ಎಲ್ಲಾ ಮುನ್ನೆಚ್ಚರಿಕೆ ಪಾಲಿಸುತ್ತೇವೆ, ನಿರ್ಬಂಧ ಹೇರಬೇಡಿ: ದುನಿಯಾ ವಿಜಯ್ ಮನವಿ
'ಸರ್ಕಾರಕ್ಕೆ ಮತ್ತೆ ಲಾಕ್ಡೌನ್ ಮಾಡುವ ಉದ್ದೇಶ, ಚಿತ್ರಮಂದಿರದಲ್ಲಿ 50-50 ನಿಯಮ ಜಾರಿ ಮಾಡುವ ಉದ್ದೇಶ ಅಥವಾ ಇಡೀಯ ಚಿತ್ರಪ್ರದರ್ಶನವನ್ನೇ ನಿಲ್ಲಿಸುವ ಉದ್ದೇಶವಿದ್ದರೆ ಕಲಾವಿದರ ಸಲಹೆಯನ್ನು ತಪ್ಪದೇ ಪಡೆಯಲಿ' ಎಂದಿದ್ದಾರೆ ನಟ ದುನಿಯಾ ವಿಜಯ್.
Recommended Video
ತುಮಕೂರಿನಲ್ಲಿ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದ ದುನಿಯಾ ವಿಜಯ್ ಅಲ್ಲಿ ಎದುರಾದ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರುವ ಕುರಿತಾಗಿ ಸರ್ಕಾರಕ್ಕೆ ಮನವಿ ಮಾಡಿದರು.
'ಚಿತ್ರರಂಗದಲ್ಲಿಯೂ ಕೂಲಿ ಕಾರ್ಮಿಕರಿದ್ದಾರೆ. ದಿನಕ್ಕೆ ನೂರು-ಐನೂರು ರುಪಾಯಿ ದುಡಿಯುವ ಸಾವಿರಾರು ಕಾರ್ಮಿಕರು ಸಿನಿಮಾರಂಗದಲ್ಲಿದ್ದಾರೆ. ಎಲೆಕ್ಟ್ರೀಶಿಯನ್ಗಳು, ಲೈಟ್ಮ್ಯಾನ್ಗಳು, ಸ್ಪಾಟ್ ಬಾಯ್ಗಳು ಹೀಗೆ ದಿನಕ್ಕೆ ನೂರು-ಐನೂರು ದುಡಿಯುವ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಣಯ ಕೈಗೊಳ್ಳಬೇಕು' ಎಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.

'ಸಿನಿಮಾ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನಿರ್ಣಯ ಕೈಗೊಳ್ಳಲಿ'
ಚಿತ್ರಮಂದಿರಗಳಲ್ಲಿ 50% ಸೀಟು ನಿರ್ಬಂಧ ಮಾಡುವುದು ಬೇಡ, ಈಗ ನೀಡಲಾಗಿರುವ 100% ಸೀಟು ಭರ್ತಿ ಮಾಡಲು ಅವಕಾಶವನ್ನು ಮುಂದುವರೆಸಬೇಕು ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಮತ್ತೆ ಲಾಕ್ಡೌನ್ ಆದರೆ ನಾವೇನೋ ಹೀರೋಗಳು ನಡೆದು ಹೋಗುತ್ತದೆ ಆದರೆ ಕೂಲಿ ಮಾಡುವವನಿಗೆ ಹೊಡೆತ ಬೀಳುತ್ತೆ' ಎಂದರು ದುನಿಯಾ ವಿಜಯ್.

ಎಲ್ಲಾ ಮುನ್ನೆಚ್ಚರಿಕೆಯನ್ನೂ ಪಾಲಿಸುತ್ತೇವೆ: ದುನಿಯಾ ವಿಜಯ್
'ಸರ್ಕಾರ ವಿಧಿಸುವ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ನಾವು ಪಾಲಿಸುತ್ತೀವಿ. ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಮಾಡಬೇಕು ಎಲ್ಲವನ್ನೂ ಪಾಲಿಸುತ್ತೀವಿ ಆದರೆ ಚಿತ್ರಮಂದಿರದಲ್ಲಿ 100% ಸೀಟು ಭರ್ತಿಗೆ ಅವಕಾಶ ಇರಬೇಕು ಅಷ್ಟೆ' ಎಂದರು ದುನಿಯಾ ವಿಜಯ್.

ಸಲಹೆ ನೀಡಿರುವ ತಜ್ಞರು
ಕೊರೊನಾ ಎರಡನೇ ಅಲೆ ಏಳುತ್ತಿರುವುದಾಗಿ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಗುಂಪು ಸೇರುವ ಸ್ಥಳಗಳಾದ ಚಿತ್ರಮಂದಿರ, ಮಾಲ್, ಜಾತ್ರೆ, ಮದುವೆಗಳ ಮೇಲೆ ನಿರ್ಭಂಧ ಹೇರಬೇಕು ಎಂದು ಸಲಹೆ ನೀಡಲಾಗಿದೆ. ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗೆ ಮಾತ್ರವೇ ಅವಕಾಶ ನೀಡುವ ಬಗ್ಗೆ ಚರ್ಚೆ ಆರಂಭವಾಗಿದೆ. ಇದು ಚಿತ್ರರಂಗದವರಿಗೆ ಆತಂಕ ತಂದಿದೆ.

ಏಪ್ರಿಲ್ 15 ರಂದು ಬಿಡುಗಡೆ ಆಗಲಿದೆ 'ಸಲಗ'
ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾ ಏಪ್ರಿಲ್ 15 ರಂದು ಬಿಡುಗಡೆ ಆಗಲಿದೆ. ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಡಾಲಿ ಧನಂಜಯ್ ಪವರ್ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಏಪ್ರಿಲ್ 1 ರಂದು ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











