ತಿದ್ದಿ ತೀಡಿದ ಗುರುಗಳಿಗೆ ವಂದನೆ ಸಲ್ಲಿಸಿದ ತಾರೆಯರು
ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವಲ್ಲಿ ಗುರುಗಳ ಪಾತ್ರ ಪ್ರಮುಖವಾದುದ್ದು. ಪ್ರತಿಯೊಬ್ಬರು ತಮ್ಮನ್ನು ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ತಿದ್ದಿ ತೀಡಿ ಬುದ್ದಿ ಹೇಳಿದ ಗುರುಗಳನ್ನು ನೆನಪು ಮಾಡಿಕೊಳ್ಳುವ ದಿನವೇ ಸೆಪ್ಟೆಂಬರ್ 5. ಅದೇ ಶಿಕ್ಷಕರ ದಿನಾಚರಣೆ.
ಕನ್ನಡ ಸಿನಿಮಾರಂಗದಲ್ಲಿರುವ ಕಲಾವಿದರು, ನಿರ್ದೇಶಕರು ತಮ್ಮ ತಮ್ಮ ಗುರುಗಳಿಗೆ ಅವರದ್ದೇ ರೀತಿಯಲ್ಲಿ ವಂದನೆ ಸಲ್ಲಿಸಿದ್ದಾರೆ. ಕೆಲವರಿಗೆ ಶಾಲೆಯಲ್ಲಿ ಕಲಿಸಿದವರೇ ಗುರುಗಳಾದರೆ, ಇನ್ನು ಕೆಲವರಿಗೆ ಸಿನಿಮಾವೇ ಕಲಿಸಿದ ಶಿಕ್ಷಕ. ಅನೇಕರಿಗೆ ತಮ್ಮ ಸುತ್ತಾ ಮುತ್ತ ಇರುವ ಸ್ನೇಹಿತರೇ ಗುರುಗಳಾಗಿ ಬದಲಾಗಿದ್ದಾರೆ.
ಹಾಗಾದರೆ ಸ್ಟಾರ್ ಗಳು ತಮ್ಮ ಗುರುಗಳ ಬಗ್ಗೆ ಹೇಳಿಕೊಂಡಿರುವ ಮಾತುಗಳೇನು? ಕಲಾವಿದರ ಕಣ್ಣಲ್ಲಿ ಕಲಿಸಿದ ಗುರುಗಳೆಂದರೆ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ. ಫೋಟೋ ಸ್ಲೈಡ್ ಗಳ ಮೂಲಕ ಓದಿ.

ದುನಿಯಾ ಸೂರಿಯನ್ನ ಗುರುವೆಂದ ಭಟ್ಟರು
ನಟ, ನಿರ್ದೇಶಕ ಯೋಗರಾಜ್ ಭಟ್ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ಗುರುವಿನ ಬಗ್ಗೆ ಬರೆದುಕೊಂಡಿದ್ದಾರೆ. "ನನ್ನದೊಂದು ಕವಿತೆ ಹಾಳೆಯ ಮೇಲೆ ಕೂತ ಚಿಟ್ಟೆಯ ಚಿತ್ರ... ಚಿತ್ರ ತೆಗೆದದ್ದು ಸೂರಿ... ಇಂತವೆಲ್ಲ ಅವನಿಗೆ ಮಾತ್ರ ಸಾಧ್ಯ... ದೃಶ್ಯಕ್ಕೆ ಗುರು ಅವನು... ಗುರು ವಂದನೆ"

ಗುರುವಿನಲ್ಲಿ ತ್ರಿಮೂರ್ತಿ ಕಂಡ ನಟ
ನವರಸನಾಯಕ ಜಗ್ಗೇಶ್ ಅದ್ಬುತವಾದ ವಾಕ್ಯಗಳಲ್ಲಿ ಗುರುಗಳ ಬಗ್ಗೆ ಬಣ್ಣಿಸಿದ್ದಾರೆ. "ನನಗೆ ಕನ್ನಡ ಕಲಿಸಿದ ಶಿಕ್ಷಕರು ಹೆಚ್.ಬಿ.ಕೃಷ್ಣಮೂರ್ತಿಗಳು.. ತಂದೆ ತಾಯಿ ನಂತರದ ಸ್ಥಾನ ಆದರ್ಶ ಗುರುಗಳಿಗೆ ನೀಡಲಾಗಿದೆ. ಗುರುವಿನಲ್ಲಿ ತ್ರಿಮೂರ್ತಿಗಳ ಕಾಣಬಹುದು.. ಗುರುಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರ.. ಶಿಕ್ಷಕರ ದಿನಾಚರಣೆ ಶುಭಕಾಮನೆಗಳು".

ಮೃಗವಾಗಿದ್ದ ನನ್ನನ್ನು ಮನುಷ್ಯನಾಗಿ ಮಾಡಿದ ಗುರು
ನಟ ದುನಿಯಾ ವಿಜಿ ಶಾಲೆಯಲ್ಲಿ ಕಲಿಯುತ್ತಿದ್ದ ಸಂದರ್ಭವನ್ನು ನೆನಪು ಮಾಡಿಕೊಳ್ಳುತ್ತಾರೆ. ಮೃಗಗಳಾಗಿದ್ದ ನಮ್ಮನ್ನು ಮನುಷ್ಯರನ್ನಾಗಿ ಮಾಡಿದ ಪ್ರತಿ ಶಿಕ್ಷಕರಿಗೂ ವಂದನೆ ವಂದನೆ ಎಂದಿದ್ದಾರೆ. ಹಾಗೆ ಸದ್ಯ ಜಿಮ್ ನಲ್ಲಿ ಟ್ರೈನಿಂಗ್ ಕೊಡುತ್ತಿರುವ ಪ್ರಸಾದ್ ಅವರಿಗೂ ಶುಭಾಶಯ ಹೇಳಿದ್ದಾರೆ.

ಶಿಕ್ಷಕರನ್ನು ಮರೆಯೋದಿಲ್ಲ ಎಂದ ಡಾಲಿ
ಧನಂಜಯ ಇಂದಿಗೂ ಪ್ರತಿ ಶಿಕ್ಷಕರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರಂತೆ. ಶಾಲೆಯಲ್ಲಿ ವಿದ್ಯಾ ಹೇಳಿಕೊಟ್ಟ ಜೋಸೆಫ್ ಮಾಸ್ಟರ್ ಹಾಗೂ ನಾಟಕರಂಗದಲ್ಲಿ ನಟನೆ ಹೇಳಿಕೊಟ್ಟ ಮೈಮ್ ರಮೇಶ್ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.

ಗುರುವಿಗೆ ಕೊಡಗಿನ ಕುವರಿಯ ವಂದನೆ
ನಟಿ ಹರ್ಷಿಕಾ ಪೂಣಚ್ಚ ತಮ್ಮ ಇಂಜಿನಿಯರಿಂಗ್ ಸಮಯದಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ಶಿಕ್ಷಕರಿಗೆ ವಂದನೆ ಅರ್ಪಿಸಿದ್ದಾರೆ. ಡಿ ಕೆ ಮೋಹನ್ ಎನ್ನುವ ಶಿಕ್ಷಕರಿಗೆ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಪೋಷಕರ ನಂತರದ ಸ್ಥಾನ ಶಿಕ್ಷಕರಿಗೆ
ನಟಿ ಸಂಗೀತ ಭಟ್ ತನ್ನ ಶಿಕ್ಷಕಿಯ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಪೋಷಕರ ನಂತರದ ಸ್ಥಾನದಲ್ಲಿ ಶಿಕ್ಷಕರೇ ಇರುತ್ತಾರೆ. ನಾನು ತಪ್ಪು ದಾರಿ ತುಳಿದಾಗ ನಮ್ಮನ್ನು ತಿದ್ದಿ ಬುದ್ದಿ ಹೇಳುತ್ತಾರೆ. ಜಗತ್ತಿನ ಪರಿಚಯ ಮಾಡಿಸುತ್ತಾರೆ". ಎನ್ನುವುದನ್ನು ಫೋಟೋ ಜೊತೆಯಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











