'ಸಲಗ' ನಂತರ ಮತ್ತೊಂದು ಪವರ್ಫುಲ್ ಕತೆಯೊಂದಿಗೆ ಬರಲಿರುವ ದುನಿಯಾ ವಿಜಯ್
ಇನ್ನೇನು ವೃತ್ತಿ ಜೀವನದಲ್ಲಿ ಮುಗ್ಗರಿಸಿದರು ಎಂದುಕೊಂಡಾಗಲೇ 'ಸಲಗ' ಮೂಲಕ ಎದ್ದು ಬಂದರು ದುನಿಯಾ ವಿಜಯ್. ತಮ್ಮದೇ ನಿರ್ದೇಶನದಲ್ಲಿ ಅಂಡರ್ವರ್ಲ್ಡ್ ಕತೆಯನ್ನು ಅದರದ್ದೇ ಫ್ಲೇವರ್ನಲ್ಲಿ ಕಟ್ಟಿಕೊಟ್ಟು ಯಶಸ್ವಿಯಾದರು.
'ಸಲಗ'ದ ಯಶಸ್ಸು ದುನಿಯಾ ವಿಜಯ್ ವೃತ್ತಿ ಜೀವನಕ್ಕೆ ಹೊಸ ಹುರುಪು ತುಂಬಿದ್ದು ಈಗ ಹಲವು ಕತೆಗಳನ್ನು ವಿಜಯ್ ಅವರನ್ನು ಅರಸಿ ಬರುತ್ತಿವೆಯಂತೆ.
'ಸಲಗ' ಬಳಿಕ ಹಲವಾರು ಮಂದಿ ಕತೆ ಮಾಡಿಕೊಂಡು ಬರುತ್ತಿದ್ದಾರೆ. ಹಳೆಯ ನಿರ್ದೇಶಕರು, ಹೊಸಬರು ಸಹ ಬರುತ್ತಿದ್ದಾರೆ. ತೆಲುಗು ಭಾಷೆಯಿಂದಲೂ ಅವಕಾಶ ಬಂದಿದೆ. ನಾನು ಸಹ ಅಳೆದು ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ದುನಿಯಾ ವಿಜಯ್.

''ಸಲಗ' ಸಿನಿಮಾದ ಬಳಿಕ ಸಿನಿಮಾ ಉದ್ಯಮದವರಿಗೆ ಬೇರೆಯದ್ದೇ ರೀತಿಯ ವಿಜಯ್ ಕಾಣುತ್ತಿರಬೇಕೇನೋ ಆದರೆ ನಾನು ಹಳೆಯ ದುನಿಯಾ ವಿಜಯ್, ಹಾಗೆಯೇ ಇದ್ದೇನೆ, ಏನೂ ಬದಲಾವಣೆ ಇಲ್ಲ'' ಎಂದಿದ್ದಾರೆ ವಿಜಿ.
''ಸಲಗ' ಸಿನಿಮಾದ ಯಶಸ್ಸಿನಿಂದ ಸಾಕಷ್ಟು ಬದಲಾವಣೆಗಳು ಆಗಿವೆ ಎಂಬುದನ್ನು ಒಪ್ಪಿಕೊಳ್ಳುವ ದುನಿಯಾ ವಿಯ್, ''ಸಲಗ' ಸಿನಿಮಾ ಮೇಕಿಂಗ್ನಲ್ಲಿ ನನ್ನ ಜೊತೆಗೆ ನಿಂತ ಪ್ರತಿಯೊಬ್ಬ ಕಲಾವಿದರು, ಲೈಟ್ ಮ್ಯಾನ್, ಮೇಕಪ್ ಮ್ಯಾನ್, ಸಹಾಯಕ ನಿರ್ದೇಶಕರು, ನಿರ್ಮಾಪಕರು ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಇದೇ ತಂಡದ ಜೊತೆಗೆ ಮತ್ತೊಮ್ಮೆ ಕೆಲಸ ಮಾಡಲು ಇಷ್ಟಪಡುತ್ತೇನೆ'' ಎಂದಿದ್ದಾರೆ. ''ನಮ್ಮ ನಿರ್ದೇಶಕ ತಂಡದಲ್ಲಿ ಅಭಿ ಎಂಬುವರು ಈಗ ಸ್ವಾತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ'' ಎಂದು ಹೆಮ್ಮೆಯಿಂದ ಹೇಳಿಕೊಂಡರು ವಿಜಿ.
ತಮ್ಮ ಮುಂದಿನ ಸಿನಿಮಾಕ್ಕೆ ಈಗಾಗಲೇ ಕತೆ ಮಾಡಿಟ್ಟುಕೊಂಡಿದ್ದಾರಂತೆ ವಿಜಿ, ''ದುನಿಯಾ ವಿಜಯ್ ಸಿನಿಮಾ ಮಾಡುತ್ತಾರೆ ಎಂದರೆ ಅದೇ ರೌಡಿಸಂ ಕತೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಈ ಬಾರಿ ನಾನು ಸ್ವಲ್ಪ ಬೇರೆಯದ್ದೇ ರೀತಿಯ ಕತೆ ಹೇಳಲಿದ್ದೇನೆ. ಮನೊರಂಜನೆ ಜೊತೆಗೆ ಸಮಾಜಕ್ಕೆ ಹತ್ತಿರವಾದ ಕತೆಯನ್ನು ಹೇಳಲಿದ್ದೇನೆ. ಈ ಬಾರಿಯ ಕತೆ 'ಸಲಗ'ಕ್ಕಿಂತಲೂ ಬಲವಾಗಿದೆ'' ಎಂದಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾಕ್ಕೆ ಹಣ ಹೂಡಲು ನಿರ್ಮಾಪಕರು ಸಿದ್ಧವಾಗಿದ್ದಾರೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ ವಿಜಿ.
''ಕಷ್ಟಪಟ್ಟು ಕೆಲಸ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ಕಂಡುಕೊಂಡಿದ್ದೇನೆ. ನಮ್ಮ ತಂಡದವರು ಹಾಗೂ ಮಾಧ್ಯಮದವರು ಸಹ ನನ್ನ ಬೆನ್ನಿಗೆ ನಿಂತು ಗೆಲ್ಲಿಸಿಕೊಂಡು ಬಂದಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡಾಗಲೂ ನೀನು ತಬ್ಬಲಿಯಲ್ಲ ಎಂದು ಜನರು ನನ್ನ ಕೈ ಹಿಡಿದಿದ್ದಾರೆ. ಇನ್ನಷ್ಟು ಜವಾಬ್ದಾರಿಯಿಂದ ಸಿನಿಮಾ ಮಾಡುತ್ತೇನೆ ಹೆಚ್ಚು ಜವಾಬ್ದಾರಿಯಿಂದ ಬದುಕುತ್ತೇನೆ'' ಎಂದಿದ್ದಾರೆ ದುನಿಯಾ ವಿಜಿ.
'ಸಲಗ' ಸಿನಿಮಾದಲ್ಲಿ ತಮ್ಮ ಜೊತೆಗಿದ್ದ ಬಹುತೇಕ ತಂಡವನ್ನೇ ತಮ್ಮ ಮುಂದಿನ ಸಿನಿಮಾಕ್ಕೂ ಉಳಿಸಿಕೊಳ್ಳಲಿದ್ದಾರೆ ವಿಜಿ. ನಿರ್ಮಾಪಕರು ಮತ್ತು ಕಲಾವಿದರಷ್ಟೆ ಬದಲಾಗಲಿದ್ದಾರೆ. ಕತೆ, ಸಂಭಾಷಣೆ ವಿಭಾಗದಲ್ಲಿ ಮಾಸ್ತಿ, ವಿಜಿಗೆ ಸಹಾಯ ಮಾಡಲಿದ್ದಾರೆ. ಚರಣ್ ರಾಜ್ ಸಂಗೀತ ನೀಡಲಿದ್ದಾರೆ.


Click it and Unblock the Notifications











