ರವಿಚಂದ್ರನ್ ತಂದೆ ನೆನೆದು ಕಣ್ಣೀರು ಹಾಕಿದ ದ್ವಾರಕೀಶ್
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುರಿತು ಮಾತನಾಡುವ ವೇಳೆ ಕನ್ನಡದ ಕುಳ್ಳ, ಹಿರಿಯ ನಿರ್ಮಾಪಕ-ನಟ ದ್ವಾರಕೀಶ್ ಅವರು ಭಾವುಕರಾದ ಘಟನೆ ಆಯುಷ್ಮಾನ್ ಭವ ಸುದ್ದಿಗೋಷ್ಠಿಯಲ್ಲಿ ನಡೆಯಿತು.
ದ್ವಾರಕೀಶ್ ನಿರ್ಮಾಣದ 'ಆಯುಷ್ಮಾನ್ ಭವ' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇದಿಕೆಯಲ್ಲಿ ರವಿಚಂದ್ರನ್ ಕುರಿತು ಮಾತು ಆರಂಭಿಸಿದಾಗ, ದ್ವಾರಕೀಶ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು.
''ರವಿಚಂದ್ರನ್ ಅವರನ್ನ ನೋಡಿದ್ರೆ ಅವರ ತಂದೆ ವೀರಸ್ವಾಮಿ ನೆನಪಾಗ್ತಾರೆ. 'ಸಿಂಗಾಪೂರ್ ನಲ್ಲಿ ರಾಜಾ-ಕುಳ್ಳ' ಸಿನಿಮಾ ನಾನು ಮಾಡಲು ವೀರಾಸ್ವಾಮಿ ಅವರೇ ಕಾರಣ. ಅದನ್ನ ನಾನು ಮರೆಯುವುದಿಲ್ಲ. ಆಗ, ರವಿಚಂದ್ರನ್ ಅವರನ್ನ ಸಿಂಗಾಪೂರ್ಗೆ ಕರೆದುಕೊಂಡು ಹೋಗಿದ್ದೆ. ಆಗಿನ್ನು ಸ್ಟಾರ್ ಆಗಿರಲಿಲ್ಲ. ರವಿಚಂದ್ರನ್ ಇಷ್ಟು ದೊಡ್ಡ ನಟ ಆಗ್ತಾನೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ಬಹುಶಃ ಅದು ಆಗಲೇ ಗೊತ್ತಾಗಿದ್ದರೇ, ನಾಲ್ಕೈದು ಚಿತ್ರಕ್ಕೆ ಕಾಲ್ ಶೀಟ್ ತಗೊಳ್ಳುತ್ತಿದ್ದೆ'' ಎಂದು ನೆನಪು ಮೆಲುಕು ಹಾಕಿದರು.
1978ರಲ್ಲಿ ತೆರೆಕಂಡಿದ್ದ 'ಸಿಂಗಾಪೂರ್ ನಲ್ಲಿ ರಾಜಾ-ಕುಳ್ಳ' ಚಿತ್ರವನ್ನ ಸಿವಿ ರಾಜೇಂದ್ರನ್ ನಿರ್ದೇಶಿಸಿದ್ದರು. ವಿಷ್ಣುವರ್ಧನ್,ದ್ವಾರಕೀಶ್, ಮಂಜುಳಾ, ಲೋಕನಾಥ್, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್ ಸೇರಿದಂತೆ ಹಲವರು ನಟಿಸಿದ್ದರು.

ಈ ಚಿತ್ರವನ್ನ ವಿತರಣೆ ಮಾಡಿದ್ದು ರವಿಚಂದ್ರನ್ ಅವರ ತಂದೆ ಮಾಲಿಕತ್ವದ 'ಈಶ್ವರಿ ಪಿಕ್ಚರ್ಸ್' ಸಂಸ್ಥೆ. ಈ ನೆನಪನ್ನ ದ್ವಾರಕೀಶ್ 'ಆಯುಷ್ಮಾನ್ ಭವ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡರು.
ಪಿ ವಾಸು ನಿರ್ದೇಶಿಸಿರುವ 'ಆಯುಷ್ಮಾನ್ ಭವ' ಚಿತ್ರವನ್ನ ದ್ವಾರಕೀಶ್ ನಿರ್ಮಿಸಿದ್ದಾರೆ. ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ್ ನಾಗ್ ನಟಿಸಿದ್ದಾರೆ. ಮುಂದಿನ ತಿಂಗಳ ಆರಂಭದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications











