ಶಿವಣ್ಣ ಕಾರು ಅಡ್ಡಗಟ್ಟಿದ ಚುನಾವಣಾ ಸಿಬ್ಬಂದಿ: ಆಮೇಲೆ ಏನಾಯ್ತು?
Recommended Video

ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಎಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಎಲ್ಲ ಕಡೆಯೂ ಹದ್ದಿನ ಕಣ್ಣಿಟ್ಟಿದ್ದಾರೆ.
ಬಹುತೇಕ ಎಲ್ಲ ಮಾರ್ಗದಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ನಿನ್ನೆ (ಬುಧವಾರ) ಗೌರಿಬಿದನೂರು ರಾಜ್ಯ ಹೆದ್ದಾರಿ ಸಂಖ್ಯೆ-9ರಲ್ಲಿ ಎಲ್ಲ ವಾಹನಗಳನ್ನ ತಪಾಸಣೆ ಮಾಡಲಾಗುತ್ತಿತ್ತು.
ಹೀಗೆ ತಪಾಸಣೆ ಮಾಡುವ ವೇಳೆ ಕಾರೊಂದನ್ನ ಅಡ್ಡಗಟ್ಟಿದ ಚುನಾವಣಾ ಸಿಬ್ಬಂದಿಗೆ ಅಚ್ಚರಿಯಾಗಿದೆ. ಯಾಕಂದ್ರೆ, ತಾವು ತಡೆದಿದ್ದು ನಟ ಶಿವರಾಜ್ ಕುಮಾರ್ ಎನ್ನುವುದು ಸ್ವತಃ ಶಿವಣ್ಣ ಅವರನ್ನ ನೋಡಿದಮೇಲೆ. ಆಮೇಲೆ ಏನಾಯ್ತು? ಮುಂದೆ ಓದಿ....

ಜನಸಾಮಾನ್ಯರಂತೆ ಸಹಕರಿಸಿದ ಶಿವಣ್ಣ
ಚುನಾವಣಾ ಸಿಬ್ಬಂದಿ ಕಾರು ಅಡ್ಡಗಟ್ಟಿದ ಬಳಿಕ ಕಾರಿನಿಂದ ಮೊದಲು ಇಳಿದಿದ್ದು ನಟ ಶಿವರಾಜ್ ಕುಮಾರ್. ಸಡನ್ ಆಗಿ ಶಿವರಾಜ್ ಕುಮಾರ್ ಅವರನ್ನ ನೋಡಿ ಒಂದು ಕ್ಷಣ ಅಧಿಕಾರಿಗಳು ಅಚ್ಚರಿಯಾದರು. ನಂತರ ಶಿವಣ್ಣ ಕಾರು ಪರಿಶೀಲನೆ ನಡೆಸಿದರು. ಅಣ್ಣಾವ್ರ ಮಗ ಕೂಡ ಜನಸಾಮನ್ಯರಂತೆ ಸಹಕರಿಸಿ ಮೆಚ್ಚುಗೆಗೆ ಪಾತ್ರರಾದರು.

ಫೋಟೋ ಕ್ಲಿಕ್ಕಿಸಿಕೊಂಡ ಸಿಬ್ಬಂದಿ
ಶಿವರಾಜ್ ಕುಮಾರ್ ಅವರನ್ನ ನೋಡಿದ ಕ್ಷಣ ಖುಷಿಯಾದ ಸಿಬ್ಬಂದಿ, ಮೊಬೈಲ್ ನಂಬರ್ ಮತ್ತು ವಿಳಾಸ ಪಡೆದು ಪರಿಶೀಲನೆ ಮಾಡ್ತಾರೆ. ನಂತರ ಜೊತೆಗೆ ಫೋಟೋ ತೆಗಿಸಿಕೊಳ್ಳುತ್ತಾರೆ. ಈ ಫೋಟೋಗಳು ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಆನಂದ್' ಚಿತ್ರೀಕರಣಕ್ಕೆ ಹೋಗುತ್ತಿದ್ದ ಶಿವಣ್ಣ
ಅಂದ್ಹಾಗೆ, ಶಿವರಾಜ್ ಕುಮಾರ್ ಅವರು ಆನಂದ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಗೌರಿಬಿದನೂರು ಮಾರ್ಗವಾಗಿ ಚಲಿಸುತ್ತಿದ್ದರು. ಪಿ ವಾಸು ನಿರ್ದೇಶನ ಮಾಡ್ತಿರುವ ಈ ಸಿನಿಮಾವನ್ನ ದ್ವಾರಕೀಶ್ ನಿರ್ಮಾಣ ಮಾಡುತ್ತಿದ್ದಾರೆ.

ಚುನಾವಣೆಯಿಂದ ದೂರ ಉಳಿದಿರುವ ನಟ
ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಎಲೆಕ್ಷನ್ ಗೆ ಸ್ಪರ್ಧಿಸಿದ್ದರು. ಆಗ ನಟ ಶಿವಣ್ಣ ಪ್ರಚಾರ ಮಾಡಿದ್ದರು. ಆದ್ರೆ, ಈ ಸಲ ಚುನಾವಣೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.


Click it and Unblock the Notifications











