ನಯನತಾರಾ ಎದುರು ಘರ್ಜಿಸಲಿದೆ ಕನ್ನಡದ ಕರಿಚಿರತೆ, ದುನಿಯಾ ವಿಜಯ್ ಈಗ ಬಹುಭಾಷಾ ನಟ..!
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಮತ್ತು ಡೈರೆಕ್ಟರ್ ಆಗಿ ಗುರುತಿಸಿಕೊಂಡವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಭಾರತದ ಯಾವುದೇ ಭಾಷೆಗೆ ಹೊಂದುವ ವಿಜಯ್ ಎರಡು ವರ್ಷದ ಹಿಂದೆ ತೆಲುಗು ಚಿತ್ರರಂಗವನ್ನು ಪ್ರವೇಶಿಸಿದ್ದರು. ವೀರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಯ್ಯ ಎದುರು ಅಬ್ಬರಿಸಿದ್ದರು. ತೆಲುಗು ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದಿದ್ದರು.
ಇಂಥಾ ವಿಜಯ್ ಈಗ ತಮ್ಮ ಬದುಕಿನಲ್ಲಿ ಮತ್ತೊಂದು ಮೆಟ್ಟಿಲನ್ನೇರಿದ್ದಾರೆ. ತೆಲುಗು ನಂತರ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಹೌದು, ಅಸಲಿಗೆ ವೀರಸಿಂಹ ರೆಡ್ಡಿ ಚಿತ್ರದ ನಂತರ ಕನ್ನಡದ ಕರಿಚಿರತೆಯನ್ನು ಅರಸಿಕೊಂಡು ಪರಭಾಷೆಯ ಸಾಕಷ್ಟು ಚಿತ್ರಗಳು ಬಂದಿದ್ದವು. ಆದರೆ, ಬಂದ ಅವಕಾಶಗಳನ್ನೆಲ್ಲ ದುನಿಯಾ ವಿಜಯ್ ಒಪ್ಪಿಕೊಂಡಿರಲಿಲ್ಲ. ಅವ್ರದ್ದೇ ಆದ ಪ್ರಯೋಗಗಳಲ್ಲಿ ದುನಿಯಾ ವಿಜಯ್ ಬ್ಯುಸಿಯಾಗಿದ್ದರು.

ಆದರೆ ಈಗ ದುನಿಯಾ ವಿಜಯ್ ಕಾಲಿವುಡ್ನ ಒಂದು ಸುತ್ತು ಸುತ್ತಾಡಿಕೊಂಡು ಬರಲು ಅಣಿಯಾಗಿದ್ದಾರೆ. 'ಮೂಕುತಿ ಅಮ್ಮನ್' ಚಿತ್ರದ ಮುಂದುವರೆದ ಭಾಗವನ್ನು ಒಪ್ಪಿಕೊಂಡಿದ್ದಾರೆ. ಇಂದು ಈ ಚಿತ್ರದ ಮುಹೂರ್ತ ಸಮಾರಂಭ ಚೆನ್ನೈನಲ್ಲಿ ನೆರವೇರಿದೆ.
2020ರಲ್ಲಿ ತೆರೆಗೆ ಬಂದು ಬ್ಲಾಕ್ ಬಸ್ಟರ್ ಆಗಿದ್ದ ಮೂಕುತಿ ಅಮ್ಮನ್ ಚಿತ್ರದಲ್ಲಿ ನಯನತಾರಾ ದೇವಿಯ ಪಾತ್ರವನ್ನು ನಿರ್ವಹಿಸಿದ್ದರು. ಈಗ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಕೂಡ ನಯನತಾರಾ ಮುಂದುವರೆಯಲಿದ್ದಾರೆ. ಭಕ್ತಿ ಮತ್ತು ಶಕ್ತಿಯ ಕಥೆ ಹೊಂದಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ಅವರದ್ದು ಖಳನಾಯಕನ ಪಾತ್ರ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು, ಮೊದಲ ಭಾಗದಲ್ಲಿ ಪಾತ್ರಕ್ಕೆ ಜೀವ ತುಂಬುವುದರ ಜೊತೆ ಚಿತ್ರದ ನಿರ್ದೇಶನವನ್ನು ಕೂಡ ಆರ್.ಜೆ ಬಾಲಾಜಿ ಮಾಡಿದ್ದರು. ಆದರೆ ಈ ಚಿತ್ರದಲ್ಲಿ ಆರ್.ಜೆ.ಬಾಲಾಜಿ ಕೇವಲ ಪಾತ್ರವನ್ನು ಮಾತ್ರ ನಿರ್ವಹಿಸುತ್ತಿದ್ದಾರೆ. ನಿರ್ದೇಶನದ ಜವಾಬ್ಧಾರಿಯನ್ನು ತಮಿಳು ಚಿತ್ರರಂಗದ ಜನಪ್ರಿಯ ನಟ ನಿರ್ದೇಶಕ ಮತ್ತು ಹಿರಿಯ ನಟಿ ಖುಷ್ಭು ಅವರ ಪತಿ ಸುಂದರ್ ಸಿ ವಹಿಸಿಕೊಂಡಿದ್ದಾರೆ.
ದುನಿಯಾ ವಿಜಯ್, ಆರ್.ಜೆ.ಬಾಲಾಜಿ ಮತ್ತು ನಯನತಾರ ಅವರನ್ನು ಹೊರತು ಪಡಿಸಿದರೆ ಚಿತ್ರದಲ್ಲಿ ರೆಜಿನಾ ಕ್ಯಾಸೆಂಡ್ರ, ಖುಷ್ಭು, ಮೀನಾ, ಅಭಿನಯ, ಇನಯ, ವಿಚು ವಿಶ್ವನಾಥ್, ಅಜಯ್ ಘೋಷ್, ಸಿಂಗಂಪುಲಿ, ಮೈನಾ ನಂದಿನಿ ಕೂಡ ಇದ್ದಾರೆ. ಇನ್ನು ತಮ್ಮ ಈ ಹೊಸ ಚಿತ್ರ ಹೊಸ ಪ್ರಯತ್ನದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಂಚಿಕೊಂಡಿರುವ ದುನಿಯಾ ವಿಜಯ್ ಚಿತ್ರದ ನಿರ್ದೇಶಕ ಸುಂದರ ಅವರಿಗೆ ಧನ್ಯವಾದವನ್ನು ಹೇಳಿದ್ದಾರೆ.


Click it and Unblock the Notifications











