twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕರನ್ನೇ ಯಾಕೆ ಪ್ರೋತ್ಸಾಹಿಸಿದರು ?

    By Super
    |

    'ಜನ ಇನ್ನೂ ನನ್ನ ಮರೆತಿಲ್ಲ. "ಹಾಗಂತ ಕನ್ನಡದ ಕುಳ್ಳ ದ್ವಾರಕೀಶ್‌ ನಂಬಿದ್ದಾರೆ. ಆ ನಂಬಿಕೆಯೇ ಅವರನ್ನು ಮರಳಿ ಬರುವಂತೆ ಮಾಡಿದೆ. ಶುಕ್ರವಾರ(ಆ.31) ದ್ವಾರಕೀಶ್‌ ನಿರ್ಮಾಣ ನಿರ್ದೇಶನದ 'ಮಜ್ನೂ" ಚಿತ್ರ ತೆರೆಕಾಣುವ ಮೂಲಕ, ದ್ವಾರ್ಕಿ ಪುತ್ರ ಗಿರಿ ದ್ವಾರ ಕೀಶ್‌ ಅವರೂ ತಮ್ಮ ಅದೃಷ್ಟವನ್ನು ಮತ್ತೊಮ್ಮೆ ಪರೀಕ್ಷಿಸುತ್ತಿದ್ದಾರೆ. ಈ ಹಿಂದೆ ಈ ಹುಡುಗ ತನ್ನ ಸೋದರ ಅಭಿ ಜೊತೆ ನಟಿಸಿದ 'ಹೃದಯ ಕಳ್ಳರು" ಚಿತ್ರ ಫ್ಲಾಪ್‌ ಆಗಿತ್ತು.

    ಇತ್ತೀಚೆಗೆ ಟೀವಿ ಚಾನೆಲ್‌ ಒಂದರಲ್ಲಿ ಕಾಣಿಸಿಕೊಂಡ ದ್ವಾರಕೀಶ್‌ ಅವರಿಗೆ ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆ ಹೀಗಿತ್ತು.

    'ನಿಮ್ಮ ಕಾಲ ನಡೀತಾ ಇದ್ದಾಗ ನೀವು ಕಣಗಾಲ್‌ ಪ್ರಭಾಕರ್‌ ಶಾಸ್ತ್ರಿ ಅಥವಾ ಹುಣಸೂರು ಕೃಷ್ಣಮೂರ್ತಿ ಅವರಂಥ ಪ್ರತಿಭೆಗಳನ್ನು ಬಳಸಿಕೊಳ್ಳೋ ಬದಲಾಗಿ ಕೆ.ಆರ್‌.ದಾಸ್‌ ಅವರಂಥ ಮೀಡಿಯೋಕರ್‌ ನಿರ್ದೇಶಕರನ್ನೇ ಏಕೆ ಪ್ರೋತ್ಸಾಹಿಸಿದಿರಿ ?"

    ಒಂದು ಕ್ಷಣ ದ್ವಾರಕೀಶ್‌ ದಂಗಾಗಿ ಹೋದರು. ಇಂಥ ಪ್ರಶ್ನೆಯನ್ನು ಅವರು ನಿರೀಕ್ಷಿಸಿರಲಿಲ್ಲ. ಕೊನೆಗೆ ಅದು ತಾವು ಮಾಡಿದ ತಪ್ಪು ಎಂದೇ ಒಪ್ಪಿಕೊಂಡರು. ಕಾರ್ಯಕ್ರಮ ಮುಗಿದ ನಂತರ ದ್ವಾರ್ಕಿ ಹೇಳಿದ್ದು ಹೀಗೆ :

    'ನನಗೆ ಯಾವತ್ತೂ ಅಪ್ಪಣೆ ಮಾಡಿಯೇ ಅಭ್ಯಾಸ. ಹುಣಸೂರು ಕೃಷ್ಣ ಮೂರ್ತಿ ನನ್ನ ಮಾವ. ಅವರ ಮುಂದೆ ನಾನು ಬೇಡಿಕೊಳ್ಳಬಹುದು ಅಷ್ಟೆ. ಹಾಗಾಗಿ ಅವರನ್ನು ನನ್ನ ಚಿತ್ರಕ್ಕೆ ಬಳಸಿಕೊಳ್ಳೋದಕ್ಕೆ ಮುಜುಗರವಾಯಿತು"

    ಬೆಳೆಸಿದರು, ಬಳಸಿಕೊಂಡರು, ಜಗಳವಾಡಿದರು : ತಮ್ಮ 38 ವರ್ಷದ ವೃತ್ತಿ ಬದುಕಲ್ಲಿ ದ್ವಾರಕೀಶ್‌ 48 ಚಿತ್ರಗಳನ್ನು ನಿರ್ಮಿಸಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಹತ್ತಾರು ಪ್ರತಿಭೆಗಳನ್ನು ಬೆಳೆಸಿದ್ದಾರೆ. ರಾಜ್‌ಕುಮಾರ್‌ ಅವರಿಂದ ಹಿಡಿದು ವಿಷ್ಣುವರ್ಧನ್‌, ರಜನಿಕಾಂತ್‌, ಶ್ರೀದೇವಿ ಮೊದಲಾದ ದೈತ್ಯ ಪ್ರತಿಭೆಗಳನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನೊಂದೆಡೆ ಸಿಟ್ಟಾದಾಗ ಜಗಳ ಆಡಿದ್ದಾರೆ. ವಿಷ್ಣುವರ್ಧನ್‌ ಜೊತೆ ಜಗಳ ಆಡಿದ್ದಕ್ಕೆ ಈಗಲೂ ಪಶ್ಚಾತ್ತಾಪಪಟ್ಟುಕೊಳ್ಳುತ್ತಿದ್ದಾರೆ. ಆ ಮಟ್ಟಿಗೆ ತುಂಬಾ ಸಾಫ್‌ ಸೀದಾ ಮನುಷ್ಯ.

    'ಮೇಯರ್‌ ಮುತ್ತಣ್ಣ" ಚಿತ್ರದಿಂದ ನಿರ್ಮಾಪಕರಾದ ದ್ವಾರಕೀಶ್‌ ಅದಕ್ಕೂ ಮುಂಚೆ ಹಾಸ್ಯನಟನಾಗಿ ಜನಪ್ರಿಯರಾದವರು. ನಿರ್ಮಾಪಕನಾದ ನಂತರ ಪಡಕೊಂಡರು, ಜೊತೆಗೆ ಕಳಕೊಂಡರು ಕೂಡ. 'ಸಿಂಗಾಪುರದಲ್ಲಿ ರಾಜಾ ಕುಳ್ಳ" ದಂಥ ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ದೋಚಿದರೆ, 'ಆಫ್ರಿಕಾದಲ್ಲಿ ಶೀಲಾ" ಚಿತ್ರ ಹೇಳ ಹೆಸರಿಲ್ಲದಂತೆ ಬಿದ್ದು ಹೋಯಿತು. ಆದರೆ ದ್ವಾರ್ಕಿ ಕೇರ್‌ ಮಾಡಲಿಲ್ಲ. ಹಣವನ್ನು ನೀರಿನಂತೆ ಖರ್ಚು ಮಾಡೋದು ಅವರ ಅಭ್ಯಾಸ.

    ಟೈಮ್‌ ಚೆನ್ನಾಗಿದ್ದಾಗ ಕಳಕೊಂಡಿದ್ದೆಲ್ಲಾ ವಾಪಸ್‌ ಬರ್ತಾ ಇತ್ತು. ಆದರೆ 87ರ ನಂತರ, ಅಂದರೆ 'ಶ್ರುತಿ" ಚಿತ್ರದ ನಂತರ ದ್ವಾರ್ಕಿ ಯಶಸ್ಸಿನ ಮುಖವನ್ನೇ ಕಾಣಲಿಲ್ಲ. ಅವರು ನಿರ್ಮಿಸಿದ ಯಾವ ಚಿತ್ರವೂ ಗೆಲ್ಲಲಿಲ್ಲ. ಬೆಂಗಳೂರಲ್ಲಿದ್ದ ಎರಡು ಬಂಗಲೆ ಹಾಗೂ ಮೈಸೂರಲ್ಲಿದ್ದ ಒಂದು ಬಂಗಲೆಯನ್ನು ಮೂರು ಕಾಸಿಗೆ ಮಾರಾಟ ಮಾಡಿದರು.

    ದ್ವಾರ್ಕಿ ಖಾಸಗಿ ಬದುಕಲ್ಲೂ ಸಮಸೆಗಳದ್ದೇ ಕಾರುಬಾರು. ಸ್ನೇಹಿತೆಯಾಗಿ ಬಂದಾಕೆ ಎರಡನೇ ಮಡದಿಯಾದಳು. ಮಕ್ಕಳು ಬೆಳೆಯುತ್ತಿದ್ದಂತೆ ಖರ್ಚು ದುಪ್ಪಟ್ಟಾಯಿತು. ದ್ವಾರ್ಕಿ ಸಾಲಗಾರನಾದರು. ಇವೆಲ್ಲ ಒತ್ತಡಗಳಿಂದ ಆರೋಗ್ಯ ಕೆಟ್ಟು ಹೋಯ್ತು. ಹೃದಯಾಘಾತವಾಯಿತು. ಓಪನ್‌ ಹಾರ್ಟ್‌ ಸರ್ಜರಿಯಿಂದಾಗಿ ಕುಳ್ಳ ಬಚಾವಾದರು.

    ನಗುವಾಗ ಎಲ್ಲ ನಂಟರು...

    ಕಷ್ಟದ ದಿನಗಳಲ್ಲಿ ದ್ವಾರ್ಕಿ ನೆರವಿಗೆ ಯಾರೂ ಬರಲಿಲ್ಲ. ಅವರು ಯಾರನ್ನೂ ದೂರಲಿಲ್ಲ. ಪೂರ್ವ ಜನ್ಮದ ಪಾಪದ ಫಲವೇ ಇರಬೇಕು ಎಂದು ಸುಮ್ಮನಾದರು. ಇಂಥಾ ಟೈಮ್‌ನಲ್ಲಿ ಅವರೆಡೆಗೆ ಸಹಾಯ ಹಸ್ತ ಚಾಚಿದವರು, ತಮಿಳಿನ 'ಸೂಪರ್‌ ಗುಡ್‌" ಸಂಸ್ಥೆಯ ಆರ್‌. ಬಿ. ಚೌಧುರಿ. ಅವರು ಕೊಟ್ಟ 25 ಲಕ್ಷ ಸಾಲದಿಂದ ದ್ವಾರ್ಕಿ 'ಮಜ್ನೂ" ಚಿತ್ರ ನಿರ್ಮಿಸಿದರು. ಆರಂಭದಲ್ಲಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ ವಿತರಕರು ಚಿತ್ರ ಸಿದ್ಧವಾದ ನಂತರ ಹಿಂದೆ ಸರಿದರು. ಹೀಗಾಗಿ ಮತ್ತೆ 50 ಲಕ್ಷ ಸಾಲದ ಹೊರೆ ದ್ವಾರ್ಕಿ ತಲೆ ಮೇಲೆ ಬಿತ್ತು. ಚಿತ್ರ ಒಂದೂವರೆ ವರ್ಷ ಡಬ್ಬದಲ್ಲೇ ಬಾಕಿಯಾಯಿತು. ಈಗ ಕೆಲವು ಹಳೇ ಸ್ನೇಹಿತರ ಸಹಾಯದಿಂದ ಚಿತ್ರ ಬಿಡುಗಡೆಯಾಗುತ್ತಿದೆ. ಹೊಸಬರ ಚಿತ್ರಗಳನ್ನು ಜನ ಸ್ವೀಕರಿಸುತ್ತಾ ಇರುವುದರಿಂದ 'ಮಜ್ನೂ" ಚಿತ್ರ ಗೆಲ್ಲಬಹುದು ಅನ್ನುವ ನಿರೀಕ್ಷೆಯಲ್ಲಿ ಅವರಿದ್ದಾರೆ.

    ಜೊತೆಗೆ ಇನ್ನೂ ಎರಡು ಹೊಸ ಚಿತ್ರಗಳನ್ನು ನಿರ್ಮಿಸುವ ಯೋಚನೆಯಲ್ಲಿದ್ದಾರೆ. ಸುಹಾಸಿನಿ ನಾಯಕಿಯಾಗಿರುವ 'ಮಂಥನ " ಮತ್ತು ಗಿರಿ ನಾಯಕನಾಗಿರುವ 'ಪಂಚರಂಗಿ ಪುಟ್ಟ " ಚಿತ್ರಗಳು ಸದ್ಯದಲ್ಲೇ ಸೆಟ್ಟೇರಲಿವೆ.

    ಬಂದೇ ಬರುತಾವ ಕಾಲ..

    ಜನರ ಮೇಲೆ ನಂಬಿಕೆಯನ್ನು ಕಳಕೊಂಡರೂ ದೇವರು ತನ್ನನ್ನು ಕಾಯುತ್ತಾನೆ ಎನ್ನುತ್ತಾರೆ ದ್ವಾರ್ಕಿ. ಅವರ ಪ್ರಕಾರ ನಿಜ ಜೀವನದಲ್ಲಿ ಅವರೇ ಹೀರೋ. 14ನೇ ರೀಲಿನಲ್ಲಿ ಸುಖಕಾಣುವಂತೆ ತಾನೂ 14ನೇ ರೀಲಿನ ನಿರೀಕ್ಷೆಯಲ್ಲಿದ್ದೇನೆ ಅನ್ನುತ್ತಾರವರು.

    English summary
    Dwaradkeesh is back
    Monday, September 30, 2013, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X