ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
ದೊಡ್ಡ ದೊಡ್ಡವರು ಚಿತ್ರಮಂದಿರದ ಅಂಗಳಕ್ಕೆ ಧುಮುಕಿದಾಗಲೇ, ಕನ್ನಡ ಚಿತ್ರರಂಗದಲ್ಲಿ ದೊಡ್ಡದಾದ ಹಬ್ಬ ನಡೆಯಲು ಸಾಧ್ಯ. ಆದರೆ .. ಅದ್ಯಾಕೋ ಕನ್ನಡದ ಸ್ಟಾರ್ಗಳಿಗೆ ಈ ಮಾತು ಅರ್ಥವಾಗ್ತಿಲ್ಲ.
ನಿಜಾ.. ಈಗ ಚುನಾವಣೆಯ ಕಾವೇರಿದೆ. ಐಪಿಎಲ್ ಜ್ವರ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಚಿತ್ರ ಯಾವುದಾದರೇನು..? ಚಿತ್ರದಲ್ಲಿ ಯಾರಿದ್ದರೇನು ..? ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ ಅನ್ನುವ ವಾದ ಒಪ್ಪುವಂತಹದ್ದೇ. ಹಾಗಂಥ ಕೈ ಕಟ್ಟಿ ಕುಳಿತುಕೊಂಡರೆ ಹೇಗೆ..? ವರ್ಷಾನುವರ್ಷ ಚಿತ್ರವನ್ನ ಬಿಡುಗಡೆ ಮಾಡದೇ ಇದ್ದರೆ ಹೇಗೆ..? ಅದು ಚಿತ್ರಕ್ಕೆ ಸಿಗಬೇಕಿದ್ದ ಪ್ರಚಾರ ಸಿಕ್ಕ ನಂತರವೂ ಆ ಚಿತ್ರವನ್ನ ಬಿಡುಗಡೆ ಮಾಡದೇ, ಮುಂದೆ ನೋಡಿದರೆ ಆಯಿತು ಎಂದು ಸುಮ್ನೆ ಕೂತರೆ ನಷ್ಟ ಆ ಚಿತ್ರತಂಡಕ್ಕೆ ಮತ್ತು ಚಿತ್ರರಂಗಕ್ಕೆ ಹೊರತು ಬೇರೆ ಯಾರಿಗೂ ಅಲ್ಲ.

ಹೌದು, ನಿಮಗೆ ಗೊತ್ತಿರಲಿ, ಕನ್ನಡದಲ್ಲಿ ಸ್ಟಾರ್ ಪ್ಲೇವರ್ ಇರುವ ಒಂದು ಅರ್ಧ ಡಜನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿವೆ. ಆದರೆ.. ಆ ಪೈಕಿ ಒಂದು ಚಿತ್ರದ ಬಿಡುಗಡೆಯ ದಿನ ಕೂಡ ಇಲ್ಲಿಯವರೆಗೆ ಘೋಷಣೆಯಾಗಿಲ್ಲ. ಉದಾಹರಣೆಗೆ ಭೀಮ.
ಹಾಗೇ ನೋಡಿದರೆ ಭೀಮ ಯಾವತ್ತೋ ಬರಬೇಕಿತ್ತು. ಸಲಗ ಚಿತ್ರದ ನಂತರ ದುನಿಯಾ ವಿಜಯ್ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಆರಂಭದಿಂದಲೇ ಸದ್ದು ಮಾಡಿಕೊಂಡು ಬಂದಿದ್ದ ಭೀಮ ಚಿತ್ರಕ್ಕೆ ಬಿಡುಗಡೆಯಾದ ಎರಡು ಹಾಡು ಮತ್ತೊಂದು ಟೀಸರ್ ಸಿಕ್ಕಾಪಟ್ಟೆ ಮೈಲೇಜ್ ನ್ನೂ ತಂದು ಕೊಟ್ಟಿದ್ದವು. ಆದರೆ.. ಅದ್ಯಾಕೋ, ಕಬ್ಬಿಣ ಕಾದಿರುವಾಗಲೇ ಬಡಿಯುವ ಮನಸನ್ನ ದುನಿಯಾ ವಿಜಯ್ ಮಾಡಲಿಲ್ಲ. ನಿರ್ಮಾಪಕದ್ವಯರಾದ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಕೂಡ ಮಾಡಲಿಲ್ಲ.

ಇನ್ನೂ ನಂಬುವುದು.. ಬಿಡುವುದು ನಿಮಗೆ ಬಿಟ್ಟಿದ್ದಾದರೂ, ಭೀಮ ಚಿತ್ರ ಶುರುವಾಗಿಯೇ ಮೊನ್ನೆ ಏಪ್ರಿಲ್ 18ಕ್ಕೆ ಎರಡು ವರ್ಷಗಳಾಗಿವೆ. ಈ ಎರಡು ವರ್ಷದಲ್ಲಿ ಆತುರ ಆತುರವಾಗಿ ಅಲ್ಲದೇ ಇದ್ದರೂ ನಿಧಾನವಾಗಿಯೇ ಭೀಮ ಚಿತ್ರವನ್ನ ಬಿಡುಗಡೆ ಮಾಡಬಹುದಿತ್ತು. 2023ರಲ್ಲಿಯೇ ಬಿಡುಗಡೆಯಾಗಬಹುದು ಅನ್ನುವ ನಂಬಿಕೆ ಕೂಡ ಎಲ್ಲರಲ್ಲಿತ್ತು. ಆದರೆ ಪದೇ ಪದೇ ಬಿಡುಗಡೆಯ ದಿನ ಮುಂದೆ ಹೋಗ್ತಾನೆ ಬಂತು.
ರಿಯಲ್ ಸ್ಟಾರ್ ಉಪೇಂದ್ರ ಅವರ ಯುಐ ಕಥೆ ಕೂಡ ಭೀಮ ಚಿತ್ರಕ್ಕಿಂತ ಭಿನ್ನವೇನಿಲ್ಲ. 2022ರ ಏಪ್ರಿಲ್ 18ರಂದು ಭೀಮ ಸೆಟ್ಟೇರಿದ್ದರೆ, ಯುಐ ಚಿತ್ರ ಮುಹೂರ್ತ ಭಾಗ್ಯ ಕಂಡಿದ್ದು 2022ರ ಜೂನ್ ಮೊದಲ ವಾರದಲ್ಲಿ.

ನಿಜಾ.. ಯುಐ ಕೇವಲ ಕನ್ನಡ ಸಿನಿಮಾ ಅಲ್ಲ, ಪ್ಯಾನ್ ಇಂಡಿಯಾ ಸಿನಿಮಾ. ಇನ್ನೂ ಯುಐ ಗ್ರಾಫಿಕ್ಸ್ ಕೆಲಸವನ್ನ ಹೆಚ್ಚು ಬೇಡುವಂತಹ ಸಿನಿಮಾ. ಹೀಗಾಗಿ ಸಿನಿಮಾ ತಡವಾಗಿರಬಹುದು. ಆದರೆ.. ಪ್ರತಿಯೊಬ್ಬರು ದ್ವೈವಾರ್ಷಿಕ ಯೋಜನೆಯನ್ನ ಹಾಕಿಕೊಂಡರೆ, ಕನ್ನಡ ಚಿತ್ರರಂಗದ ಯೋಚನೆಯನ್ನ ಮಾಡುವವರು ಯಾರು..?
ಕೇವಲ ಭೀಮ ಮತ್ತು ಯುಐ ಅಷ್ಟೇ ಅಲ್ಲ ಧ್ರುವಾ ಸರ್ಜಾ ಅಭಿನಯದ ಮಾರ್ಟಿನ್ ಮತ್ತು ಕೆ.ಡಿ ಚಿತ್ರದ ಕಥೆ ಕೂಡ ಇದೇ ರೀತಿಯೇ ಇದೆ. ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿಯಲ್ಲಿ ಪ್ರೇಮ್ ತಮ್ಮ ಕೆ.ಡಿ ಚಿತ್ರಕ್ಕೆ ಚಾಲನೆ ಕೊಟ್ಟು ಈ ಏಪ್ರಿಲ್ 24ಕ್ಕೆ ಎರಡು ವರ್ಷವಾಗಲಿದೆ.

ಇನ್ನೂ.. ಇದೇ ಧ್ರುವಾ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಆರಂಭವಾಗಿ ಹೆಚ್ಚು ಕಡಿಮೆ ಮೂರುವರೆ ವರ್ಷಗಳಾಗಿವೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರಾ ಚಿತ್ರ ಕೂಡ ಆರಂಭವಾಗಿದ್ದು ಎರಡು ವರ್ಷದ ಹಿಂದೆಯೇ. ಈ ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ ಅನ್ನುವುದು ಬೇರೆ ವಿಷಯ
ಈ ಚಿತ್ರಗಳಷ್ಟೇ ಅಲ್ಲ ಹುಡುಕುತ್ತಾ ಹೊರಟರೆ ಇನ್ನೂ ಅನೇಕ ಸಿನಿಮಾ, ಮೇಲ್ಕಂಡ ಈ ಸಾಲಿನಲ್ಲಿಯೇ ಇವೆ. ಈ ಎಲ್ಲ ಸಿನಿಮಾಗಳ ಬಿಡುಗಡೆಯ ದಿನಾಂಕ ಇನ್ನೂ ನಿಗೂಢ. ಚುನಾವಣೆ ಕಾವು ತಣ್ಣಗಾದ ನಂತರ .. ಐಪಿಎಲ್ ಗೆ ತೆರೆ ಬಿದ್ದ ನಂತರ.. ಈ ಚಿತ್ರಗಳ ಬಿಡುಗಡೆಯ ವಿಚಾರದಲ್ಲಿ ಒಂದು ಸ್ಪಷ್ಟತೆ ಸಿಗುವ ನಿರೀಕ್ಷೆ ಇದೆ. ಆದರೆ.. ನೆನಪಿರಲಿ.. ಚುನಾವಣೆ ಮತ್ತು ಐಪಿಎಲ್ ಬೆನ್ನಲ್ಲಿಯೇ T20 ವರ್ಲ್ಡ್ ಕಪ್ ಕೂಡ ಆರಂಭವಾಗಲಿದೆ. ಗೊತ್ತಿಲ್ಲ.. T20 ವರ್ಲ್ಡ್ ಕಪ್ ನೆಪದಲ್ಲಿ, ತಮ್ಮ ಚಿತ್ರಗಳನ್ನ ಮತ್ತೆ ಕೆಲವರು ಮುಂದೂಡಿದರು ಮುಂದೂಡಬಹುದು.
ಒಟ್ನಲ್ಲಿ ಸ್ಟಾರ್ ಪಟ್ಟವನ್ನ ಅಲಂಕರಿಸಿದವರು, ವರ್ಷಕ್ಕೆ ಎರಡು ಸಿನಿಮಾ ಮಾಡಿದರೆ ಅಷ್ಟೇ ಚಿತ್ರರಂಗಕ್ಕೆ ಉಳಿಗಾಲ ಅನ್ನುವ ಮಾತು ಹಿಂದಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರ್ತಾನೆ ಇದೆ. ಬಹುತೇಕ ಸಿನಿಮಾ ಪ್ರಿಯರ ಅಭಿಪ್ರಾಯವೂ ಕೂಡ ಇದೆ. ಆದರೆ ಈ ಅಭಿಪ್ರಾಯಕ್ಕೆ ಸ್ಯಾಂಡಲ್ವುಡ್ ಸ್ಟಾರ್ಗಳು ಮಣೆ ಹಾಕ್ತಿಲ್ಲ, ಮನ್ನಣೆ ನೀಡ್ತಿಲ್ಲ ಅನ್ನುವುದು ದುರಂತ


Click it and Unblock the Notifications











