ಸುದೀಪ್ ಸಿನಿಮಾ, ಶೋ ಬ್ಯಾನ್ ಮಾಡಿ ಎಂಬ ಜೆಡಿಎಸ್ ದೂರಿಗೆ ಎಲೆಕ್ಷನ್ ಕಮಿಷನ್ ಕೊಟ್ಟ ಉತ್ತರವಿದು

ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗಿದೆ. ಈಗಾಗಾಲೇ ಕೆಲವೊಂದಷ್ಟು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದ್ದು, ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಗೆಲ್ಲಬಹುದು ಹಾಗೂ ಎಂಬ ಲೆಕ್ಕಾಚಾರ ಹಾಗೂ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಇನ್ನು ರಾಜಕೀಯ ಪಕ್ಷಗಳು ಚುನಾವಣೆ ಸಮೀಪದಲ್ಲಿ ಪ್ರಚಾರ ಪಡೆದುಕೊಂಡು ಮತದಾರರ ಒಲವನ್ನು ತಮ್ಮತ್ತ ಸೆಳೆದುಕೊಳ್ಳುವ ಯತ್ನದಲ್ಲಿವೆ. ಹೀಗಾಗಿಯೇ ಜನರ ಮನಸ್ಸಿಗೆ ಅತಿ ಹತ್ತಿರವಾಗಿರುವ ಸಿನಿಮಾ ನಟರು ಹಾಗೂ ನಟಿಯರನ್ನು ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಆಹ್ವಾನಿಸುತ್ತಿದ್ದಾರೆ.
ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆಯ ಸಲುವಾಗಿ ಭಾರತೀಯ ಜನತಾ ಪಕ್ಷ ತಮ್ಮ ಪರ ಪ್ರಚಾರ ಮಾಡಲು ಕನ್ನಡ ಚಲನಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ್ ಅವರನ್ನು ಕರೆತಂದಿದೆ. ಹೌದು, ಕಳೆದ ವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಿಚ್ಚ ಸುದೀಪ್ ಜಂಟಿ ಸುದ್ದಿಗೋಷ್ಟಿ ನಡೆಸಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.
ಹೀಗೆ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂಬ ವಿಷಯ ಅಧಿಕೃತವಾಗುತ್ತಿದ್ದಂತೆಯೇ ಎದುರಾಳಿ ಪಕ್ಷಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ವು. ಇನ್ನು ಜೆಡಿಎಸ್ ಹಾಗೂ ವಕೀಲರು ಸುದೀಪ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವ ಕಾರಣ ಅವರ ಚಿತ್ರಗಳು, ಟಿವಿ ಶೋಗಳು ಹಾಗೂ ಪೋಸ್ಟರ್ಗಳನ್ನು ಎಲ್ಲಿಯೂ ಪ್ರದರ್ಶಿಸುವಂತಿಲ್ಲ. ಚುನಾವಣೆ ಮುಗಿಯುವ ತನಕ ಅವುಗಳಿಗೆ ನಿಷೇಧ ಹೇರಬೇಕು ಎಂದು ದೂರನ್ನು ನೀಡಲಾಗಿತ್ತು.
ಈ ದೂರಿಗೆ ಇದೀಗ ಚುನಾವಣಾ ಆಯೋಗ ಸ್ಪಂದಿಸಿದ್ದು, ಜೆಡಿಎಸ್ ಹಾಗೂ ವಕೀಲರು ಸಲ್ಲಿಸಿದ್ದ ದೂರನ್ನು ತಳ್ಳಿಹಾಕಿದೆ. ಸುದೀಪ್ ಅವರ ಚಿತ್ರಗಳು, ಟಿವಿ ಶೋ ಹಾಗೂ ಪೋಸ್ಟರ್ಗಳ ಮೇಲೆ ಯಾವುದೇ ನಿಷೇಧ ಹೇರುವುದಿಲ್ಲ ಎಂದು ಸ್ಟಪ್ಟಪಡಿಸಿದೆ. ಚುನಾವಣಾ ಆಯೋಗದ ಈ ನಿರ್ಧಾರ ದೂರು ಸಲ್ಲಿಸಿದ್ದವರಿಗೆ ಹಿನ್ನಡೆ ಉಂಟುಮಾಡಿದ್ದು, ಬಿಜೆಪಿ, ಕಿಚ್ಚ ಸುದೀಪ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂತಸ ತಂದಿದೆ.
ಇನ್ನು ಕಿಚ್ಚ ಸುದೀಪ್ ಬಸವರಾಜ ಬೊಮ್ಮಾಯಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದಲೂ ನೋಡುತ್ತಾ ಬೆಳೆದವನು, ಅವರನ್ನು ಮಾಮ ಎಂದೇ ಕರೆಯುತ್ತೇನೆ, ಹೀಗಾಗಿಯೇ ಅವರ ಪರವಾಗಿ ನಾನು ನಿಲ್ಲುತ್ತೇನೆ, ಯಾವ ಪಕ್ಷದ ಪರವೂ ಅಲ್ಲ ಎಂದರು. ಈ ಮೂಲಕ ಸುದೀಪ್ ತಾನು ಬಿಜೆಪಿ ಪರ ಅಲ್ಲ, ತನ್ನ ಕಷ್ಟಕ್ಕೆ ಆದವರ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು ಹಾಗೂ ಮಾಧ್ಯಮದವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಏಪ್ರಿಲ್ 5ರಂದು ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದರು.
ನಂತರ ಮಾತನಾಡಿದ್ದ ಬಸವರಾಜ ಬೊಮ್ಮಾಯಿ ಸುದೀಪ್ ಹಾಗೂ ತಮ್ಮ ಸಂಬಂಧವನ್ನು ಗೌರವಿಸಿ ಎಂದರು. ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ, ನಾನು ಇರುವಂತಹ ಸ್ಥಾನ ಮತ್ತು ನನ್ನ ಪಕ್ಷಕ್ಕೆ ಬೆಂಬಲ ಕೊಡಲು ಬಂದಿದ್ದಾರೆ, ಅಂದರೆ ಅದರ ಅರ್ಥ ಕೇವಲ ತನ್ನ ಜತೆಗಿನ ಸಂಬಂಧಕ್ಕೆ ಗೌರವ ಕೊಟ್ಟು ಸುದೀಪ್ ಬೆಂಬಲ ನೀಡುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಇನ್ನೂ ಮುಂದುವರಿದು ಮಾತನಾಡಿದ ಬಸವರಾಜ ಬೊಮ್ಮಾಯಿ ನನಗೆ ಇವತ್ತಿಂದ ಅಲ್ಲ, ಮೊದಲಿಂದಲೂ ಸಹ ಸಂಬಂಧ ಇರೋದ್ರಿಂದ ಅವರ ಹತ್ತಿರ ಮಾತನಾಡಿದ್ದೀನಿ, ನೀನು ನಮ್ಮ ಪಕ್ಷವನ್ನು ಸೇರಿಕೊಳ್ಳದೇ ಇದ್ದರೂ ಸಹ ನಿನ್ನ ಪ್ರಚಾರ ನಮಗೆ ಅಗತ್ಯವಿದೆ ಅಂತ ಮಾತನಾಡಿದ್ದೀನಿ. ಅವರು ಏನು ಹೇಳಿದ್ರು ಅಂದ್ರೆ ನಾನು ನಿಮಗೋಸ್ಕರ ಬೆಂಬಲ ಕೊಡ್ತೀನಿ, ನೀವೇನು ಹೇಳ್ತೀರ ಅದನ್ನು ನಿಮಗೋಸ್ಕರ ಮಾಡಲು ಸಿದ್ಧವಿದ್ದೇನೆ ಎಂದಿದ್ದಾರೆ. ಅದರ ಅರ್ಥ ನನ್ನ ಜತೆಗೆ ನನ್ನ ಪಕ್ಷಕ್ಕೂ ಸಹ ಈ ಚುನಾವಣೆಯಲ್ಲಿ ಪ್ರಚಾರವನ್ನು ಅವರು ಮಾಡ್ತಾರೆ ಎಂದು ತಿಳಿಸಿದ್ದರು.


Click it and Unblock the Notifications











