ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಮನೆ ಮಾರಿದ ದ್ವಾರಕೀಶ್: ರಿಷಬ್ ಶೆಟ್ಟಿ ಪಾಲಾದ ಪ್ರೀತಿಯ ಬಂಗಲೆ
ಸ್ಯಾಂಡಲ್ ವುಡ್ ನ ಕುಳ್ಳ ಎಂದೇ ಖ್ಯಾತಿಗಳಿಸಿರುವ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲು ಚಂದನವನದ ಹಿರಿಯ ನಿರ್ಮಾಪಕ ತನ್ನ ಪ್ರೀತಿಯ ಬಂಗ್ಲೆಯನ್ನು ಮಾರಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದ ತುಂಬಾ ಗುಲ್ಲಾಗಿದೆ.
52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ದ್ವಾರಕೀಶ್ ಅವರದ್ದು. ಸುದೀರ್ಘ ಅವಧಿಯಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್ ಈ ಇಳಿ ವಯಸ್ಸಿನಲ್ಲಿ ಮನೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರಂತೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡಿ, ಅದ್ಭುತವಾಗಿ ನಟಿಸಿ ಕನ್ನಡಿಗರಿಗೆ ಬರಪೂರ ಮನರಂಜನೆ ನೀಡಿದ್ದ ದ್ವಾರಕೀಶ್ ಅವರಿಗೆ ಈಗ 78 ವರ್ಷ.
ಸುದೀರ್ಘ ವರ್ಷಗಳ ಕಾಲ ಚಿತ್ರರಂಗಕ್ಕಾಗಿ ದುಡಿದು, ಕಲಾಸೇವೆ ಮಾಡಿರುವ ದ್ವಾರಕೀಶ್ ಆರಾಮಾಗಿ, ಸುಖಕರವಾಗಿ ಜೀವನ ಮಾಡಬೇಕಾಗಿರುವ ಈ ಇಳಿವಯಸ್ಸಿನಲ್ಲಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ತಾವು ಸಂಪಾದಿಸಿದ 13ನೇ ಮನೆಯನ್ನು ಮಾರಿ, ಹೊರಬಂದಿದ್ದಾರೆ. ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ಮತ್ತು ನಟನ ಈ ಕರುಣಾಜನಕ ಕತೆಯನ್ನು 'ಸಿನಿಬಜ್' ಕನ್ನಡ ವೆಬ್ ಪೋರ್ಟಲ್ ವರದಿ ಮಾಡಿದೆ. ಮುಂದೆ ಓದಿ...

ಕಷ್ಟದಲ್ಲಿ ಸದಾ ಹೆಗಲು ಕೊಡುತ್ತಿದ್ದ ಗೆಳೆಯ ಇಲ್ಲ
ದ್ವಾರಕೀಶ್ ಆರ್ಥಿಕವಾಗಿ ದಿವಾಳಿ ಎದ್ದಿರುವುದು ಇದೇ ಮೊದಲೇನಲ್ಲ. ಪ್ರತಿಬಾರಿ ಸಂಕಷ್ಟಕ್ಕೆ ಸಿಲುಕಿದಾಗೆಲ್ಲಾ ಕೈ ಹಿಡಿದುದ್ದು, ಆಪ್ತಮಿತ್ರ ವಿಷ್ಣುವರ್ಧನ್. ಮುನಿಸಿಕೊಂಡು ವಿಷ್ಣುವರ್ಧನ್ ಅವರಿಂದ ದೂರ ಆದರೂ ಸಹ ಕುಳ್ಳ ಗೆಳೆಯನಿಗಾಗಿ ಮತ್ತೆ ಸಹಾಯಕ್ಕೆ ಬರುತ್ತಿದ್ದಿದ್ದು ಅದೇ ಸಾಹಸಸಿಂಹ. ಆದರೀಗ ಹೆಗಲು ನೀಡಲು ಗೆಳೆಯ ವಿಷ್ಣುವರ್ಧನ್ ಇಲ್ಲ. ಮಕ್ಕಳು ಸಹ ಅಪ್ಪ ಮಾಡಿದನ್ನು ಬೆಳೆಸಿಕೊಂಡು, ಉಳಿಸಿಕೊಂಡು ಹೋಗುವಲ್ಲಿ ಎಡವಿದ್ದಾರೆ.

ಅಪ್ಪನ ಹಾದಿಯಲ್ಲೇ ಸಾಗುತ್ತಿರುವ ಪುತ್ರ ಯೋಗಿ
ಸಾಲ ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳು ಆದಾಯ ಗಳಿಸಿದ್ರು ಸಹ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗಿಲ್ಲ. ಚಿತ್ರರಂಗದ ಬಹುತೇಕರ ಜೊತೆ ಕಿರಿಕ್ ಮಾಡಿಕೊಂಡಿರುವ ಯೋಗಿ ಎಲ್ಲರಿಂದಲೂ ದೂರ ಉಳಿದಿದ್ದಾರೆ. ಒಂದಿಷ್ಟು ದಿನಗಳು ಸುದೀಪ್ ಆಪ್ತ ಬಳಗದಲ್ಲಿ ಕಾಣಿಸಿಕೊಂಡರೂ ಸಹ ಕೆಲವೇ ಸಮಯದ ನಂತರ ಅಲ್ಲಿಂದನೂ ಹೊರಬಂದರು.

ಜಯಣ್ಣ ಜೊತೆಯೂ ಕಿರಿಕ್
ಕೊನೆಯದಾಗಿ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಆಗಲೇ ಸಾಲದ ಹೊರೆಯನ್ನು ಹೊತ್ತುಕೊಂಡಿದ್ದ ಯೋಗಿಗೆ ಆಯುಷ್ಮಾನ್ ಭವ ಸೋಲು ಮತ್ತಷ್ಟು ಪೆಟ್ಟು ನೀಡಿತು. ಆ ಸಮಯದಲ್ಲಿ ವಿತರಕ ಜಯಣ್ಣ ಅವರಿಂದ ಪಡೆದುಕೊಂಡಿದ್ದ ಸಾಲವನ್ನು ತೀರಿಸದೇ ಅವರ ಜೊತೆಯೂ ಕಿರಿಕ್ ಮಾಡಿಕೊಂಡರು.

10.5 ಕೋಟಿ ರೂ.ಗೆ ಬಂಗ್ಲೆ ಮಾರಿದ ದ್ವಾರಕೀಶ್
ಕೋಟಿ ಕೋಟಿ ಸಾಲವನ್ನು ತೀರಿಸದೆ ಒದ್ದಾಡುತ್ತಿದ್ದ ದ್ವಾರಕೀಶ್ ಮತ್ತು ಪುತ್ರ ಯೋಗಿ ಇಬ್ಬರಿಗೆ ಉಳಿದಿದ್ದು ಒಂದೇ ದಾರಿ ಕೊನೆಯದಾಗಿ ಕಟ್ಟಿಸಿದ್ದ ಹೆಚ್ ಎಸ್ ಆರ್ ಲೇ ಔಟ್ ನ ಮನೆಯನ್ನು ಮಾರುವುದು. ಕೊನೆಗೆ ಈ ಮನೆಯನ್ನು 10.5 ಕೋಟಿ ರೂ. ಮಾರಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಮನೆ ಖರೀದಿಸಿದ ರಿಷಬ್ ಶೆಟ್ಟಿ
ವಿಶೇಷ ಎಂದರೆ ದ್ವಾರಕೀಶ್ ಅವರ ಬಂಗಲೆಯನ್ನು ಸ್ಯಾಂಡಲ್ ವುಡ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ನಟ ಮತ್ತು ನಿರ್ದೇಶಕ ರಿಷಬ್ ಹತ್ತೂವರೆ ಕೋಟಿ ಕೊಟ್ಟು ಮನೆಯನ್ನು ತನ್ನದಾಗಿಸಿಕೊಂಡಿದ್ದಾರಂತೆ.
Recommended Video

ದ್ವಾರಕೀಶ್ ಪುತ್ರ ಯೋಗಿ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫಿಲ್ಮಿ ಬೀಟ್ ಕನ್ನಡ ಟೀಂ ದ್ವಾರಕೀಶ್ ಪುತ್ರ ಯೋಗಿ ದ್ವಾರಕೀಶ್ ಗೆ ಕರೆಮಾಡಿದಾಗ, 'ಇದೊಂದು ದೊಡ್ಡ ವಿಚಾರನಾ? ಎಲ್ಲರೂ ಕರೆ ಮಾಡಿ ವಿಚಾರಿಸಲಿಕ್ಕೆ' ಎಂದು ಗರಂ ಆಗಿ ಫೋನ್ ಕಟ್ ಮಾಡಿದರು. ಮತ್ತೆ ಫೋನ್ ಪ್ರಯತ್ನಿಸಿದರೂ ಯೋಗಿ ಫೋನ್ ರಿಸೀವ್ ಮಾಡಿಲ್ಲ.


Click it and Unblock the Notifications











