ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
ಕನ್ನಡ ಚಿತ್ರರಂಗದ ಮೇರು ಪ್ರತಿಭೆ ದ್ವಾರಕೀಶ್. ಕರ್ನಾಟಕದ ಕುಳ್ಳ ಎಂದೇ ಜನಪ್ರಿಯರಾಗಿದ್ದ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ನಿರ್ಮಾಪಕನಾಗಿ ನಿರ್ದೇಶಕರಾಗಿ ಸೋಲು ಗೆಲುವು ಎಲ್ಲವನ್ನು ಕಂಡವರು ದ್ವಾರಕೀಶ್.
1942ರ ಆಗಸ್ಟ್ 19ರಂದು ಹುಣಸೂರಿನಲ್ಲಿ ಹುಟ್ಟಿದ ದ್ವಾರಕೀಶ್ ಮೈಸೂರಿನಲ್ಲಿ ಬನುಮಯ್ಯ ಶಾಲೆ, ಶಾರದಾ ವಿಲಾಸ್ ಶಾಲೆ, ಸಿಪಿಸಿ ಪಾಲಿಟೆಕ್ನಿಕ್ನಲ್ಲಿ ಓದಿ ಬೆಳೆದರು. ಮೈಸೂರಿನ ಗಾಂಧೀ ಚೌಕದಲ್ಲಿ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹೊಂದಿದ್ದ ದ್ವಾರಕೀಶ್ ಸಿನಿಮಾಗಳಲ್ಲಿ ನಟಿಸುವ ಕನಸು ಕಂಡಿದ್ದರು. ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರ ಸಹಾಯದಿಂದ ಬಣ್ಣದ ಲೋಕಕ್ಕೆ ಬಂದೇಬಿಟ್ಟರು.

ಸಿ.ವಿ. ಶಂಕರ್ ನಿರ್ದೇಶನದಲ್ಲಿ 'ವೀರಸಂಕಲ್ಪ' ಚಿತ್ರದಲ್ಲಿ ಮೊದಲಿಗೆ ನಟಿಸಿದರು. ತಮ್ಮ ನ್ಯೂನ್ಯತೆಗಳನ್ನೇ ಪ್ಲಸ್ ಮಾಡಿಕೊಂಡು ಗೆದ್ದವರು ದ್ವಾರಕೀಶ್. ಬರೀ ಹಾಸ್ಯನಟನಾಗಿ ಉಳಿದುಬಿಡದೇ ನಿರ್ಮಾಪಕನಾಗಿ ನಿರ್ದೇಶಕನಾಗಿಯೂ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದರು. 'ವೀರ ಸಂಕಲ್ಪ', 'ಪರೋಪಕಾರಿ','ಸತ್ಯ ಹರಿಶ್ಚಂದ್ರ', 'ಕ್ರಾಂತಿ ವೀರ', 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಗಾಂಧೀನಗರ', 'ಬಾಳು ಬೆಳಗಿತು', 'ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್ಕುಮಾರ್ ಜೊತೆ ದ್ವಾರಕೀಶ್ ನಟಿಸಿದ್ದರು.
'ಮೇಯರ್ ಮುತ್ತಣ್ಣ' ಚಿತ್ರವನ್ನು ನಿರ್ಮಾಣ ಮಾಡಿ ಗೆದ್ದಿದ್ದರು. ದ್ವಾರಕೀಶ್ 'ಕುಳ್ಳ ಏಜೆಂಟ್ 000' ಚಿತ್ರ ನಿರ್ಮಿಸಿ ತಾವೇ ಹೀರೋ ಆದರು. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ವಿಷ್ಣುವರ್ಧನ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದ್ದು ಗೊತ್ತೇಯಿದೆ. ನಿಜ ಜೀವನದಲ್ಲಿ ಕೂಡ ಇಬ್ಬರೂ ಬಹಳ ಆಪ್ತ ಸ್ನೇಹಿತರಾಗಿದ್ದರು. ಸಾಕಷ್ಟು ಬಾರಿ ಮುನಿಸು, ಜಗಳ ಕೂಡ ನಡೆದಿತ್ತು. ಬಹಳ ವರ್ಷಗಳ ಬಳಿಕ 'ಆಪ್ತ ಮಿತ್ರ' ಚಿತ್ರದ ಮೂಲಕ ಇಬ್ಬರೂ ಗೆದ್ದರು. ಈ ಸಿನಿಮಾದಿಂದ ದ್ವಾರಕೀಶ್ ತಾವು ಕಳೆದುಕೊಂಡಿದ್ದ ಜೀವನವನ್ನು ಮತ್ತೆ ಪಡೆದರು.
ದ್ವಾರಕೀಶ್ ವಿದೇಶಗಳಲ್ಲಿ ಕನ್ನಡ ಸಿನಿಮಾಗಳನ್ನು ನಿರ್ಮಿಸುವ ಕನಸು ಕಂಡರು. 'ಸಿಂಗಾಪುರದಲ್ಲಿ ರಾಜಾಕುಳ್ಳ' ಹಾಗೂ 'ಆಫ್ರಿಕಾದಲ್ಲಿ ಶೀಲ' ಈ ದಿಶೆಯಲ್ಲಿ ಅದ್ಭುತ ಪ್ರಯತ್ನವಾಗಿತ್ತು. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ದ್ವಾರಕೀಶ್ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ದ್ವಾರಕೀಶ್. ಇತ್ತೀಚಿ ವರ್ಷಗಳಲ್ಲಿ 'ಆಟಗಾರ', 'ಚೌಕ', 'ಅಮ್ಮ ಐ ಲವ್ ಯು' ಚಿತ್ರಗಳನ್ನು ನಿರ್ಮಿಸಿದ್ದರು.

50ಕ್ಕೂ ಅಧಿಕ ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. 17ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಪ್ರಚಂಡ ಕುಳ್ಳ 'ಆಟಗಾರ' ಚಿತ್ರದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದರು. 1966ರಲ್ಲಿ ಬಂದ 'ಮಮತೆಯ ಬಂಧನ' ಚಿತ್ರಕ್ಕೆ ಸಹ ನಿರ್ಮಾಪಕರಾಗಿ ದ್ವಾರಕೀಶ್ ಸಿನಿಮಾ ನಿರ್ಮಾಣಕ್ಕಿಳಿದರು. ಬಳಿಕ 'ಮೇಯರ್ ಮುತ್ತಣ್ಣ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗಿದ್ದರು. 1985ರಲ್ಲಿ ವಿಷ್ಣುವರ್ಧನ್ ನಟಿಸಿದ 'ನೀ ಬರೆದ ಕಾದಂಬರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
ರಜನಿಕಾಂತ್ ನಟನೆಯ 'ನಾನ್ ಆಡಿಮೈ ಇಲ್ಲೈ' ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದರು. 'ಆಫ್ರಿಕಾದಲ್ಲಿ ಶೀಲ' ಆ ಕಾಲಕ್ಕೆ ದ್ವಾರಕೀಶ್ ಮಾಡಿದ ದೊಡ್ಡ ಸಾಹಸವಾಗಿತ್ತು. ಜಿಂಬಾಬ್ವೆಯ ಕಾಡಿನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿತ್ತು. ಕುದುರೆಗೆ ಬೀಬ್ರಾ ರೀತಿ ಬಣ್ಣ ಬಳಿದು ಚಿತ್ರೀಕರಣ ಮಾಡುವ ಪ್ರಯತ್ನ ಮಾಡಿದ್ದರು. 2001ರಲ್ಲಿ ಬಂದ 'ಮಜ್ನು' ದ್ವಾರಕೀಶ್ ನಿರ್ದೇಶಿಸಿದ ಕೊನೆಯ ಸಿನಿಮಾ.
ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ ದ್ವಾರಕೀಶ್ ನಾಂದಿ ಹಾಡಿದವರು ದ್ವಾರಕೀಶ್. ಸೋತಲ್ಲೇ ಗೆಲ್ಲಬೇಕು ಎನ್ನುವ ಹಠ ಅವರಿಗಿತ್ತು. ಇದಕ್ಕಾಗಿ ಸಾಕಷ್ಟು ಬಾರಿ ತಮ್ಮ ಮನೆಯನ್ನು ಮಾರಿ ಕೊಂಡಿದ್ದರು. ಆದರೂ ಹಠ ಬಿಡುತ್ತಿರಲಿಲ್ಲ.


Click it and Unblock the Notifications











