ವಿವೇಕಾನಂದ ಪಾರ್ಕ್ಗೆ ದಾಳಿ ಇಟ್ಟ ‘ದುಂಬಿ’ಗಳ ದಂಡು
ಬೆಂಗಳೂರಿನ ಗಿರಿನಗರದಲ್ಲೊಂದು ಸುಂದರವಾದ ಕಾರಂಜಿ ಪಾರ್ಕ್ ಇದೆ. ಕಾರಂಜಿಯ ಮಧ್ಯೆ ಕೆಂಪು ಗ್ರಾನೈಟ್ ಶಿಲೆಯ ಸ್ವಾಮಿ ವಿವೇಕಾನಂದರ ಎತ್ತರದ ಮೂರ್ತಿಯೂ ಇದೆ. ಹೀಗಾಗಿ ಈ ಉದ್ಯಾನಕ್ಕೆ ವಿವೇಕಾನಂದ ಪಾರ್ಕ್ ಎಂದೇ ಹೆಸರು. ಮನಮೋಹಕವಾಗಿ ಬೆಳೆದ ಹೂ ಗಿಡಗಳೂ ಇಲ್ಲವೆ. ಮೊನ್ನೆ ಬೆಳಬೆಳಗ್ಗೆ ಈ ಪಾರ್ಕ್ಗೆ ದುಂಬಿಗಳು ದಾಳಿ ಇಟ್ಟಿದ್ದವು. ಹಾರಾಡದೆ ಕಾರಿನ ಮೇಲೇರಿ ಕುಳಿತಿದ್ದ ಈ ದುಂಬಿಗಳ ನೋಡಲು ನೂರಾರು ಜನರೂ ಸೇರಿದ್ದರು. ದುಂಬಿಗಳ ಮಧ್ಯೆ ಹಂಸಲೇಖರೂ ಪ್ರತ್ಯಕ್ಷರಾದರು. ಈಗ ಗೊತ್ತಾಯಿತಲ್ಲ ಇದು 'ದುಂಬಿ" ಎಂಬೆಸರಿನ ಕನ್ನಡ ಚಿತ್ರದ ಮೂಹರ್ತದ ವಿಶೇಷ.
'ದಂಡಪಿಂಡಗಳು" ಮೆಗಾ ಧಾರಾವಾಹಿಯಲ್ಲಿ ಐವರು ನಾಯಕರ ಪೈಕಿ ಒಬ್ಬರಾಗಿದ್ದ ಆದರ್ಶ ಈ ಹೊತ್ತು ಕಥೆ-ಚಿತ್ರಕತೆ-ಸಂಭಾಷಣೆ ಬರೆದು ನಾಯಕನಾಗಿ ನಟಿಸುತ್ತಾ, ಚಿತ್ರ ನಿರ್ದೇಶಿಸುವುದರೊಂದಿಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.
'ಯಶಸ್ಸು ಅಂದರೆ ಸಕ್ಸಸ್, ಸಕ್ಸಸ್ ಅಂದರೆ ಯಶಸ್ಸು . ಭಂಡ ಧೈರ್ಯವೇ ನನ್ನ ಬಂಡವಾಳ! ನಾನು ಗೆದ್ದೇ ಗೆಲ್ಲುತ್ತೇನೆ" ಎಂದು ಆದರ್ಶ ತನ್ನ ಗೆಳೆಯರಿಗೆ ಸವಾಲು ಹಾಕುವ ಪ್ರಥಮ ದೃಶ್ಯಕ್ಕೆ ಆರ್. ಸುಬ್ರಮಣಿ ಕ್ಲಾಪ್ ಮಾಡಿದರೆ, ಚಿತ್ರೋದ್ಯಮಿ ಶೈಲೇಂದ್ರ ಬಾಬು ಕ್ಯಾಮರಾ ಚಾಲೂ ಮಾಡಿದರು.
ಚಿತ್ರ ನಿರ್ಮಿಸುವ ಭಂಡ ಧೈರ್ಯಕ್ಕೆ ಕೈ ಹಾಕಿರುವ ಆದರ್ಶ ತಾವು ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಲ್ಲಿ ಅದೇ ಡೈಲಾಗ್ಗಳನ್ನು ಆತ್ಮವಿಶ್ವಾಸದಿಂದ ಹೇಳಿದರು. ಮುತ್ಯಾಲಮ್ಮ ಸಿನಿ ಇಂಟರ್ ನ್ಯಾಷನಲ್ ಅವರ ಚೊಚ್ಚಲ ಕಾಣಿಕೆಯಾದ 'ದುಂಬಿ" ಚಿತ್ರವನ್ನು ಡಾ. ಸುಬ್ರಮಣಿ ಅರ್ಪಿಸುತ್ತಿದ್ದರೆ, ಮೈಸೂರು ವಿ.ವಿಯಲ್ಲಿ ಚಿತ್ರ ನಿರ್ದೇಶನದ ಕೋರ್ಸ್ ಮುಗಿಸಿ, ರಾಜೇಂದ್ರಸಿಂಗ್ (ಬಾಬು) ಅವರ ಕೈಕೆಳಗೆ ಸಹಾಯಕನಾಗಿ ಕಾರ್ಯ ನಿರ್ವಹಿಸಿರುವ ಆದರ್ಶ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ.
ಫಣಿ ರಾಮಚಂದ್ರರ 'ದಂಡಪಿಂಡ"ಗಳು ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಕಾಮಿಡಿ ಚಿತ್ರ ಮಾಡಿದರೆ, ಗೆದ್ದೇ ಗೆಲ್ಲತ್ತೆ ಎಂಬ ಲಾಜಿಕ್ ಹಿಡಿದು 'ದುಂಬಿ" ಎಂಬ ಕಾಮಿಡಿ ಚಿತ್ರ ಮಾಡುವ ಸಾಹಸಕ್ಕೆ ಆದರ್ಶ ಕೈಹಾಕಿದ್ದಾರೆ. ನವ ನಾಯಕರ ಶಕೆ ಆರಂಭವಾಗಿರುವ ಕನ್ನಡದಲ್ಲಿ ಆದರ್ಶ ಗೆಲ್ಲುತ್ತಾರೆಯೇ ಕಾದು ನೋಡಬೇಕು.
ಈ ಚಿತ್ರದಲ್ಲಿ ದಂಡಪಿಂಡಗಳಲ್ಲಿ ನಟಿಸಿದ ಎಲ್ಲ ನಾಯಕರೂ ಪಾತ್ರವಹಿಸುತ್ತಿದ್ದಾರೆ. ಮಿಗಿಲಾಗಿ ಫಣಿ ರಾಮಚಂದ್ರಕೂಡ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಗೆಸ್ಟ್ ಅಪಿಯರೆನ್ಸ್ ನೀಡಲಿದ್ದಾರೆ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ಸಂಯೋಜಿಸಿದ್ದು, ಮೂವರು ನಾಯಕಿಯರು ಇದ್ದಾರೆ. ಈ ಪೈಕಿ 'ನಟ" ಖ್ಯಾತಿಯ ರಶ್ಮಿ ಒಬ್ಬರು. ಇನ್ನಿಬ್ಬರು ನಾಯಕಿಯರ ಶೋಧ ನಡೆಯುತ್ತಿದೆ.


Click it and Unblock the Notifications