ಜಗ್ಗೇಶ್ ಜತೆ ನಟಿಸುವಾಸೆ ಎಂದ ದುನಿಯಾ ವಿಜಯ್
ಜಗ್ಗೇಶ್ ಈಗ ಕೂಲ್ ಗಣೇಶ ಆಗುತ್ತಿದ್ದಾರೆ. ಕನ್ನಡದ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚಿಗೆ 'ಕೂಲ್' ಆಗಿರುವುದು ಎಲ್ಲರಿಗೂ ಗೊತ್ತು. ಇದೇನು ಜಗ್ಗೇಶ್ ಕೂಲ್ ಗಣೇಶ ಎಂದು ತಲೆಕೆಡಿಸಿಕೊಳ್ಳಬೇಕು. ಇದು ಜಗ್ಗೇಶ್ ಅವರ ಬರಲಿರುವ ಚಿತ್ರದ ಹೆಸರು. ಈ ಹೆಸರಿನ ಚಿತ್ರ ಮುಹೂರ್ತ ಗುರುವಾರ (ಮೇ 31, 2012) ಬೆಂಗಳೂರಿನ ರಾಘವೆಂದ್ರಸ್ವಾಮಿ ಮಠದಲ್ಲಿ ನಡೆಯಿತು.
ರೆಬೆಲ್ ಸ್ಟಾರ್ ಅಂಬರೀಷ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್ ಜತೆ ನಟಿಸಿರುವ ನವರಸ ನಾಯಕ ಜಗ್ಗೇಶ್, ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಕೂಡ ನಟಿಸಲಿರುವುದು ಪಕ್ಕಾ ಆಗಿದೆ. ಈ ಮಧ್ಯೆ ನಟ ದುನಿಯಾ ವಿಜಯ್ ಅವರಿಗೆ ಜಗ್ಗೇಶ್ ಜತೆ ನಟಿಸುವ ಆಸೆ ಆಗಿದೆಯಂತೆ.
ಇದನ್ನವರು ಬಹರಂಗಗೊಳಿಸಿದ್ದು 'ಕೂಲ್ ಗಣೇಶ' ಇತ್ರದ ಮುಹೂರ್ತ ಸಮಾರಂಭದಲ್ಲಿ. ಅಷ್ಟೇ ಅಲ್ಲ, ಜಗ್ಗೇಶ್ರನ್ನು ಕರ್ನಾಟಕದ 'ಚಾರ್ಲಿ ಚಾಪ್ಲಿನ್' ಎಂದು ಹೊಗಳಿದ ದುನಿಯಾ ವಿಜಯ್, "ನಾನು ಅವರ ದೊಡ್ಡ ಅಭಿಮಾನಿ" ಎಂದರು.
"ಕನ್ನಡದ ನಮ್ಮ ನವರಸ ನಾಯಕ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಸದ್ಯದಲ್ಲೇ ನಟಿಸಲಿದ್ದಾರೆ. ನನಗೂ ಆಸೆಯಿದೆ. ಸೂಕ್ತ ಕಥೆಗಾಗಿ ನಾನೂ ಪ್ರಯತ್ನಿಸುತ್ತಿದ್ದೇನೆ. ಮುಂದೊಂದು ದಿನ ಜಗ್ಗೇಶ್ ಜತೆ ಅಭಿನಯಿಸುವ ಅವಕಾಶ ನನಗೆ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಿದೆ" ಎಂದ್ದಿದ್ದಾರೆ ವಿಜಿ.
ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿ-ಗತಿಯ ಬಗ್ಗೆ ಗಂಭೀರವಾಗಿ ಮಾತನಾಡಿದ ಜಗ್ಗೇಶ್, ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು. ನಮ್ಮದೇ ನೆಲ ಚಿತ್ರದುರ್ಗದಂತಹ ಸ್ಥಳಗಳಲ್ಲಿ ಕನ್ನಡ ಚಿತ್ರಗಳು ಎರಡು ವಾರ ತಡವಾಗಿ ಬರಲಿ ಎಂದು ಪರಭಾಷಾ ಚಿತ್ರದ ಪ್ರದರ್ಶನಕ್ಕೆ ಪ್ರೋತ್ಸಾಹಿಸುತ್ತಿರುವ ಸನ್ನಿವೇಶಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಜಗ್ಗೇಶ್ ಮಾತಿಗೆ ದನಿಗೂಡಿಸಿದ ವಿಜಿ, ಇಂತಹ ಸಮಸ್ಯೆಗಳಿಗೆ ನಮ್ಮಲ್ಲೇ ಮದ್ದೂ ಇದೆ. ಇಬ್ಬರು, ಮೂವರು ನಾಯಕರುಗಳು ಸೇರಿ ಒಂದು ದೊಡ್ಡ ಸಿನಿಮಾ ಮಾಡಬೇಕು. ಆಗ ಕನ್ನಡ ಪ್ರೇಕ್ಷಕರನ್ನು ನಾವು ಚಿತ್ರಮಂದಿರಕ್ಕೆ ಸೆಳೆಯಬಹುದು. ಆಗ ನಾವೂ ತೊಡೆ ತಟ್ಟಿ ಪರಭಾಷೆಗಳ ಎದುರು ಸ್ಪರ್ಧೆಗೆ ನಿಲ್ಲಬಹುದು" ಎಂದು ಘೋಷಿಸಿದರು.
ಮುಂದುವರಿದ ದುನಿಯಾ ವಿಜಯ್, ಜಗ್ಗೇಶ್ ಅವರು ತೂಕ ಇಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಅದಕ್ಕೆ ನವರಸನಾಯಕ ಜಗ್ಗೇಶ್ ಸಕಾರಾತ್ಮಕ ಪ್ರತಿಕ್ರಿಯೆ ಬಂತು. ವಿಜಯ್ ಖುಷಿಯಾದರು, ಜಗ್ಗೇಶ್ ತಮ್ಮ ಮುಂದಿರುವ ಸವಾಲಿಗೆ ಕಂಗಾಲಾದರು.
ಅಂದಹಾಗೆ, ಇದೀಗ ಮುಹೂರ್ತವಾದ ಜಗ್ಗೇಶ್ ಚಿತ್ರ 'ಕೂಲ್ ಗಣೇಶ'ನನ್ನು ನಿರ್ದೇಶಿಸುತ್ತಿರುವವರು ವಸಂತ್. ಸುರೇಂದ್ರ ಮತ್ತು ಸುರೇಶ್ ನಿರ್ಮಾಪಕರು. ವಿನಯ್ ಚಂದ್ರ ಸಂಗೀತ ನಿರ್ದೇಶನವಿದೆ. ನಾಯಕಿಯಾಗಿ ಪಾರ್ವತಿ ಆಯ್ಕೆ ಆಗಿದೆ. ಇನ್ನೇನಿದ್ದರೂ ಚಿತ್ರೀಕರಣ, ಬಿಡುಗಡೆ ನಂತರ ದರ್ಶನ್ ಜೊತೆ ಜಗ್ಗೇಶ್ ಅವರ 'ಅಗ್ರಜ' ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











