ಗಂಡಸುತನವಿದ್ದರೆ ಡಬ್ಬಿಂಗ್ ಮಾಡಲಿ : ವಾಟಾಳ್ ವಾರ್ನಿಂಗ್!
ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಭೂತ ಮತ್ತೆ ವಕ್ಕರಿಸಿದೆ. ಸದ್ದಿಲ್ಲದೇ 'ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ' ಕೂಡ ತಲೆ ಎತ್ತಿ ನಿಂತಿದೆ. ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬರುವುದನ್ನು ವಿರೋಧಿಸಿ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದು ನೇತೃತ್ವದಲ್ಲಿ ಇಂದು ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ನಟಿಯರಾದ ಶೃತಿ, ಭಾವನ, ಹಿರಿಯ ನಟರಾದ ಶಿವರಾಂ, ಶ್ರೀನಿವಾಸ್ ಮೂರ್ತಿ, ನಟರಾದ ಪ್ರೇಮ್, ವಿಜಯ್ ರಾಘವೇಂದ್ರ, ಸಾಧು ಕೋಕಿಲ, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಎಂ.ಎಸ್.ರಮೇಶ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವರು ಪಾಲ್ಗೊಂಡಿದ್ದರು.

ಸಭೆಯನ್ನ ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ''ಜೈಲಿಗೆ ಹೋದರೂ ಚಿಂತೆ ಇಲ್ಲ. ಡಬ್ಬಿಂಗ್ ಮಾಡುವುದಕ್ಕೆ ಬಿಡುವುದಿಲ್ಲ. ಡಬ್ಬಿಂಗ್ ಚಿತ್ರ ಬಿಡುಗಡೆ ಮಾಡಿದ್ರೆ ಥಿಯೇಟರ್ ಗೆ ಬೆಂಕಿ ಇಡ್ತೀವಿ. ಗಂಡಸುತನ ಇದ್ದರೆ ಕರ್ನಾಟಕದ ಯಾವುದೇ ಮೂಲೆಯಲ್ಲಾದರೂ ಡಬ್ಬಿಂಗ್ ಚಿತ್ರವನ್ನ ಬಿಡುಗಡೆ ಮಾಡಲಿ ನೋಡೋಣ. ಡಬ್ಬಿಂಗ್ ಸಿನಿಮಾ ರಿಲೀಸ್ ಮಾಡಿದ್ರೆ ಎಚ್ಚರ..ಎಚ್ಚರ..ಎಚ್ಚರ..!'' ಅಂತ ಗುಡುಗಿದರು.
ತಮ್ಮ ನೇರ ಮಾತುಗಳಿಂದ ಡಬ್ಬಿಂಗ್ ಪರ ವಾದ ಮಾಡುತ್ತಿರುವವರಿಗೆ ಬಿಸಿ ಮುಟ್ಟಿಸಿದ ವಾಟಾಳ್ ನಾಗರಾಜ್, ಕನ್ನಡ ಚಿತ್ರರಂಗದ ಗಣ್ಯರ ನೇತೃತ್ವದಲ್ಲಿ ಆಗಸ್ಟ್ 26 ರಂದು ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ನಡೆಸಿ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.


Click it and Unblock the Notifications











