ಥಿಯೇಟರ್ ಬೀಗ ಮುರಿದ್ರು ಒಳನುಗ್ಗಿದ 'ಭೀಮ'ನ ಫ್ಯಾನ್ಸ್: ಏನಿದು ಪುಂಡಾಟ?
ಸ್ಯಾಂಡಲ್ವುಡ್ನಲ್ಲಿ ಬಹಳ ದಿನಗಳ ಬಳಿಕ ಸ್ಟಾರ್ ಸಿನಿಮಾ ರಿಲೀಸ್ ಆಗಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಭೀಮ'ಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಆದರೆ, ಈ ಸಿನಿಮಾ ರಿಲೀಸ್ಗೂ ಮುನ್ನ ಅವರ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದಾರೆ. ಥಿಯೇಟರ್ ಗೇಟಿನ ಭೀಗ ಮುರಿದು ಒಳಗೆ ನುಗ್ಗಿದ್ದಾರೆ.
'ಭೀಮ' ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ. ಇದಕ್ಕೂ ಮುನ್ನ 'ಸಲಗ' ಸಿನಿಮಾವನ್ನು ನಿರ್ದೇಶಿಸಿ ಗೆದ್ದಿರುವ ವಿಜಯ್ ಈಗ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹೀಗಾಗಿ ದುನಿಯಾ ವಿಜಯ್ ಅಭಿಮಾನಿಗಳು 'ಭೀಮಾ' ನೋಡುವ ತವಕದಲ್ಲಿ ಇದ್ದರು. ತಮಗಾಗಿ ವಿಶೇಷ ಶೋ ಅನ್ನು ಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಚಿತ್ರರಂಗ ರೆಗ್ಯೂಲರ್ ಶೋಗೆ ಮುಂದಾಗಿತ್ತು.

'ಭೀಮ' ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡ ಸ್ಪೆಷಲ್ ಶೋ ಇರುವುದಿಲ್ಲ ಎಂದೇ ಅನೌನ್ಸ್ ಮಾಡಿತ್ತು. ಇದರ ಹೊರತಾಗಿಯೂ ಹೊಸಪೇಟೆಯ ಥಿಯೇಟರ್ ಒಂದರಲ್ಲಿ ಬೆಳ್ಳಂಬೆಳಗ್ಗೆನೇ ಶೋ ಇರುವುದಾಗಿ ಅನೌನ್ಸ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಅಭಿಮಾನಿಗಳು ಬೆಳಗ್ಗೆನೇ ಸಿನಿಮಾ ನೋಡಲು ಬಂದಿದ್ದರು.
ಆದರೆ, ಘೋಷಣೆ ಮಾಡಿದಂತೆ 'ಭೀಮ' ಸಿನಿಮಾ ಪ್ರಸಾರ ಮಾಡಿಲ್ಲ. ಹೀಗಾಗಿ 'ಭೀಮ' ನೋಡಲು ಆಸೆಯಿಂದ ಬಂದಿದ್ದ ದುನಿಯಾ ವಿಜಯ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಥಿಯೇಟರ್ ಮುಂದೆ ಗೇಟ್ಗೆ ಭೀಗ ಹಾಕಿದ್ದನ್ನು ಕಂಡು ಕೆಂಡಾಮಂಡಲವಾಗಿದ್ದಾರೆ. ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ಗೇಟ್ನ ಭೀಗ ಒಡೆದು ಥಿಯೇಟರ್ ಒಳಗೆ ನುಗ್ಗಿದ್ದಾರೆ. ಸದ್ಯ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

'ಭೀಮ' ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಬಹಳ ದಿನಗಳ ಬಳಿಕ ಜನರು ಥಿಯೇಟರ್ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಆದರೆ, ಇದೇ ಕ್ರೇಜ್ ಅನ್ನು ಈ ಸಿನಿಮಾ ಮುಂದುವರೆಸಿಕೊಂಡು ಹೋಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ರಾಜ್ಯದ ಚಿತ್ರಮಂದಿರಗಳು ಸಿಂಗಾರಗೊಂಡಿದ್ದು, ಸಿನಿಮಾ ಮಂದಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟಿದೆ.
'ಭೀಮ' ಸಿನಿಮಾ ಮಾಸ್ ಆಡಿಯನ್ಸ್ ಅನ್ನು ಚಿತ್ರಮಂದಿರಕ್ಕೆ ಸೆಳೆಯುತ್ತೆ ಅನ್ನೋದು ಟೀಸರ್ ರಿಲೀಸ್ ಆದಾಗಲೇ ಗೊತ್ತಿತ್ತು. ಆದರೆ, ದುನಿಯಾ ವಿಜಯ್ ಈ ಸಿನಿಮಾವನ್ನು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡೇ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅದರಲ್ಲೂ ಯುವ ಜನತೆಯನ್ನು ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಯುವಕರ ವ್ಯಸನದ ಬಗ್ಗೆ ಸಂದೇಶ ಸಾರುತ್ತೆ ಈ ಸಿನಿಮಾ ಎಂದಿದ್ದರು.
ಯುವ ಸಮುದಾಯವನ್ನು ಟಾರ್ಗೆಟ್ ಮಾಡಿರುವ 'ಭೀಮ' ಸಿನಿಮಾ ಇಂದು (ಆಗಸ್ಟ್ 9) ರಿಲೀಸ್ ಆಗಿದೆ. ಸುಮಾರು 400ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಇಷ್ಟೇ ಅಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ 'ಭೀಮ' ಸಿನಿಮಾ ರಿಲೀಸ್ ಆಗುತ್ತಿರೋದು ವಿಶೇಷ. ಕೆಆರ್ಜಿ ಸಂಸ್ಥೆ ವಿದೇಶದಲ್ಲಿ ರಿಲೀಸ್ ಮಾಡುತ್ತಿದೆ.


Click it and Unblock the Notifications











