ನಟ, ನಿರ್ದೇಶಕ ದುನಿಯಾ ವಿಜಯ್ ಅಭಿಮಾನಿಗಳಿಗೆ ಇಲ್ಲಿದೆ ಬೇಸರದ ಸುದ್ದಿ
ದುನಿಯಾ ವಿಜಯ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದ್ಕಡೆ ನಿರ್ದೇಶಕರಾಗಿ 'ಸಿಟಿ ಲೈಟ್ಸ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಮತ್ತೊಂದು ಕಡೆ 'ಲ್ಯಾಂಡ್ಲಾರ್ಡ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ನಡೀತಿದೆ.
'ಮಾರುತ' ಎಂಬ ಚಿತ್ರದ ವಿಶೇಷ ಪಾತ್ರದಲ್ಲಿ ವಿಜಯ್ ನಟಿಸಿದ್ದಾರೆ. ಎಸ್. ನಾರಾಯಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಅಕ್ಟೋಬರ್ 31ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ನಾಯಕ ನಾನಲ್ಲ ಎಂದು ಸ್ವತಃ ವಿಜಯ್ ಹೇಳಿಕೊಂಡಿದ್ದಾರೆ. ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ 'ಮಾರುತ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ರಮೇಶ್ ಯಾದವ್ ಬಂಡವಾಳ ಹೂಡಿದ್ದಾರೆ.

ಕಳೆದ ವರ್ಷ 'ಭೀಮ' ಚಿತ್ರವನ್ನು ನಿರ್ದೇಶಿಸಿ ನಟಿಸಿ ವಿಜಯ್ ಸಕ್ಸಸ್ ಕಂಡಿದ್ದರು. ಆದರೆ ಈ ವರ್ಷ ಅವರ ಯಾವುದೇ ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. 'ಮಾರುತ' ಬಿಟ್ಟರೆ ಅವರ ಮತ್ಯಾವುದೇ ಸಿನಿಮಾ ಈ ವರ್ಷ ಪ್ರೇಕ್ಷಕರ ಮುಂದೆ ಬರಲ್ಲ. ಇದೇ ಅಭಿಮಾನಿಗಳಿಗೆ ಬೇಸರ ತರುವಂತಾಗಿದೆ. ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್ಲಾರ್ಡ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದೀಪಾವಳಿಗೆ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗಿತ್ತು. ಆದರೆ ಬಲ್ಲ ಮೂಲಗಳ ಪ್ರಕಾರ ಈ ವರ್ಷ ಸಿನಿಮಾ ತೆರೆಗೆ ಬರಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
'ಗುರು ಶಿಷ್ಯರು' ಹಾಗೂ 'ಜಂಟಲ್ಮನ್' ರೀತಿಯ ಹಿಟ್ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದ ಜಡೇಶ್ ಹಂಪಿ ಬಳಿಕ ದರ್ಶನ್ ನಟನೆಯ 'ಕಾಟೇರ' ಚಿತ್ರಕ್ಕೆ ಕಥೆ ಕೊಟ್ಟಿದ್ದರು. ಅವರ ಮುಂದಿನ ಸಿನಿಮಾ ಅಂದಾಕ್ಷಣ 'ಲ್ಯಾಂಡ್ಲಾರ್ಡ್' ಬಗ್ಗೆ ನಿರೀಕ್ಷೆ ಮೂಡಿತ್ತು. ಸದ್ಯ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ವಿಜಯ್ ಮಗಳು ರಿತನ್ಯಾ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ತಂದೆ-ಮಗಳು ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ. ಮಾಸ್ತಿ ಸಂಭಾಷಣೆ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

'ಲ್ಯಾಂಡ್ಲಾರ್ಡ್' ಎನ್ನುವ ಪವರ್ಫುಲ್ ಟೈಟಲ್ ಜೊತೆಗೆ 'ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ' ಎನ್ನುವ ಟ್ಯಾಗ್ಲೈನ್ ಕೂಡ ಇದೆ. ಇದೊಂದು ಹಳ್ಳಿ ಸೊಗಡಿನ ಕಥೆ. 80ರ ದಶಕದ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಇನ್ನು ಚಿತ್ರದಲ್ಲಿ ರಾಚಯ್ಯ ಎನ್ನುವುದು ನಾಯಕ ವಿಜಯ್ ಅವರ ಪಾತ್ರದ ಹೆಸರು. ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ. ಎಸ್ ಹಾಗೂ ಕೆ. ವಿ ಸತ್ಯಪ್ರಕಾಶ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ನಾಯಕ ಅದಕ್ಕಾಗಿ ನಡೆಸುವ ಹೋರಾಟವೇ 'ಲ್ಯಾಂಡ್ಲಾರ್ಡ್'. ಒಟ್ಟಾರೆ ಈ ವರ್ಷವೇ ಈ ಸಿನಿಮಾ ತೆರೆಗೆ ಬರುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ವರ್ಷದ ಏಳೆಂಟು ತಿಂಗಳು ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಲಿಲ್ಲ. ಇದೀಗ ಒಂದರ ಹಿಂದೆ ಒಂದರಂತೆ ಒಂದೊಂದೇ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ.
ದಸರಾಗೆ 'ಕಾಂತಾರ-1' ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ 'ಮಾರುತ' ಸಿನಿಮಾ ಬಿಡುಗಡೆ ಆಗಲಿದೆ. ದೀಪಾವಳಿಗೆ ಧ್ರುವ ಸರ್ಜಾ - ಪ್ರೇಮ್ ಜೋಡಿಯ 'ಕೆಡಿ' ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಬಳಿಕ ಡಿಸೆಂಬರ್ 12ಕ್ಕೆ 'ಡೆವಿಲ್', ಡಿಸೆಂಬರ್ 25ಕ್ಕೆ 'ಮಾರ್ಕ್' ಹಾಗೂ '45' ಸಿನಿಮಾಗಳು ತೆರೆಗೆ ಬರುವುದು ಪಕ್ಕಾ ಆಗಿದೆ. ಹಾಗಾಗಿ ಈ ವರ್ಷ ಚಿತ್ರಮಂದಿರಕ್ಕೆ ಬರೋದು ಬೇಡ ಎಂದು 'ಲ್ಯಾಂಡ್ಲಾರ್ಡ್' ನಿರ್ಧರಿಸಿದಂತೆ ಕಾಣ್ತಿದೆ.


Click it and Unblock the Notifications











