40 ರುಪಾಯಿಯಲ್ಲಿ 'ಸಲಗ' ಸಿನಿಮಾ ಆಯ್ತು: ದುನಿಯಾ ವಿಜಯ್ ಕಣ್ಣೀರು
ನಟ ದುನಿಯಾ ವಿಜಯ್ ನಟಿಸಿ ಮೊದಲ ಬಾರಿಗೆ ನಿರ್ದೇಶನ ಮಾಡಿದ 'ಸಲಗ' ಸಿನಿಮಾ ಕಳೆದ ಅಕ್ಟೋಬರ್ 14ಕ್ಕೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು.
'ಸಲಗ' ಸಿನಿಮಾ ಬಗ್ಗೆ ದುನಿಯಾ ವಿಜಯ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. 'ಸಲಗ' ತಮ್ಮ ಪಾಲಿಗೆ ಜೀವನ್ಮರಣ ಸಿನಿಮಾ ಎಂದೇ ದುನಿಯಾ ವಿಜಯ್ ಭಾವಿಸಿದ್ದರು. ಕೊನೆಗೂ ಸಿನಿಮಾ ಹಿಟ್ ಆಗಿದೆ. ನಿನ್ನೆ 'ಸಲಗ' ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಭಾವುಕರಾಗಿ ಮಾತನಾಡಿದರು.
Recommended Video
ವೇದಿಕೆ ಮೇಲೆ ಕಣ್ಣೀರು ಹಾಕುತ್ತಲೇ ಮಾತನಾಡಿದ ದುನಿಯಾ ವಿಜಯ್, 'ದೇವರಾಣೆ ಸತ್ಯ ಹೇಳುತ್ತೇನೆ. 'ಸಲಗ' ಸಿನಿಮಾ ನಿರ್ಮಾಣ ಮಾಡುವಂತೆ ಕೆ.ಪಿ.ಶ್ರೀಕಾಂತ್ ಅನ್ನು ಕೇಳಲು ಹೋದಾಗ ನನ್ನ ಬಳಿ ಕೇವಲ 40 ರುಪಾಯಿ ಇತ್ತಷ್ಟೆ'' ಎಂದಿದ್ದಾರೆ.
''ನಿರ್ಮಾಪಕ ಶ್ರೀಕಾಂತ್ ಅವರನ್ನು ಹುಡುಕಿಕೊಂಡು ಹೋಗಿ ನಮ್ಮ ಸಿನಿಮಾವನ್ನು ನಿರ್ಮಾಣ ಮಾಡಿ ಎಂದು ಕೇಳಿಕೊಂಡೆ. ನನ್ನ ಜೇಬಿನಲ್ಲಿ ಅಂದು ಕೇವಲ 40 ರುಪಾಯಿ ಹಣವಿತ್ತಷ್ಟೆ. ಆ 40 ರುಪಾಯಿಯನ್ನು ಫೋಟೊ ತೆಗೆದು ಫ್ರೇಂ ಮಾಡಿ ಇಟ್ಟುಕೊಂಡಿದ್ದೇನೆ. ಈ ವಿಷಯ ಹೆಚ್ಚು ಜನರಿಗೆ ಗೊತ್ತಿಲ್ಲ. ಸಾಮ್ರಾಟ್, ಕೀರ್ತಿ, ಮೊಹಮ್ಮದ್ ಹಾಗೂ ನನಗೆ ಅಷ್ಟೆ ಈ ವಿಷಯ ಗೊತ್ತು. ಆ ನಲವತ್ತು ರುಪಾಯಿಯಿಂದಲೇ 'ಸಲಗ' ಸಿನಿಮಾ ಆಯ್ತು'' ಎಂದು ಭಾವುಕರಾದರು ನಟ ದುನಿಯಾ ವಿಜಯ್.

''ಇನ್ನೂ ಸಾಕಷ್ಟು ಕೆಲಸ ಮಾಡಬೇಕು ಅದಕ್ಕೆ ಎಲ್ಲೆ ಆಶೀರ್ವಾದ ಬೇಕು. ಶಿವಣ್ಣನ ಆಶೀರ್ವಾದ ಸದಾ ಇರಬೇಕು. ಕೆ.ಪಿ.ಶ್ರೀಕಾಂತ್ ಬೆಂಬಲವೂ ಬೇಕು. ಕೆ.ಪಿ.ಶ್ರೀಕಾಂತ್ ಅವರು ನನಗೆ ಪುನರ್ಜನ್ಮ ಕೊಟ್ಟಂಥಹಾ ವ್ಯಕ್ತಿ. ನಿಮ್ಮ ಸಂಸ್ಥೆಗೆ ಯಾವಾಗ ಕೆಲಸ ಮಾಡಬೇಕು ಹೇಳಿ ಬಂದು ಕೆಲಸ ಮಾಡುತ್ತೇನೆ. ಮುಳುಗುತ್ತಿದ್ದ ನನ್ನನ್ನು ಕಾಪಾಡಿದವರು ನೀವು'' ಎಂದು ಹೊಗಳಿದರು ದುನಿಯಾ ವಿಜಯ್.
''ಅಮ್ಮ ತೀರಿಕೊಳ್ಳುವ ಮೊದಲು ಪತ್ನಿ ಕೀರ್ತಿಗೆ ಹೇಳಿದ್ದರು, ಮನೆಯಲ್ಲಿ ಶಿವಲಿಂಗ ಇದೆ ಅದಕ್ಕೆ ಪೂಜೆ ಮಾಡುತ್ತಾ ಇರು, ಮತ್ತೆ ಒಳ್ಳೆಯದಾಗುತ್ತೆ ಎಂದು. ಅಂತೆಯೇ ಎಲ್ಲ ಒಳ್ಳೆಯದಾಯ್ತು. ನಾನು ಮತ್ತೆ ಕೆಲಸಕ್ಕೆ ಹೋಗುವಂತಾಯ್ತು. ಈ ಯಶಸ್ಸನ್ನು ನಾನು ನನ್ನ ಅಪ್ಪ-ಅಪ್ಪ-ಅಪ್ಪು ಹಾಗೂ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಎರಡು ವರ್ಷದಿಂದ ನಾನು ಬಹಳ ಕಷ್ಟದಲ್ಲಿದ್ದೆ. ಎಲ್ಲೂ ಮಾತನಾಡಿರಲಿಲ್ಲ. ಈಗ ಮಾತನಾಡುವ ಸಮಯ ಬಂದಿದೆ. ಇನ್ನೂ ಸಾಕಷ್ಟು ಜನರಿಗೆ ನಾನು ಹೃದಯಪೂರ್ವಕ ಧನ್ಯವಾದ ಹೇಳಬೇಕು. ಮುಂದಿನ ದಿನಗಳಲ್ಲಿ ನಾನು ಇನ್ನಷ್ಟು ಮಾತನಾಡಲಿದ್ದೇನೆ'' ಎಂದರು ದುನಿಯಾ ವಿಜಯ್.


Click it and Unblock the Notifications











