ಎದುರು-ಬದುರಾದ ದುನಿಯಾ ವಿಜಯ್-ಕಿಚ್ಚ ಸುದೀಪ್: ಹಿಂದೆ ಸರಿಯುವುದು ಯಾರು?
ಕರ್ನಾಟಕ ರಾಜ್ಯ ಸರ್ಕಾರವು ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯಬಹುದು ಎಂದು ಆದೇಶ ನೀಡುತ್ತಿದ್ದಂತೆ, ಕನ್ನಡ ಚಿತ್ರರಂಗ ಮತ್ತೆ ಗರಿಗೆದರಿದ್ದು, ಒಂದೊಂದಾಗಿ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದೆ.
Recommended Video
ಮೊದಲಿಗೆ 'ಭಜರಂಗಿ 2' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದ್ದು, ಸಿನಿಮಾವು ಅಕ್ಟೋಬರ್ 29ಕ್ಕೆ ತೆರೆಗೆ ಬರಲಿದೆ. 'ಭಜರಂಗಿ 2' ಸಿನಿಮಾದ ಬಿಡುಗಡೆ ಬಳಿಕ 'ಸಲಗ' ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿ 'ಭಜರಂಗಿ 2'ಗಿಂತಲೂ ಮೊದಲೇ 'ಸಲಗ' ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಸಲಗ' ಸಿನಿಮಾವು ದಸರಾ ಹಬ್ಬದಂದು (ಅಕ್ಟೋಬರ್ 14) ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕ ಘೊಷಣೆ ಬೆನ್ನಲ್ಲೆ ಸಮಸ್ಯೆಯೊಂದು ಎದುರಾಗಿದೆ. ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗುತ್ತಿದೆ. ಇದು ಎರಡೂ ಸಿನಿಮಾಗಳಿಗೆ ಸಂಕಷ್ಟ ತಂದಿಟ್ಟಿದೆ.
ದುನಿಯಾ ವಿಜಯ್ ಹಾಗೂ ಸುದೀಪ್ ಇಬ್ಬರಿಗೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದರಿಂದ ಸ್ಟಾರ್ ವಾರ್ ಗ್ಯಾರೆಂಟಿ ಎನ್ನಲಾಗುತ್ತಿದೆ. ಆದರೆ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವುದರಿಂದ ನಿರ್ಮಾಪಕರಿಗೆ ಕಷ್ಟವಾಗುತ್ತದೆ ಎಂದು ಈಗಾಗಲೇ ಎರಡೂ ಸಿನಿಮಾಗಳ ಚಿತ್ರತಂಡದ ನಡುವೆ ಸಂಧಾನ ಮಾತುಕತೆಗಳು ಆರಂಭವಾಗಿವೆ.

ಟ್ವೀಟ್ ಮಾಡಿರುವ ನಟ ಸುದೀಪ್
'ಸಲಗ' ಸಿನಿಮಾದ ನಿರ್ಮಾಪಕ ಸುದೀಪ್ಗೆ ಗೆಳೆಯರೇ ಆಗಿದ್ದು, ಸಿನಿಮಾದ ಬಿಡುಗಡೆ ಕುರಿತಂತೆ ಮಾತುಕತೆ ಮಾಡಲು ನಾಳೆಯೇ ಸುದೀಪ್ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಅದರ ಬೆನ್ನಲ್ಲೆ ನಟ ಸುದೀಪ್ ಸಹ ಟ್ವೀಟ್ ಮಾಡಿ 'ಸಲಗ' ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ನಟ ದುನಿಯಾ ವಿಜಯ್ಗೆ ಶುಭ ಹಾರೈಸಿದ್ದಾರೆ.

''ಬಿಡುಗಡೆ ದಿನಾಂಕವನ್ನು ಹೀರೋಗಳು ನಿರ್ಣಯ ಮಾಡಲ್ಲ''
ನಟ ದುನಿಯಾ ವಿಜಯ್ ಸಹ ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿದ್ದು, ''ಸಿನಿಮಾ ಬಿಡುಗಡೆ ದಿನಾಂಕವನ್ನು ಮಾರುಕಟ್ಟೆ ಆಧರಿಸಿ ನಿರ್ಮಾಪಕರು ನಿಶ್ಚಯ ಮಾಡುತ್ತಾರೆ. ಅದರಲ್ಲಿ ಹೀರೋಗಳ ಪಾತ್ರ ಏನೂ ಇರುವುದಿಲ್ಲ. ನಾನು, ಸುದೀಪ್ ಚೆನ್ನಾಗಿಯೇ ಇದ್ದೇವೆ, ಚೆನ್ನಾಗಿಯೇ ಇರ್ತೇವೆ'' ಎಂದಿದ್ದಾರೆ.

ಏನೇ ತಂದಿಟ್ರೂ ನಾವು ಚೆನ್ನಾಗಿಯೇ ಇರ್ತೀವಿ: ವಿಜಯ್
''ದಸರಾ ಹಬ್ಬದ ಸಮಯದಲ್ಲಿ ಪ್ರೇಕ್ಷಕರು ಎರಡೂ ಸಿನಿಮಾವನ್ನು ಎಂಜಾಯ್ ಮಾಡಲಿ ಎಂಬುದು ನನ್ನ ಆಸೆ. ಮೊದಲು ಸ್ಟಾರ್ ವಾರ್ ಅಂತ ಜನ ಮಾತನಾಡುತ್ತಿದ್ದರು. ಅದೆಲ್ಲ ಬೇಡ. ಅದನ್ನು ಬಿಟ್ಟು ಎಲ್ಲರೂ ಸಿನಿಮಾ ನೋಡಲಿ. ನನಗೆ ಖಂಡಿತಾ ವೈಮನಸ್ಸು ಬರುವುದಿಲ್ಲ. ಸುದೀಪ್ ಅವರು ನನಗಿಂತ ಮೊದಲೇ ಚಿತ್ರರಂಗದಲ್ಲಿ ಇರುವವರು. ಅವರು ದೊಡ್ಡ ಹೀರೋ. ಅವರು ಕೂಡ ಪಾಸಿಟಿವ್ ಆಗಿ ಆಲೋಚನೆ ಮಾಡುತ್ತಾರೆ. ಯಾರು ಏನೇ ತಂದಿಟ್ರೂ ನಾವು ಚಿತ್ರರಂಗದವರು ಚೆನ್ನಾಗಿಯೇ ಇರುತ್ತೇವೆ'' ಎಂದಿದ್ದಾರೆ ದುನಿಯಾ ವಿಜಯ್.

ಮೊದಲ ನಿರ್ದೇಶನದ ಸಿನಿಮಾ 'ಸಲಗ'
'ಸಲಗ' ಸಿನಿಮಾವು ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಸಿನಿಮಾ ಆಗಿದ್ದು, ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಕೆ.ಪಿ.ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

ಒಟಿಟಿ ಆಫರ್ ತಿರಸ್ಕರಿಸಿರುವ ಸೂರಪ್ಪ ಬಾಬು
ಇನ್ನು ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಸಹ ಹಲವು ತಿಂಗಳಿನಿಂದ ಬಿಡುಗಡೆಗಾಗಿ ಕಾಯುತ್ತಿರುವ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸುದೀಪ್ ಎದುರು ನಾಯಕಿಯಾಗಿ ಮೆಡೊನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್ ನಟಿಸಿದ್ದಾರೆ. ಖಳನಟರ ಪಾತ್ರದಲ್ಲಿ ರವಿಶಂಕರ್, ಅಫ್ತಾಬ್ ಶಿವದಾಸನಿ, ನವಬ್ ಶಾ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಶಿವ ಕಾರ್ತಿಕ್, ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸೂರಪ್ಪ ಬಾಬು. ಈ ಸಿನಿಮಾಕ್ಕೆ ಹಲವು ಒಟಿಟಿಗಳಿಂದ ದೊಡ್ಡ ಆಫರ್ಗಳು ಬಂದವು ಆದರೆ ಸೂರಪ್ಪ ಬಾಬು ಅವರು ಸಿನಿಮಾವನ್ನು ಮಾರಾಟ ಮಾಡಲಿಲ್ಲ.


Click it and Unblock the Notifications











