Exclusive: ಮುಂದಿನ ತಿಂಗಳು ಸೂರಿ 'ಕಾಗೆ ಬಂಗಾರ'ಕ್ಕೆ ಮುಹೂರ್ತ; ಇವ್ರೇ ನೋಡಿ ನಾಯಕ- ನಾಯಕಿ
ದುನಿಯಾ ಸೂರಿ ಬಹಳ ದಿನಗಳಿಂದ 'ಕಾಗೆ ಬಂಗಾರ' ಎನ್ನುವ ಸಿನಿಮಾ ಮಾಡುವುದಾಗಿ ಹೇಳುತ್ತಾ ಬಂದಿದ್ದರು. ಕೊನೆಗೂ ಆ ಸಿನಿಮಾ ಸೆಟ್ಟೇರುವ ಸಮಯ ಹತ್ತಿರ ಬಂದಿದೆ. ಇದೀಗ ನಾಯಕ, ನಾಯಕಿ ಆಯ್ಕೆ ಕೂಡ ನಡೆದಿದೆ. ನಿರ್ಮಾಪಕರು ಸಿಕ್ಕಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ಸೂರಿ ಅಭಿಮಾನಿಗಳು ಬಹಳ ವರ್ಷಗಳಿಂದ ಕಾಯುತ್ತಿರುವ ಸಿನಿಮಾ ಇದು. ಅವರು ಎಲ್ಲೋ ಹೋದರೂ ಈ ಸಿನಿಮಾ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಕಳೆದ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಮೂಲಕ ಸೂರಿ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಅಭಿಷೇಕ್ ಅಂಬರೀಶ್ ನಟನೆಯ ಸಿನಿಮಾ ಬಾಕ್ಸ್ಫೀಸ್ನಲ್ಲಿ ಮುಗ್ಗರಿಸಿತ್ತು. ಹಾಗಾಗಿ ಕೊನೆಗೆ ಆ ಅಸ್ತ್ರವನ್ನೇ ಪ್ರಯೋಗಿಸಲು ನಿರ್ದೇಶಕರು ಮುಂದಾಗಿದ್ದಾರೆ.

9 ವರ್ಷಗಳ ಹಿಂದೆ ಸೂರಿ 'ಕೆಂಡಸಂಪಿಗೆ' ಸಿನಿಮಾ ಮಾಡಿ ಗೆದ್ದಿದ್ದರು. ಈ ಚಿತ್ರದ ಪ್ರೀಕ್ವೆಲ್ ಹಾಗೂ ಸೀಕ್ವೆಲ್ ಮಾಡುವುದಾಗಿ ಕೂಡ ಹೇಳಿದ್ದರು. ಪ್ರೀಕ್ವೆಲ್ ಕಥೆಗೆ 'ಕಾಗೆ ಬಂಗಾರ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದರು. ಸೀಕ್ವೆಲ್ ಅನ್ನು 'ಬ್ಲ್ಯಾಕ್ ಮ್ಯಾಜಿಕ್' ಹೆಸರಿನಲ್ಲಿ ಕಟ್ಟಿಕೊಡುವುದಾಗಿ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ 'ಕಾಗೆ ಬಂಗಾರ' ತಡವಾಗಿತ್ತು. ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲಿ ಇದೀಗ ಸಿನಿಮಾ ಶುರುವಾಗುತ್ತಿದೆ.
ಯುವ ನಟ ವಿರಾಟ್ ಜೊತೆ ದುನಿಯಾ ಸೂರಿ ಚಿತ್ರವೊಂದನ್ನು ಘೋಷಿಸಿದ್ದರು. ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲೇ ಈ ಸಿನಿಮಾ ಬರುತ್ತದೆ ಎಂದಿದ್ದರು. ಈ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶಿವಣ್ಣ ಗೆಸ್ಟ್ ಅಪಿಯರೆನ್ಸ್ ಮಾಡುವುದಾಗಿ ಗುಸುಗುಸು ಕೇಳಿಬಂದಿತ್ತು. ಆದರೆ ಅದನ್ನು ಪಕ್ಕಕ್ಕಿಟ್ಟು ಈಗ 'ಕಾಗೆ ಬಂಗಾರ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿರಾಟ್ ಹೀರೊ ಆಗಿ ನಟಿಸಲಿದ್ದಾರೆ. ನಟ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.

'ಕಾಗೆ ಬಂಗಾರ' ಸಿನಿಮಾ ಆರಂಭಿಸುವ ಬಗ್ಗೆ ನಿರ್ಮಾಪಕರಾ ಜಯಣ್ಣ ಫಿಲ್ಮಿಬೀಟ್ಗೆ ಮಾಹಿತಿ ನೀಡಿದ್ದಾರೆ. "ಹೌದು. ಮುಂದಿನ ತಿಂಗಳ ಕೊನೆಗೆ 'ಕಾಗೆ ಬಂಗಾರ' ಸಿನಿಮಾ ಸೆಟ್ಟೇರಲಿದೆ. ವಿರಾಟ್ ಹಾಗೂ ರಿತನ್ಯಾ ನಾಯಕ-ನಾಯಕಿ ಆಗಿ ನಟಿಸುವುದು ಖಚಿತ. ಇನ್ನುಳಿದ ಮಾಹಿತಿ ಮುಂದಿನ ದಿನಗಳಲ್ಲಿ ನೀಡುತ್ತೇವೆ" ಎಂದು ಹೇಳಿದ್ದಾರೆ.
ಈ ಹಿಂದೆ 'ಕಾಗೆ ಬಂಗಾರ' ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳು ಕೇಳಿಬಂದಿತ್ತು. 2017ರಲ್ಲೇ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಪದೇ ಪದೆ ತಡವಾಯಿತು. ಇದೀಗ ಆ ಚಿತ್ರಕ್ಕೆ ಕಾಲ ಕೂಡಿ ಬಂದಿದೆ. ಜಡೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ಅವರ ಮಗಳು ರಿತನ್ಯಾ ಕೂಡ ಬಣ್ಣ ಹಚ್ಚುತ್ತಿದ್ದಾರೆ. 'ಡೇರ್ ಡೆವಿಲ್ ಮುಸ್ತಫಾ' ಚಿತ್ರದಲ್ಲಿ ನಟಿಸಿದ್ದ ಶಿಶಿರ್ ಈ ಚಿತ್ರದಲ್ಲಿ ರಿತನ್ಯಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮತ್ತೊಂದು ಕಡೆ ವಿರಾಟ್ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡ ಬ್ರೇಕ್ ಸಿಗಲಿಲ್ಲ. ಸದ್ಯ ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್ನಲ್ಲೇ ಈ ಸಿನಿಮಾ ಕೂಡ ನಿರ್ಮಾಣವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಮುಕ್ತಾಯವಾಗಿದ್ದು ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ. 'ಕಾಗೆ ಬಂಗಾರ' ಚಿತ್ರದಲ್ಲಿ ಸೂರಿ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ಸೆಟ್ಟೇರುವ ಮುನ್ನವೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡುತ್ತಿದೆ.


Click it and Unblock the Notifications









