‘ಯಾರಿಗೆ ಬೇಡ ದುಡ್ಡು ’ ದಿಢೀರ್ ಬಿಡುಗಡೆ
ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.. ಈ ಹೊಟ್ಟೆ ಬಟ್ಟೆ ತುಂಬಿಕೊಳ್ಳಲು ದುಡ್ಡೇ ಮುಖ್ಯ. ದುಡ್ಡಿಲ್ಲದೆ ಏನೂ ಇಲ್ಲ. ದುಡ್ಡು ಇದ್ರೆ, ಜಗವೆಲ್ಲಾ, ದುಡ್ಡು ಇಲ್ದೆ ಜಗವಿಲ್ಲ, ದುಡ್ಡಿನ್ಮುಂದೆ ಜಗದಲ್ಲಿ ಬೇರೇ ದೇವ್ರೆ ಇಲ್ಲವಲ್ಲ, ಈ ಮಾತು ಸುಳ್ಳಲ್ಲವೋ.. ಎಂಬ ಗೀತೆಯನ್ನೂ ನೀವು ಕೇಳಿರಬಹುದು.
ದುಡ್ಡು ಯಾರಿಗೆ ಬೇಡ ಹೇಳಿ. ಈ ವಾರ ಅಂದರೆ ಮಾರ್ಚ್ 30ರ ಶುಕ್ರವಾರ ತೆರೆಕಂಡ ಕನ್ನಡ ಚಿತ್ರದ ಹೆಸರೂ ಇದೆ. 'ಯಾರಿಗೆ ಬೇಡ ದುಡ್ಡು". ಮೂವರು ವಿದ್ಯಾವಂತ ಯುವಕರು ದುಡ್ಡು ಮಾಡಲು ಪಡುವ ಪಡಿಪಾಟುಲುಗಳೇ ಚಿತ್ರದ ಕಥಾ ವಸ್ತು. ದುಡ್ಡಿಗಾಗಿ ಇವರು ಮಾಡುವ ಸಾಹಸ, ಮನರಂಜನೀಯ ಚಿತ್ರವಾಗಿ ಹೊರಹೊಮ್ಮಿದೆ.
ಡಿ. ಸುರೇಶ್ ಗೌಡ್ರು, ಬಿ.ವಿ. ಚಕ್ರಪಾಣಿ ಅರ್ಪಿಸಿ, ಕೆ. ಬಾಬು - ಎ.ಎನ್.ಎಸ್. ಗುಪ್ತ ನಿರ್ಮಿಸಿ, ಗುರುಪ್ರಸಾದ್ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಛಾಯಾಗ್ರಾಹಕರು ಆರ್. ಗಿರಿ. ಅನಂತು ಅವರ ಸಂಭಾಷಣೆಯೂ ಚಿತ್ರಕ್ಕಿದೆ.
ಕೃಪಾಕರ್ ಎಂಬ ಯುವ ಸಂಗೀತ ನಿರ್ದೇಶಕ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲ್ಪಡುತ್ತಿದ್ದಾರೆ. ಐ.ಎ.ಎಸ್. ಅಧಿಕಾರಿ ಕೆ. ಶಿವರಾಂ, ಅಭಿಜಿತ್, ಟೆನ್ನಿಸ್ಕೃಷ್ಣ, ಅರ್ಚನಾ, ಅಖಿಲ, ರೇಖಾದಾಸ್, ದ್ವಾರಕೀಶ್, ಆಶಾಲತಾ, ಬ್ಯಾಂಕ್ ಜನಾರ್ದನ್, ರಕ್ಷ, ಉಮೇಶ್, ಡಿಂಗ್ರಿ ನಾಗರಾಜ್, ನಾಗೇಶ್, ಮನದೀಪ್ ರಾಯ್, ಪಿಂಕಿ ಮೊದಲಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ಮುನ್ಸೂಚನೆ ನೀಡದೆ, ಚಿತ್ರ ಈ ಶುಕ್ರವಾರ ಬೆಂಗಳೂರಿನ ಕಲ್ಪನಾ, ಗೀತಾಂಜಲಿ, ಉಲ್ಲಾಸ್, ಮಾರುತಿ, ನಂದಿನಿ (ದಿನ ಮೂರು ಆಟ), ಬೆಳಗಿನ ಪ್ರದರ್ಶನ - ಕಲ್ಪನ, ಪ್ರಮೋದ್, ನಳಂದ, ಪುಟ್ಟಣ್ಣ, ಈಶ್ವರಿ, ಸಿದ್ದಲಿಂಗೇಶ್ವರ ಚಿತ್ರಮಂದಿರಗಳಲ್ಲಿ ದಿಢೀರ್ ಬಿಡುಗಡೆ ಆಗಿದೆ.


Click it and Unblock the Notifications