ಹಿರಿಯ ನಟ ದ್ವಾರಕೀಶ್ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ
ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಸೇರಿದಂತೆ ಮೂವರಿಗೆ ಬೆಂಗಳೂರು ವಿವಿ ಡಾಕ್ಟರೇಟ್ ಘೋಷಿಸಿದೆ. ಚಿತ್ರರಂಗದಲ್ಲಿ ನಟ ದ್ವಾರಕೀಶ್ ಮಾಡಿದ ಸಾಧನೆ ಪುರಸ್ಕರಿಸಿ ಗೌರದ ಡಾಕ್ಟರೇಟ್ಗೆ ಅವರನ್ನು ಆಯ್ಕೆ ಮಾಡಲಾಗಿದೆ. 1964ರಲ್ಲಿ 'ವೀರಸಂಕಲ್ಪ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದ್ವಾರಕೀಶ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
50 ಸಿನಿಮಾಗಳನ್ನು ನಿರ್ಮಿಸಿರುವ ದ್ವಾರಕೀಶ್, 15ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಡಾ. ರಾಜ್ಕುಮಾರ್, ವಿಷ್ಣುವರ್ಧನ್ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ ಹೆಗ್ಗಳಿಕೆ ದ್ವಾರಕೀಶ್ ಅವರದ್ದು. ಇನ್ನು ಹಾಸ್ಯ ಕಲಾವಿದರಾಗಿ, ನಾಯಕ ನಟನಾಗಿ ನೂರಾರು ಸಿನಿಮಾಗಳಲ್ಲಿ ದ್ವಾರಕೀಶ್ ನಟಿಸಿದ್ದಾರೆ. ಕೊಂಚ ಕುಬ್ಜರಾಗಿರುವ ದ್ವಾರಕೀಶ್ ಅವರನ್ನು ಕುಳ್ಳ ದ್ವಾರಕೀಶ್ ಎಂತಲೇ ಕರೆಯುತ್ತಾರೆ. ಕನ್ನಡ ಮಾತ್ರವಲ್ಲ ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದಾರೆ.

ಸೋದರ ಮಾವ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಗರಡಿಯಲ್ಲಿ ಬೆಳೆದ ದ್ವಾರಕೀಶ್, 20 ವರ್ಷಕ್ಕೆ ಚಿತ್ರರಂಗಕ್ಕ ಬಂದವರು. ಮೈಸೂರಿನಲ್ಲಿ ಹುಟ್ಟಿ ಬೆಳೆದ ದ್ವಾರಕೀಶ್ ಸಹೋದರನ ಜೊತೆ ಸೇರಿ 'ಭಾರತ್ ಆಟೋ ಸ್ಪೇರ್ಸ್' ಆರಂಭಿಸಿದರು. ಆದರೆ ನಟನೆಯ ಗೀಳಿನಿಂದ ಮಾವನ ಸಹಾಯದಿಂದ ಚಿತ್ರಗಳಲ್ಲಿ ನಟಿಸೋಕೆ ಆರಂಭಿಸಿದರು. ನಂತರ ವ್ಯಾಪಾರ ಬಿಟ್ಟು ಸಂಪೂರ್ಣವಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡರು. ಸಹ ನಿರ್ಮಾಪರಾಗಿ 'ಮಮತೆಯ ಮಡಿಲು' ಸಿನಿಮಾ ನಿರ್ಮಿಸಿದ್ದ ದ್ವಾರಕೀಶ್, ನಂತರ ಅಣ್ಣಾವ್ರ 'ಮೇಯರ್ ಮುತ್ತಣ್ಣ' ಸಿನಿಮಾ ನಿರ್ಮಿಸಿ ಗೆದ್ದರು.

ಇನ್ನು ದ್ವಾರಕೀಶ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರು ಒಂದಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಗೆದ್ದರು. 'ಕಿಟ್ಟು ಪುಟ್ಟು', 'ಕಳ್ಳ ಕುಳ್ಳ' 'ಸಿಂಗಾಪುರದಲ್ಲಿ ರಾಜ ಕುಳ್ಳ' ಸೂಪರ್ ಹಿಟ್ ಆಗಿತ್ತು. ಸಿನಿಮಾ ನಿರ್ಮಾಣದ ವಿಚಾರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ಗೆದ್ದವರು ದ್ವಾರಕೀಶ್. ದಶಕಗಳ ಹಿಂದೆಯೇ ವಿದೇಶಗಳಲ್ಲಿ ಕನ್ನಡ ಸಿನಿಮಾಗಳನ್ನು ಚಿತ್ರೀಕರಿಸಿದ್ದರು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಪುರಸ್ಕರಿಸಿ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಘೋಷಿಸಿದೆ. ಡಿಸೆಂಬರ್ 5ರಂದು ಜ್ಞಾನಭಾರತಿ ಆಡಿಟೋರಿಯಂನಲ್ಲಿ ನಡೆಯುವ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ.


Click it and Unblock the Notifications











