ಹುಚ್ಚು ಅಭಿಮಾನದಿಂದ ಕಾಲು ಕಳೆದುಕೊಂಡ ದುನಿಯಾ ವಿಜಯ್ ಅಭಿಮಾನಿ!
'ಅಭಿಮಾನ ಇರಬೇಕು ಅಂದರೆ ಅದು ಅತಿರೇಕವಾಗಬಾರದು' ಎನ್ನುವ ಮಾತು ಈ ಸ್ಟೋರಿಗೆ ಸೂಕ್ತವಾಗಿ ಹೇಳಿದ ಹಾಗಿದೆ. ಯಾಕಂದ್ರೆ, ನಟ ದುನಿಯಾ ವಿಜಯ್ ಮೇಲೆ ಹುಚ್ಚು ಅಭಿಮಾನ ಹೊಂದಿದ್ದ ಯಾದಗಿರಿಯ ಒಬ್ಬ ಯುವಕ ಈಗ ತನ್ನ ಕಾಲುಗಳನ್ನೇ ಕಳೆದುಕೊಂಡಿದ್ದಾನೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಯುವಕ ಹುಲಗಪ್ಪ ಅಲಿಯಾಸ್ ಜಂಗ್ಲಿ ದುನಿಯಾ ವಿಜಯ್ ಅವರ ಅಪಟ್ಟ ಅಭಿಮಾನಿ. ಅದು ಯಾವ ಮಟ್ಟಿಗೆ ಅಂದರೆ ಈತನ ಕೈ, ತೋಳ್ಮೇಲೆ ಜಂಗ್ಲಿ, ಜಾನಿ ಎಂಬ ಅಚ್ಚೆ ಇದೆ. ಮನೆಯ ಗೋಡೆಯ ತುಂಬ ನೆಚ್ಚಿನ ನಟನ ಫೋಟೋಗಳೆ ತುಂಬಿವೆ.
ಹೀಗಿರುವಾಗ ದುನಿಯಾ ವಿಜಯ್ ಅಭಿಮಾನಿ ಎಂದು ಸಾಬೀತು ಮಾಡುವುದಕ್ಕೆ ಹೋಗಿ ಈತ ತನ್ನ ಕಾಲುಗಳನ್ನು ಕಳೆದುಕೊಂಡಿದ್ದಾನೆ. ಮುಂದೆ ಓದಿ...

ಗೆಳೆಯರ ಜೊತೆ ಚಾಲೆಂಜ್
ಇತ್ತೀಚಿಗೆ ಸ್ನೇಹಿತರ ಜೊತೆ ಹುಲಗಪ್ಪ ಕುಳಿತಿದ್ದಾಗ ''ದುನಿಯಾ ವಿಜಯ್ ಅಭಿಮಾನಿಯಾದ ನೀನು ಅವರಂತೆಯೇ ಸ್ಟಂಟ್ ಮಾಡು'' ಎಂದು ಚಾಲೆಂಜ್ ಮಾಡಿದ್ದಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಈ ಯುವಕ ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಹಾರಿದ್ದಾನೆ.

ಪಾದದ ಮೂಳೆಗಳು ತಪ್ಪಿವೆ
15 ಅಡಿಯಿಂದ ಹಾರಿದ ಹುಲಗಪ್ಪನ ಎರಡು ಕಾಲಿನ ಪಾದದ ಮೂಳೆಗಳು ತಪ್ಪಿವೆ. ಈಗ ಎಂದಿನಂತೆ ಓಡಾಡಲು ಆಗುತ್ತಿಲ್ಲ. ಹೀಗಾಗಿ ಹಾಸಿಗೆ ಹಿಡಿದಿದ್ದು, ಹೆಚ್ಚಿನ ಚಿಕಿತ್ಸೆ ದೂರದ ಆಸ್ಪತ್ರೆಗೆ ತೆರಳಲು ಹಣವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾನೆ.

ದುನಿಯಾ ವಿಜಯ್ ಬಳಿ ಮನವಿ
ಆಸ್ಪತ್ರೆಗೆ ತೆರಳಲು ಹಣವಿಲ್ಲದ ಹುಲಿಗಪ್ಪ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮಾಡಿ ಎಂದು ನಟ ದುನಿಯಾ ವಿಜಯ್ ಬಳಿ ಮನವಿ ಮಾಡಿದ್ದಾನೆ.

ಹಿರಿಯ ಮಗ
ತಂದೆಯನ್ನು ಕಳೆದುಕೊಂಡಿರುವ ಹುಲಗಪ್ಪ ಮನೆಗೆ ಹಿರಿಯ ಮಗ. ಈತನೇ ಟೆಂಟ್ ಹೌಸ್ಗಳಲ್ಲಿ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ಮಗನ ಈ ಸ್ಥಿತಿಯ ಬಳಿಕ ಹುಲಗಪ್ಪನ ತಾಯಿಯೇ ಕೂಲಿ ಮಾಡಿ ಕುಟುಂಬ ನಡೆಸುತ್ತಿದ್ದಾಳೆ.
ಸ್ಟಂಟ್ ಮಾಡಿ ಹಾಸಿಗೆ ಹಿಡಿದ ದುನಿಯಾ ವಿಜಯ್ ಅಭಿಮಾನಿ

ಅಭಿಮಾನ ಇರಲಿ ಹುಚ್ಚು ಅಭಿಮಾನ ಬೇಡ
ಚಿತ್ರನಟರ ಅಭಿಮಾನಕ್ಕೆ ಮನಸೋಲುವ ಯುವಕರು ಅವರಂತೆಯೇ ಅನುಸರಿಸಲು ಹೋಗುತ್ತಾರೆ. ಇದರಿಂದ ಅನಾಹುತಗಳಿಗೆ ಈಡಾಗುತ್ತಿದ್ದಾರೆ. ಇಂಥ ಮನಸ್ಥಿತಿಯಿಂದ ಯುವಕರು ಹೊರ ಬರಬೇಕಿದೆ. ನಟರ ಮೇಲೆ ಅಭಿಮಾನ ಇರಲಿ ಆದರೆ ಹುಚ್ಚು ಅಭಿಮಾನ ಬೇಡ.


Click it and Unblock the Notifications











