Salaga-2: 'ಭೀಮ'ನಿಗೂ 'ಸಲಗ'ನಿಗೂ ಲಿಂಕ್ ಏನು? ಈ ವಿಚಾರಗಳನ್ನು ಗಮನಿಸಿದ್ರಾ?
ದುನಿಯಾ ವಿಜಯ್ 'ಭೀಮ' ಸಿನಿಮಾ ತೆರೆಗೆ ಬಂದಿದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ 'ಸಲಗ-2' ಬಗ್ಗೆ ಸುಳಿವು ಕೊಟ್ಟು ವಿಜಯ್ ಕುತೂಹಲ ಮೂಡಿಸಿದ್ದಾರೆ. ಅಲ್ಲಿಗೆ ಮತ್ತೆ 'ಸಲಗ'ನಾಗಿ ಬ್ಲ್ಯಾಕ್ ಕೋಬ್ರಾ ಅಬ್ಬರಿಸುವುದು ಪಕ್ಕಾ ಆಗಿದೆ. ವಯಸ್ಸಾದ ಸಲಗನ ಗೆಟಪ್ ಕೊಂಚ ಬದಲಾಗಲಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಸಲಗ' ಸಿನಿ ಆ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹೆಚ್ಚು ಕಮ್ಮಿ ಇದೇ ತಂಡ ಅಲ್ಲೂ ಕೆಲಸ ಮಾಡಿತ್ತು. ವಿಜಯ್ ಜೊತೆ ಆ ಚಿತ್ರದಲ್ಲಿ ಎಸಿಪಿ ಸಾಮ್ರಾಟ್ ಆಗಿ ಡಾಲಿ ಧನಂಜಯ್ ಅಬ್ಬರಿಸಿದ್ದರು. ಉತ್ಸವದಲ್ಲಿ ಇಂದ್ರನನ್ನು ಕೊಂದು 'ಸಲಗ' ಹೆತ್ತವರ ಸಾವಿಗೆ ಸೇಡು ತೋರಿಸಿಕೊಂಡಿದ್ದ. ಬಳಿಕ ಪೊಲೀಸರಿಗೆ ಶರಣಾಗಿ ಜೈಲು ಸೇರುವುದರೊಂದಿಗೆ ಆ ಕಥೆ ಮುಗಿದಿತ್ತು.

ಜೆ. ಸಿ ರಸ್ತೆಯ ರಾಮಣ್ಣ ಮೆಕಾನಿಕ್ ಶಾಪ್ನ 'ಭೀಮ' ಇದೀಗ ಡ್ರ್ಯಾಗನ್ ಮಂಜುನನ್ನು ಕೊಂದು ಜೈಲು ಸೇರಿದ್ದಾನೆ. 'ಭೀಮ' ಒಳಗೆ ಹೋಗುತ್ತಿದ್ದಂತೆ 'ಸಲಗ' ಬಿಡುಗಡೆ ಆಗಿದ್ದಾನೆ. ಹೊಸ ವೇಷದಲ್ಲಿ ಕಾಣಿಸಿಕೊಂಡಿದ್ದಾನೆ. ಅದು ಹೇಗೆ ಎನ್ನುವುದನ್ನು ತೆರೆಮೇಲೆ ನೋಡಬೇಕು. ಹಾಗಾಗಿ 'ಸಲಗ' ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿದೆ. 'ಭೀಮ' ಚಿತ್ರದಲ್ಲಿ ಡ್ರಗ್ಸ್ ಮುಕ್ತ ಸಮಾಜದ ಬಗ್ಗೆ ಮಾತನಾಡಲಾಗಿದೆ.
ಗಾಂಜಾ, ಡ್ರಗ್ಸ್ ದಂಧೆ ಹೇಗೆಲ್ಲಾ ನಡೆಯುತ್ತದೆ. ಮಾದಕ ಪದಾರ್ಥ ಸಿಗದಿದ್ದಾಗ ವ್ಯಸನಿಗಳು ಹೇಗೆ ವರ್ತಿಸುತ್ತಾರೆ. ಅದನ್ನು ಪಡೆಯಲು ಯಾವ ಯಾವ ಮಾರ್ಗ ಹಿಡಿಯುತ್ತಾರೆ. ಅಲ್ಲೂ ಕೆಲವರು ಅವರನ್ನು ಹೇಗೆ ಹಾಳು ಮಾಡುತ್ತಾರೆ. ಮಾದಕ ದ್ರವ್ಯಕ್ಕೆ ಬಲಿಯಾದವರು ತಮ್ಮ ಜೀವ, ಜೀವನ ಎರಡನ್ನು ಹೇಗೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ತಮ್ಮ ತಂದೆ ಸಮಾನ ರಾಮಣ್ಣ ಮೆಕಾನಿಕ್ಗೆ ಬಂದ ಕೆಟ್ಟ ಹೆಸರನ್ನು ಅಳಿಸಲು 'ಭೀಮ' ಮಾದಕ ಜಾಲವನ್ನೇ ಭೇದಿಸುತ್ತಾನೆ.

ಇನ್ನು ಮಾದಕ ವ್ಯಸನಿಗಳಿಗೆ ಆ ಅಭ್ಯಾಸ ಬಿಡಿಸುವುದು ಹೇಗೆ? ಎನ್ನುವುದರ ಬಗ್ಗೆ 'ಭೀಮ' ಚಿತ್ರದಲ್ಲಿ ಚರ್ಚಿಸಲಾಗಿದೆ. ರಿಹ್ಯಾಬಿಟೇಷನ್ ಸೆಂಟರ್ನಲ್ಲಿ ಅವರನ್ನು ದಾಖಲಿಸಿ ಅವರನ್ನು ಹಂತಹಂತವಾಗಿ ಹೊಸ ಮನುಷ್ಯರನ್ನಾಗಿ ಮಾಡುವ ಪ್ರಯತ್ನವನ್ನು ತೋರಿಸಿದ್ದಾರೆ. ಹೊಸ ಬೆಳಕು ರಿಹ್ಯಾಬಿಟೇಷನ್ ಸೆಂಟರ್ ಎನ್ನುವುದನ್ನು ನೋಡಬಹುದು. ರಂಗಾಯಣ ರಘು ಅದರ ಮುಖ್ಯಸ್ಥನ ಪಾತ್ರ ಮಾಡಿದ್ದಾರೆ. ಅಂದಹಾಗೆ ಈ ಸಂಸ್ಥೆಯನ್ನು 'ಸಲಗ' ನಡೆಸುತ್ತಿರುತ್ತಾನೆ.
ಹೌದು. ಸನ್ನಿವೇಶವೊಂದರಲ್ಲಿ ಮಾಧ್ಯಮದವರು ರಂಗಾಯಣ ರಘು ಬಳಿ ಮಾತನಾಡುವಾಗ ಈ ವಿಚಾರ ಬರುತ್ತದೆ. ಜೈಲಿನಲ್ಲಿರುವ 'ಸಲಗ' ಹೊಸ ಬೆಳಕು ರಿಹ್ಯಾಬಿಟೇಷನ್ ಸೆಂಟರ್ ನಡೆಸುವುದು ಯಾಕೆ? ಎನ್ನುವ ಪ್ರಶ್ನೆಗೆ ಸೀಕ್ವೆಲ್ನಲ್ಲಿ ಉತ್ತರ ಸಿಗಲಿದೆ.
'ಸಲಗ'-2 ಬರೋದು ಖಚಿತವಾಯಿತು. ಆದರೆ ಯಾವಾಗ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಅದಕ್ಕೆ ಉತ್ತರ ಸದ್ಯಕ್ಕಲ್ಲ ಎನ್ನಬಹುದು. ಸದ್ಯಕ್ಕೆ ದುನಿಯಾ ವಿಜಯ್ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಡೇಶ್ ಹಂಪಿ ನಿರ್ದೇಶನ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಬಳಿಕ ಮತ್ತೊಂದು ಸಿನಿಮಾ ಮಾಡಬೇಕಿದೆ. ಆ ಬಳಿಕವೇ 'ಸಲಗ'ನ ಬಗ್ಗೆ ತಲೆ ಕೆಡಿಸಿಕೊಳ್ಳಲಿದ್ದಾರೆ. ಇನ್ನು 'ಭೀಮ-2' ಮಾಡುವ ಬಗ್ಗೆ ಮುಂದೆ ನೋಡೋಣ ಎಂದು ವಿಜಯ್ ಹೇಳಿದ್ದಾರೆ.
'ಭೀಮ' ಆರ್ಭಟ ಜೋರಾಗಿದೆ. ನಾಳೆ(ಆಗಸ್ಟ್ 11) ದೊಡ್ಡಮಟ್ಟದ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಬಹಳ ದಿನಗಳ ಬಳಿಕ ಮತ್ತೆ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿದ್ದಾರೆ. ಆ ಮೂಲಕ ಚಿತ್ರರಂಗಕ್ಕೆ ಹೊಸ ಹುರುಪು ಬಂದಂತಾಗಿದೆ. ಮುಂದಿನ ದಿನಗಳಲ್ಲಿ 'ಭೀಮ' ಆರ್ಭಟ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











