ಸ್ಯಾಂಡಲ್ ವುಡ್ ನ ಹೊಸ 'ಗುರು ಶಿಷ್ಯರು' ಇವರೇ ನೋಡಿ
'ಗುರು ಶಿಷ್ಯರು' ಎಂದಾಕ್ಷಣ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ನಟನೆಯ ಸಿನಿಮಾ ನೆನಪಾಗುತ್ತೆ. ಖ್ಯಾತ ನಿರ್ದೇಶಕ ಹೆಚ್ ಆರ್ ಭಾರ್ಗವ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದ ಈ ಸಿನಿಮಾ 1981ರಲ್ಲಿ ತೆರೆಗೆ ಬಂದಿದೆ.
ಚಿತ್ರದಲ್ಲಿ ಮಂಜುಳ, ಜಯಮಾಲಿನಿ ಹೇಮ ಚೌಧರಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದ ಈ ಸಿನಿಮಾದ ಬಗ್ಗೆ ಈಗ್ಯಾಕೆ ಮಾತು ಅಂತೀರಾ? ಗುರು ಶಿಷ್ಯರು ಸಿನಿಮಾ ಮತ್ತೆ ಬರ್ತಿದೆ. ಆದರೆ ಈ ಬಾರಿ ದ್ವಾರಕೀಶ್ ಇರಲ್ಲ. ಬದಲಾಗಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂದು (ಡಿಸೆಂಬರ್ 21) ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ಹಿರಿಯ ನಟ ಮತ್ತು ನಿರ್ಮಾಪಕ ದ್ವಾರಕೀಶ್ ಅನಾವರಣ ಮಾಡಿದ್ದಾರೆ. ಈ ಬಗ್ಗೆ ಶರಣ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ದ್ವಾರಕೀಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮುಂದಿನ ಪ್ರಯತ್ನ ಗುರು ಶಿಷ್ಯರು. ಹರಸಿ, ಹಾರೈಸಿ ಎಂದು ಹೇಳಿದ್ದಾರೆ.

40 ವರ್ಷಗಳ ಬಳಿಕ ಇದೇ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಈ ಬಾರಿಯ ಗುರು ಶಿಷ್ಯರು ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ತರುಣ್ ಸುಧೀರ್. ಈ ಬಗ್ಗೆ ನಟ ಶರಣ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
ಫಸ್ಟ್ ಲುಕ್ ನಲ್ಲಿ ಒಂದೆಡೆ ಶರಣ್ ಮತ್ತೊಂದೆಡೆ ಮಕ್ಕಳು ಹಗ್ಗಜಗ್ಗಾಡುತ್ತಿರುವ ಚಿತ್ರವಿದೆ. ವಿಶೇಷ ಎಂದರೆ 1995ರ ಕಾಲಘಟ್ಟದ ಕಥೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಸಿನಿಮಾತಂಡ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.
ಅಂದಹಾಗೆ ನಿರ್ದೇಶಕ ತರುಣ್ ಸುಧೀರ್ ಸದ್ಯ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ರಾಬರ್ಟ್ ಸಿನಿಮಾ ಮುಂದಿನ ವರ್ಷ ಜನವರಿಗೆ ರಿಲೀಸ್ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಅಲ್ಲದೆ ದರ್ಶನ್ ಜೊತೆ ಮತ್ತೊಂದು ಸಿನಿಮಾ ಮಾಡಲು ತರುಣ್ ಸುಧೀರ್ ಈಗಾಗಲೇ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ತರುಣ್ ಶರಣ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಬಾರಿಯ ಗುರು ಶಿಷ್ಯರು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದ್ದಾರೆ.


Click it and Unblock the Notifications











