ಫ್ಲೈಯಿಂಗ್ ಕಿಂಗ್ ಮಂಜು 'ಬೇಗೂರು ಕಾಲೋನಿ' ಚಿತ್ರದ ಪೋಸ್ಟರ್ ಆರ್ಭಟ
ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಬರುತ್ತಲೇ ಇರುತ್ತಾರೆ. ಅಂತಹ ಹೊಸಬರಿಗೆ ಸ್ಟಾರ್ ನಟರು ಸಾಥ್ ಕೊಡುತ್ತಿರುತ್ತಾರೆ. ಇತ್ತೀಚೆಗೆ 'ಬೇಗೂರು ಕಾಲೋನಿ' ಎನ್ನುವ ಹೊಸ ಸಿನಿಮಾ ಪೋಸ್ಟರ್ ರಿಲೀಸ್ ಆಗಿತ್ತು. ನಟ ದುನಿಯಾ ವಿಜಯ್ ಮೋಷನ್ ಪೋಸ್ಟರ್ ರಿವೀಲ್ ಮಾಡಿ ತಂಡಕ್ಕೆ ಶುಭ ಕೋರಿದ್ದರು.
ಶ್ರೀಮಾ ಸಿನಿಮಾಸ್ ಬ್ಯಾನರ್ ಅಡಿ ಎಂ ಶ್ರೀನಿವಾಸ್ ಬಾಬು 'ಬೇಗೂರು ಕಾಲೋನಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಾಸಕರಾದ ಸತೀಶ್ ರೆಡ್ಡಿ ಅವರ ಬೆಂಬಲ ಕೂಡ ಚಿತ್ರಕ್ಕಿದೆ. ಫ್ಲೈಯಿಂಗ್ ಕಿಂಗ್ ಮಂಜು ಎಂಬುವವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಿಗ್ಬಾಸ್ ಖ್ಯಾತಿಯ ರಾಜೀವ್ ಚಿತ್ರದ ಲೀಡ್ ರೋಲ್ನಲ್ಲಿ ನಟಿಸಿದ್ದಾರೆ. ನಿರ್ದೇಶಕ ಮಂಜು ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಚಾಮರಾಜನಗರದ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ಮೋಷನ್ ಪೋಸ್ಟರ್ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು. ದುನಿಯಾ ವಿಜಯ್ ಜೊತೆಗೆ ಸಂಭಾಷಣೆಕಾರ ಮಾಸ್ತಿ ಕೂಡ ಸಾಥ್ ನೀಡಿದ್ದರು. ಟೈಟಲ್ ಹೇಳುವಂತೆ ಇದು ಒಂದು ಕಾಲೋನಿಯ ಕಥೆ. 'ಬೇಗೂರು ಕಾಲೋನಿ' ಜನರ ನೋವು ನಲಿವಿನ ಕಥಾಹಂದರ ಇಲ್ಲಿದೆ. ಚಿತ್ರದಲ್ಲಿ ರಾಘವ ಎನ್ನುವ ಪಾತ್ರದಲ್ಲಿ ರಾಜೀವ್ ನಟಿಸಿದ್ದಾರೆ. ಗಲ್ಲಿ ಶಿವ ಎನ್ನುವ ಮತ್ತೊಂದು ಪವರ್ಫುಲ್ ಪಾತ್ರದಲ್ಲಿ ನಿರ್ದೇಶಕ ಮಂಜು ಅಬ್ಬರಿಸಿದ್ದಾರೆ.
ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ತೆಲುಗು ನಟ ಪೊಸಾನಿ ಕೃಷ್ಣ ಮುರಳಿ, ಬಾಲ ರಾಜ್ವಾಡಿ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು 'ಬೇಗೂರು ಕಾಲೋನಿ' ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಚಿತ್ರಕ್ಕಿದೆ. ಸದ್ಯಕ್ಕೆ ಚಿತ್ರದ ಮೋಷನ್ ಪೋಸ್ಟರ್ ಮಾತ್ರ ಬಿಡುಗಡೆ ಆಗಿದೆ. ಮುಂದೆ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ನಡೀತಿದೆ.

ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ದೇಶಕ ಮಂಜು "ಒಂದು ಕಾಲೋನಿಯಲ್ಲಿ ಎಲ್ಲಾ ರೀತಿ ಜನ ವಾಸಿಸುತ್ತಾರೆ. ಅಲ್ಲಿ ನಡೆಯುವ ಒಂದು ಸಣ್ಣ ಕಥೆ ಚಿತ್ರದಲ್ಲಿದೆ. ಇದು ಹೋರಾಟದ ಕಥೆ. ಇದರಲ್ಲಿ ಫೈಟ್ಸ್ ಚೆನ್ನಾಗಿ ಮಾಡಿದ್ದರೆ ಆ ಕ್ರೆಡಿಟ್ ವಿಜಯ್ ಅಣ್ಣನಿಗೆ ಹೋಗಲಿ. ನನ್ನಂತ ಸಣ್ಣ ನಿರ್ದೇಶಕನಿಗೆ ವಿಜಯ್ ಅಣ್ಣ ಸಾಥ್ ಕೊಟ್ಟಿದ್ದು ನಾನು ಎಂದಿಗೂ ಮೆರೆಯುವುದಿಲ್ಲ" ಎಂದಿದ್ದರು.
ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ದುನಿಯಾ ವಿಜಯ್ ತಂಡದ ಬೆನ್ನು ತಟ್ಟಿದ್ದರು. "ನಿರ್ಮಾಪಕರು ನಮ್ಮ ಊರಿನ ಕಡೆಯವರು. ಹೋರಾಟದ ವಿಷಯ ಇಟ್ಕೊಂಡು ಮಾಡಿರುವ ಕಥೆ ಬೇಗೂರು ಕಾಲೋನಿ ಎನಿಸುತ್ತದೆ. ಮಂಜು ಅನ್ಯಾಯದ ವಿರುದ್ಧ ಎದೆ ತಟ್ಟಿ ನಿಲ್ಲುವವರು ಎನಿಸುತ್ತದೆ. ಈ ಹೋರಾಟದ ಕಥೆ ಸರ್ಕಾರಕ್ಕೆ ಮುಟ್ಟಲಿ, ಕಾಲೋನಿ ಇಲ್ಲದೇ ನಗರ ಆಗಲ್ಲ. ಮಾಲ್ ನಗರ ಆಗುವುದು ಕಾಲೋನಿಯಿಂದ, ಕಾಲೋನಿಯವರು ಕಾಲಿಗೆ ಸಮ ಅಲ್ಲ. ನಟ ರಾಜೀವ್ ಹಾರ್ಡ್ ವರ್ಕರ್. ಇಡೀ ತಂಡಕ್ಕೆ ಒಳ್ಳೆದಾಗಲಿ" ಎಂದಿದ್ದರು.
ನಿರ್ದೇಶಕ ಮಂಜು ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಅದೇ ಭಾಗದ ವಿರಾಠನಗರದಲ್ಲಿ ಇತ್ತೀಚೆಗೆ ಬಲಮುರಿ ವಿದ್ಯಾಗಣಪತಿ ಉತ್ಸವ ನಡೆಯಿತು. ಅದರ ಅಂಗವಾಗಿ ನಡೆದ ಆರ್ಕೇಸ್ಟ್ರಾ ಕಾರ್ಯಕ್ರಮದ ವೇದಿಕೆಯಲ್ಲಿ 'ಬೇಗೂರು ಕಾಲೋನಿ' ಚಿತ್ರದ ಮೇಕಿಂಗ್ ವೀಡಿಯೋ ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರು ಹಾಗೂ ಅಲ್ಲಿನ ನಿವಾಸಿಗಳು ಚಿತ್ರತಂಡಕ್ಕೆ ಶುಭ ಕೋರಿದ್ದರು.
ಭರ್ಜರಿ ಮೇಕಿಂಗ್ ಹಾಗೂ ಆಕ್ಷನ್ ಸನ್ನಿವೇಶ 'ಬೇಗೂರು ಕಾಲೋನಿ' ಚಿತ್ರದಲ್ಲಿದೆ. ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸಿನಿಮಾ ಇದು. ಶೀಘ್ರದಲ್ಲೇ 'ಬೇಗೂರು ಕಾಲೋನಿ' ಕಥೆ ಕರ್ನಾಟಕದ ಪ್ರೇಕ್ಷಕರ ಮುಂದೆ ಅನಾವರಣ ಆಗಲಿದೆ.


Click it and Unblock the Notifications











