ಕೊರೊನಾ ಗೆದ್ದ ದುನಿಯಾ ವಿಜಯ್ ಪೋಷಕರು: ನಟನಿಗೂ ಸಿಕ್ಕಿಲ್ಲ ಆಸ್ಪತ್ರೆ ಬೆಡ್
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಪೋಷಕರು ಕೊರೊನಾ ಸೋಂಕಿಗೆ ತುತ್ತಾಗಿದ್ದರು ಎಂಬ ವಿಷಯ ತಡವಾಗಿ ತಿಳಿದು ಬಂದಿದೆ. ವಿಜಿ ತಂದೆ ಹಾಗೂ ತಾಯಿ ಇಬ್ಬರಿಗೂ ಕೋವಿಡ್ ಸೋಂಕು ಅಂಟಿಕೊಂಡಿತ್ತು. ವೈದ್ಯರ ಸಲಹೆಯ ಪಡೆದು ಮನೆಯಲ್ಲಿಯೇ ಚಿಕಿತ್ಸೆ ನೀಡಿ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
Recommended Video
ದುನಿಯಾ ವಿಜಯ್ ಪೋಷಕರು ಕೊರೊನಾ ವೈರಸ್ನಿಂದ ಗುಣಮುಖರಾಗಿರುವ ಬಗ್ಗೆ 'ಸಲಗ' ನಿರ್ಮಾಪಕ ಕೆಪಿ ಶ್ರೀಕಾಂತ್ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ''ವಿಜಿ ಸರ್ ನಿಮ್ಮ ಪೋಷಕರ ಕೋವಿಡ್ ಚೇತರಿಕೆಯ ಜರ್ನಿ ಸ್ಫೂರ್ತಿದಾಯಕವಾಗಿದೆ. ಅವರ ಬಗ್ಗೆ ನೀವು ತೋರಿದ ಕಾಳಜಿ ಕೋವಿಡ್ ರೋಗಿಗಳಲ್ಲಿ ಸಕಾರಾತ್ಮಕತೆ ಮೂಡಿಸುವುದರ ಜೊತೆ ಮಾನಸಿಕವಾಗಿ ಬಲಶಾಲಿಯನ್ನಾಗಿಸಲಿದೆ. ನಿಜಕ್ಕೂ ನಿಮಗೆ ಅಭಿನಂದನೆ'' ಎಂದು ಶ್ಲಾಘಿಸಿದ್ದಾರೆ. ಮುಂದೆ ಓದಿ...

25 ದಿನದ ಹಿಂದೆ ಸೋಂಕು ಪತ್ತೆ
ದುನಿಯಾ ವಿಜಯ್ ತಂದೆ-ತಾಯಿ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದಾಗ ಕೊರೊನಾ ಪರೀಕ್ಷೆಗೆ ಮಾಡಿಸಲಾಯಿತು. ಸೋಂಕು ಖಚಿತವಾದ ಮೇಲೆ ಹೇಗಾದರೂ ಮಾಡಿ ಪೋಷಕರನ್ನು ಗುಣಪಡಿಸಲೇಬೇಕು ಎಂಬ ನಿರ್ಧಾರ ಮಾಡಿದ ವಿಜಿ, ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು. ಬಿಯು ನಂಬರ್ ಸಿಗುವುದು ತಡವಾಗುತ್ತೆ ಎನ್ನುವುದನ್ನು ಅರಿತುಕೊಂಡು ವಿದ್ಯಾನಂದ್ ಎಂಬ ಆಪ್ತ ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲಿಯೇ ಚಿಕಿತ್ಸೆ ನೀಡಲು ತೀರ್ಮಾನಿಸಿದರು. ಈಶ್ವರ್ ಎಂಬ ಶೂಶ್ರಷಕ ಸಹಾಯದೊಂದಿಗೆ ಮನೆಯಲ್ಲಿ ಚಿಕಿತ್ಸೆ ಆರಂಭಿಸಲಾಯಿತು.

ಆಸ್ಪತ್ರೆಗಳಲ್ಲಿ ಬೆಡ್ ಸಿಕ್ಕಿಲ್ಲ
ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಾ ಎಂದು ಹುಡುಕಾಟ ಮುಂದುವರಿದಿತ್ತು. ಆದರೆ ತಕ್ಷಣಕ್ಕೆ ಎಲ್ಲಿಯೂ ಬೆಡ್ ಸಿಕ್ಕಿಲ್ಲ. ಆಮೇಲೆ ದುನಿಯಾ ವಿಜಯ್, ಪತ್ನಿ ಕೀರ್ತಿ, ಪುತ್ರ ಸಾಮ್ರಾಟ್ ಖುದ್ದು ಮಾಸ್ಕ್, ಗ್ಲೌಸ್ ತೊಟ್ಟು ಪೋಷಕರ ಆರೈಕೆ ಮಾಡಿದರು. ಕೋಣೆಯೊಳಗೆ ಹೋಗಿ ಬಂದ ಮೇಲೆ ಸ್ನಾನ ಮಾಡುವುದು, ಇತರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದನ್ನು ಮಾಡಲಾಯಿತು. ವೈದ್ಯ ವಿದ್ಯಾನಂದ್ ಮತ್ತು ಈಶ್ವರ್ ಬೆಂಬಲ ಇದಕ್ಕೆ ಬಹಳ ಸಹಕಾರಿಯಾಗಿತ್ತು ಎಂದು ವಿಜಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನಿಧಾನವಾಗಿ ಸುಧಾರಿಸಿದರು
ಸುಮಾರು 20 ರಿಂದ 25 ದಿನಗಳ ಕಾಲ ವೈದ್ಯರ ಸಲಹೆಯಂತೆ ಚಿಕಿತ್ಸೆ ನೀಡಲಾಯಿತು. ಅದರ ಪರಿಣಾಮ ತಂದೆ-ತಾಯಿ ಇಬ್ಬರು ಸಂಪೂರ್ಣವಾಗಿ ಗುಣಮುಖರಾದರು. ವಿಜಯ್ ಅವರ ತಂದೆ 80 ವರ್ಷ ಹಾಗೂ ತಾಯಿಗೆ 76 ವರ್ಷ. ಈ ಹಿರಿಯ ವಯಸ್ಸಿನಲ್ಲಿ ಇಬ್ಬರು ಕೊರೊನಾ ಜಯಿಸಿರುವುದರ ಹಿಂದೆ ದುನಿಯಾ ವಿಜಯ್ ಅವರ ವಾತ್ಸಲ್ಯ, ಮಮತೆ ಹಾಗೂ ಧೈರ್ಯ ಕಾರಣವಾಗಿದೆ.

ಹಣ ಬೇಕು, ತಂದೆಯ ಶವ ಬೇಡ
ಇತ್ತೀಚಿಗಷ್ಟೆ ಯುವಕನೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ತಂದೆಯ ಶವ ಸ್ವೀಕರಿಸಲು ಬಂದಿಲ್ಲ. ಶವ ನೀವೇ ಇಟ್ಕೊಳ್ಳಿ ಅವರ ಬಳಿಯಿರುವ ದುಡ್ಡು ನಮಗೆ ತಲುಪಿಸಿ ಎಂದಿದ್ದ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆ ಬಗ್ಗೆ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ತಂದೆ-ತಾಯಿ ಸತ್ತಾಗ ದುಡ್ಡು ಖರ್ಚು ಮಾಡಿ ಶ್ರಾದ್ದ ಮಾಡುವ ಬದಲು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳಬೇಕು ಎಂದರು.


Click it and Unblock the Notifications











