'ಕೊರಗಜ್ಜ' ಚಿತ್ರೀಕರಣ ಶುಭಾ ಪೂಂಜಾ ಜೊತೆ ಯುವಕರ ಕಿರಿಕ್: ಈ ಘಟನೆಗೂ ಸಾಗರದ ಬಿಜೆಪಿ ಘಟಕಕ್ಕೂ ಏನು ಸಂಬಂಧ?
'ಕಾಂತಾರ' ಸಿನಿಮಾ ಬಳಿಕ ಕರಾವಳಿ ಭಾಗದ ದೈವದ ಕುರಿತು ಮತ್ತೊಂದು ಸಿನಿಮಾ ನಿರ್ಮಾಣ ಆಗುತ್ತಿದೆ. ದಕ್ಷಿಣ ಕನ್ನಡದ ಕುತ್ತಾರಿನ 'ಕೊರಗಜ್ಜ' ದೈವದ ಬಗ್ಗೆ ಹಲವು ದಿನಗಳಿಂದ ಸಿನಿಮಾ ನಿರ್ಮಾಣ ಆಗುತ್ತಿದೆ. ಸುಧೀರ್ ಅತ್ತಾವರ್ ಅದ್ಧೂರಿಯಾಗಿಯೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾ ಬಾಲಿವುಡ್ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರು ನಟಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಬೀರ್ ಬೇಡಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಇವರೊಂದಿಗೆ ಕನ್ನಡದ ಹಿರಿಯ ನಟಿ ಭವ್ಯಾ ಕೂಡ ನಟಿಸುತ್ತಿದ್ದಾರೆ.

'ಕೊರಗಜ್ಜ' ದೈವದ ಮೇಲೆ ಕರಾವಳಿ ಭಾಗದ ಜನರಲ್ಲಿ ನಂಬಿಕೆ ಹೆಚ್ಚು. ಇತ್ತೀಚೆಗೆ ಕರ್ನಾಟಕದ ಮೂಲೆ ಮೂಲೆಯಿಂದಲೂ 'ಕೊರಗಜ್ಜ'ನ ದರ್ಶನ ಪಡೆಯುವುದಕ್ಕೆ ಭಕ್ತರು ಬರುತ್ತಿದ್ದಾರೆ. ಹೀಗಾಗಿ ಕೊರಗಜ್ಜನ ಮೇಲೆ ನಿರ್ದೇಶಕ ಸುಧೀರ್ ಅತ್ತಾವರ್ ಸಿನಿಮಾ ಮಾಡುತ್ತಿದ್ದಾರೆ. ಈ ಮೂಲಕ ಜನರಿಗೆ ಕೊರಗಜ್ಜನ ಮಹಿಮೆಯನ್ನು ತಿಳಿಸುವುದಕ್ಕೆ ಮುಂದಾಗಿದ್ದಾರೆ.
'ಕೊರಗಜ್ಜ' ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಕೊನೆಯ ಹಂತದ ಶೂಟಿಂಗ್ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇತ್ತೀಚೆಗೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಕುದುರೆ ಮುಖದಲ್ಲಿ ಇದೇ ಸಿನಿಮಾ ಹಾಡಿನ ಚಿತ್ರೀಕರಣವನ್ನು ನಡೆಸಲಾಗುತ್ತಿತ್ತು. ಬಾಲಿವುಡ್ನ ಜನಪ್ರಿಯ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಹೆಜ್ಜೆ ಹಾಕಿಸುತ್ತಿದ್ದರು.
'ಕೊರಗಜ್ಜ' ಸಿನಿಮಾದಲ್ಲಿನ ಈ ವಿಶೇಷ ಹಾಡಿಗೆ ಪೂಜಾ ಪೂಂಜಾ ಹೆಜ್ಜೆ ಹಾಕುತ್ತಿದ್ದಾರೆ. ಕುದುರೆಮುಖದ ಮೈದಾಡಿ ಗುಡ್ಡದಲ್ಲಿ 'ಕೊರಗಜ್ಜ' ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿರುವ ಯುವಕರು ಪುಂಡಾಟ ಮಾಡಿದ್ದಾರೆ. ಹಾಡಿನ ಶೂಟಿಂಗ್ ವೇಳೆ ಕಿಡಿಗೇಡಿಗಳು ನಟಿಯ ಜೊತೆ ಅಸಭ್ಯವಾಗಿ ವರ್ತಿಸಿ ಕೃತ್ಯ ಎಸಗಿದ್ದಾರೆ. ಹೀಗಾಗಿ ಚಿತ್ರೀಕರಣವನ್ನೇ ಸ್ಥಗಿತಗೊಳಿಸಿದ್ದಾರೆ.

'ಕೊರಗಜ್ಜ' ಸಿನಿಮಾ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಟಿ ಶುಭಾ ಪೂಂಜಾ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ್ದಾರೆ. ಯುವಕರ ಈ ಅಸಭ್ಯ ವರ್ತನೆಯಿಂದ ಬೇಸರಗೊಂಡ ಚಿತ್ರತಂಡ ಹಾಡಿನ ಚಿತ್ರೀಕರಣವನ್ನು ಅಲ್ಲಿಗೆ ನಿಲ್ಲಿಸಿದ್ದಾರೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ಈ ಘಟನೆ ನಡೆದಿದೆ.
ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಕಳಸದಲ್ಲಿ ನಡೆದ ಈ ಘಟನೆಯ ಬಗ್ಗೆ ಚಿತ್ರತಂಡ ಇದೂವರೆಗೂ ದೂರನ್ನು ದಾಖಲು ಮಾಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಸುಧೀರ್ ಅತ್ತಾವರ್ "ಸಿನಿಮಾ ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು." ಎಂದಿದ್ದಾರೆ.
ಹಾಗೇಯೇ ಯುವಕರು ಸಾಗರದ ಬಿಜೆಪಿ ಘಟಕದವರು ಎಂದು ಹೇಳಿಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ. "ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ" ಎಂದು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದ್ದಾರೆ. ಹೀಗಾಗಿ ಸಾಗರದ ಬಿಜೆಪಿ ಘಟಕಕ್ಕೂ ಈ ಘಟನೆಗೂ ಏನು ಸಂಬಂಧ ಅಂತ ಸಿನಿಮಾ ಮಂದಿ ತಲೆಕೆಡಿಸಿಕೊಂಡಿದ್ದಾರೆ.


Click it and Unblock the Notifications











