿಳಿಸುತ್ತಿರುವೆ. ಸತ್ಯಾಸತ್ಯತೆ ಅರಿಯದೆ ನನ್ನ ತೇಜೋವಧೆ ಮಾಧ್ಯಮದ ಮುಂದೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೆ. ಉತ್ತರಿಸಿ'' ಎಂದಿದ್ದಾರೆ ಜಗ್ಗೇಶ್.
ಮತ್ತೊಂದು ಟ್ವೀಟ್ನಲ್ಲಿ, ''ಎಲ್ಲೋ ನಡೆದ ವಿಷಯಕ್ಕೆ ನನ್ನ ಹೆಸರು ಏಕೆ ಎಳೆದು ತಂದಿರಿ. ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವೂ ಇರುತ್ತದೆ. ಆದರೆ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆದರೂ ನನ್ನ ಹೆಸರು ಏಕೆ ತಂದಿರಿ. ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ ತಲೆ ತಗ್ಗಿಸಲ್ಲ. ನನ್ನ ಕೋಟ್ಯಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ. ಕ್ಷಮಿಸಲ್ಲ'' ಎಂದಿದ್ದಾರೆ.
ಆದರೆ ರಘು ಹಾಗೂ ಡಿಎಸ್ಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿರುವ ಹಗರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ನಟ ಕೋಮಲ್ ನಿನ್ನೆಯೇ ಹೇಳಿಕೆ ನೀಡಿದ್ದಾರೆ. ಸ್ವೆಟರ್ ಹಂಚುವ ಟೆಂಡರ್ ಅನ್ನು ಬಿಬಿಎಂಪಿಯವರು ಖಾಸಗಿ ವ್ಯಕ್ತಿಗಳಿಗೆ ನೀಡುವುದೇ ಇಲ್ಲ. ಅಂಥಹಾ ಟೆಂಡರ್ ಅನ್ನು ಕೈಮಗ್ಗ ಅಭಿವೃದ್ಧಿ ಇಲಾಖೆಗೆ ನೀಡುತ್ತಾರೆ. ಆ ಟೆಂಡರ್ ಪಡೆಯಲು ನಾನು ಯತ್ನಿಸಿದ್ದೂ ಇಲ್ಲ. ಆ ಟೆಂಡರ್ ನನಗೆ ಸಿಕ್ಕಿದ್ದೂ ಇಲ್ಲ'' ಎಂದಿದ್ದಾರೆ. ಅಲ್ಲದೆ, ಜಗ್ಗೇಶ್, ಆರ್.ಅಶೋಕ್ ಹಾಗೂ ಇತರ ಅಧಿಕಾರಿಗಳ ಹೆಸರು ಹೇಳಿ ಆರೋಪ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಕೋಮಲ್.


Click it and Unblock the Notifications











