ಕನ್ನಡ ರಾಜ್ಯೋತ್ಸವಕ್ಕೆ ಶಿವಣ್ಣ, ಪುನೀತ್ ರಿಂದ ಮೆಚ್ಚುವ ಕಾರ್ಯಗಳು
ಕನ್ನಡ...ನಮ್ಮ ಉಸಿರಿನಲ್ಲಿ ಬೆರೆತು ಹೋಗಿರುವ ಭಾಷೆ. ಕನಸಿನಲ್ಲಿ, ವಾಸ್ತವದಲ್ಲಿ, ನೋವಿನಲ್ಲಿ, ಸಂತೋಷದಲ್ಲಿ ಹೀಗೆ ಕನ್ನಡ ಎಂದಿಗೂ ನಮ್ಮ ಜೊತೆ ಇದ್ದೇ ಇರುತ್ತದೆ.
ಅಂದಹಾಗೆ, ಕನ್ನಡದ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆದಿದೆ. ಕನ್ನಡದ ಸ್ಟಾರ್ ನಟರು ಕೂಡ ಈ ಬಾರಿಯ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.
ನಟ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇಬ್ಬರೂ ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಎರಡು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೊಡ್ಮನೆ ಸಹೋದರರ ರೀತಿ ನಟ ಯಶ್ ಸಹ ಒಂದೊಳ್ಳೆ ಕೆಲಸದ ಮೂಲಕ ಅಭಿಮಾನಿಗಳ ಪ್ರೀತಿಗೆ ಕಾರಣವಾಗುತ್ತಿದ್ದಾರೆ.
ಅಂದಹಾಗೆ, ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ನಡೆಯುತ್ತಿರುವ ವಿಶೇಷ ಕಾರ್ಯಕ್ರಮಗಳ ಪಟ್ಟಿ ಮುಂದಿದೆ ಓದಿ...

ಗೋಕಾಕ್ ಚಳುವಳಿ ನೆನೆದ ಪುನೀತ್
ಕರ್ನಾಟಕ ಇತಿಹಾಸದಲ್ಲಿ ಎಂದು ಮರೆಯದ ಹೋರಾಟ ಗೋಕಾಕ್ ಚಳುವಳಿ. ಈ ಚಳುವಳಿಯನ್ನು ನಟ ಪುನೀತ್ ರಾಜ್ ಕುಮಾರ್ ಈಗ ನೆನೆದಿದ್ದಾರೆ. ಈ ಹೋರಾಟವನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮ ನಾಳೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ನಡೆಯಲಿದ್ದು, ಪುನೀತ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ಆಸ್ಟ್ರೇಲಿಯಾದ ಕನ್ನಡ ಕಾರ್ಯಕ್ರಮದಲ್ಲಿ ಶಿವಣ್ಣ
ಆಸ್ಟ್ರೇಲಿಯದ ಮೆಲ್ಬೋರ್ನ್ ನಲ್ಲಿರುವ ಕನ್ನಡಿಗರು ಸೇರಿ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿವಣ್ಣ ಹೋಗುತ್ತಿದ್ದಾರೆ. ಸುಮಾರು 32 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಅಲ್ಲಿ ಕನ್ನಡ ಭವನವನ್ನು ಶಿವರಾಜ್ ಕುಮಾರ್ ಉದ್ಘಾಟನೆ ಮಾಡಲಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 10 ರಂದು ನಡೆಯಲಿದೆ.
ಡಾ. ರಾಜ್ ಗೋಕಾಕ್ ಚಳವಳಿ ಮೆಲುಕು ಹಾಕಿದ ಪುನೀತ್ ರಾಜ್ಕುಮಾರ್

ಯಶ್ ರಿಂದ ರಾಜ್ ಪುತ್ಥಳಿ ಅನಾವರಣ
ದೊಡ್ಮನೆ ಸಹೋದರರ ರೀತಿ ಯಶ್ ಕೂಡ ಅರ್ಥ ಪೂರ್ಣ ಆಚರಣೆ ಮಾಡುತ್ತಿದ್ದಾರೆ. ನಟ ರಾಜ್ ಕುಮಾರ್ ಅವರ ಒಂದು ಹೊಸ ಪುತ್ಥಳಿಯನ್ನು ಯಶ್ ಅನಾವರಣಗೊಳಿಸಲಿದ್ದಾರೆ. ಗೋಕಾಕ್ ಚಳವಳಿಯ ಹೋರಾಟಗಾರ ಸ್ಮರಣಾರ್ಥ ಈ ಪುತ್ಥಳಿ ಹಾಗೂ ಗೋಕಾಕ್ ಚಳವಳಿಯ ಸ್ಮರಣಾರ್ಥ ವೃತ್ತ ಲೋಕಾರ್ಪಣೆ ಆಗಲಿದೆ.

ಸಿನಿಮಾಗಳು ಬಿಡುಗಡೆ
ಶರಣ್ ಅಭಿನಯದ 'ವಿಕ್ಟರಿ 2', ರಾಜ್ ಬಿ ಶೆಟ್ಟಿ ನಟನೆಯ 'ಅಮ್ಮಚ್ಚಿಯೆಂಬ ನೆನಪು', ರಾಜ್ಯೋತ್ಸದ ವಿಶೇಷ ಚಿತ್ರ 'ಕನ್ನಡ ದೇಶದೊಳ್' ಹಾಗೂ 'ಮನಸಿನ ಮರೆಯಲಿ' ಎಂಬ ಸಿನಿಮಾಗಳು ನಾಳೆ ಬಿಡುಗಡೆಯಾಗುತ್ತಿವೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹತ್ತಿರದಲ್ಲಿ ಬಂದಿದ್ದು, ಇದು ಒಳ್ಳೆಯ ಸಮಯ ಎಂದು ಅನೇಕ ಚಿತ್ರತಂಡಗಳು ನಿರ್ಧಾರ ಮಾಡಿವೆ.


Click it and Unblock the Notifications











