ಇವಾಗ ಎಲ್ರೂ ಸಕ್ಸಸ್ ಮೀಟ್ ಮಾಡ್ಕೊತಾರೆ; ಸೋತರೂ ಸಕ್ಸಸ್ ಮೀಟ್ ಮಾಡಿದ ಚಿತ್ರಗಳ ಕಾಲೆಳೆದ ಉಪ್ಪಿ!

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್ ಚಂದ್ರು ಕಾಂಬಿನೇಶನ್ನ ಮೂರನೇ ಚಿತ್ರ ಕಬ್ಜ ಶುಕ್ರವಾರ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಸುಮಾರು 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಕಬ್ಜ ಉಪೇಂದ್ರ ಹಾಗೂ ಆರ್ ಚಂದ್ರು ಸಿನಿ ಕೆರಿಯರ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದೆ.
ಹೀಗೆ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡ ಕಬ್ಜ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಅನ್ನು ಸಿನಿ ರಸಿಕರು ನೀಡಿದ್ದಾರೆ. ಪರಿಣಾಮವಾಗಿ ಚಿತ್ರ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಹೌದು, ಬಿಡುಗಡೆ ದಿನ ಬರೋಬ್ಬರಿ 54 ಕೋಟಿ ಗಳಿಕೆ ಮಾಡಿದ್ದ ಕಬ್ಜ ಚಿತ್ರ ಎರಡನೇ ದಿನ 46 ಕೋಟಿ ಗಳಿಕೆ ಮಾಡಿದೆ. ಇನ್ನು ಇಂದು ಮೂರನೇ ದಿನ ಭಾನುವಾರ ರಜಾ ದಿನವಾದ ಕಾರಣ ಮತ್ತಷ್ಟು ಹೆಚ್ಚಿನ ಗಳಿಕೆಯನ್ನು ಚಿತ್ರ ಮಾಡಲಿದ್ದು, ಮೂರು ದಿನಗಳಲ್ಲಿ 150 ಕೋಟಿ ಗಳಿಕೆ ಮಾಡುವುದು ಪಕ್ಕಾ ಎನ್ನಬಹುದು.
ಇನ್ನು ಚಿತ್ರ ಭರ್ಜರಿ ಯಶಸ್ಸು ಸಾಧಿಸಿರುವುದರಿಂದ ಸಂತಸಕ್ಕೊಳಗಾಗಿರುವ ಚಿತ್ರತಂಡ ಇಂದು ಸಂಭ್ರಮಾಚರಣೆ ಮಾಡಿದೆ. ಮೊದಲಿಗೆ ಕಬ್ಜ ಬ್ಲಾಕ್ಬಸ್ಟರ್ ಹಿಟ್ ಆಗಿದೆ, ಚಿತ್ರವನ್ನು ಬೆಂಬಲಿಸಿ ಗೆಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬರೆದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ ಬಳಿಕ ಸಕ್ಸಸ್ ಮೀಟ್ ಕಾರ್ಯಕ್ರಮವನ್ನೂ ಸಹ ಏರ್ಪಡಿಸಿದೆ.
ಈ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಚಿತ್ರ ಗೆದ್ದದ್ದರ ಕುರಿತು ಮಾತನಾಡಿದ ರಿಯಲ್ ಸ್ಟಾರ್ ಉಪೇಂದ್ರ ಈ ಗೆಲುವನ್ನು ನೋಡಿದರೆ ಸಂತಸವಾಗುತ್ತಿದೆ ಎಂದು ಖುಷಿ ಹೊರಹಾಕಿದರು. ಮುಂದುವರಿದು ಮಾತನಾಡಿ "ಹೆಚ್ಚೇನೂ ಹೇಳುವುದಕ್ಕಿಲ್ಲ, ಎಲ್ಲವನ್ನೂ ಚಂದ್ರು ಹೇಳಿಬಿಟ್ಟಿದ್ದಾರೆ, ಸಕ್ಸಸ್ ಮೀಟ್ ಸಕ್ಸಸ್ ಮೀಟ್ ಅನ್ನೋದು ಹೇಗಾಗಿಬಿಟ್ಟಿದೆ ಎಂದರೆ ಇವಾಗ ಎಲ್ರೂ ಸಕ್ಸಸ್ ಮೀಟ್ ಅಂತಾರೆ ಆದರೆ ಯಾವುದು ಸಕ್ಸಸ್, ಯಾವುದು ಫೇಲ್ಯೂರ್ ಎಂಬುದೇ ಗೊತ್ತಾಗದೇ ಇರೋ ತರ ಸಕ್ಸಸ್ ಮೀಟ್ಗಳು ನಡೆತಿವೆ. ಆದರೆ ಕೆಲವೊಂದು ಚಿತ್ರಗಳ ನಿಜವಾದ ಸಕ್ಸಸ್ ಮೀಟ್ ನಡೆಯುತ್ತೆ. ಅದನ್ನು ಈವತ್ತು ನಾನು ನಿಜವಾಗಿಯೂ ಕಂಡೆ. ಯಾಕಂದ್ರೆ ಚಂದ್ರು ಅವಾಗಲೇ ಹೇಳಿದ್ರು. ಚಿತ್ರ ಸೇಲ್ ಆದಾಗ ಸಕ್ಸಸ್ ಆದೆ, ಅಪ್ಪು ಅವರು ಬಂದಾಗ ಸಕ್ಸಸ್ ಆದೆ, ಹಣದಲ್ಲಿ ಸಕ್ಸಸ್ ಆದೆ, ಜನ ಇಷ್ಟಪಟ್ಟಾಗ ಸಕ್ಸಸ್ ಆದೆ ಎಂದು ಚಂದ್ರು ಹೇಳಿದ್ದಾರೆ" ಎಂದು ಉಪೇಂದ್ರ ಹೇಳಿದರು.
ಹೀಗೆ ಯಾವ ಚಿತ್ರದ ಹೆಸರನ್ನೂ ತೆಗೆದುಕೊಳ್ಳದ ಉಪೇಂದ್ರ ಸೋತರೂ ಸಹ ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿದವರ ಕಾಲನ್ನು ಎಳೆದಿದ್ದಾರೆ. ಅಲ್ಲದೇ ಈ ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ, ಎರಡನೇ ಭಾಗದ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ ಎಂದೂ ಸಹ ಉಪೇಂದ್ರ ಹೇಳಿದರು. ಇದೇ ವೇಳೆ ಆರ್ ಚಂದ್ರು ಗ್ಲೋಬಲ್ ಲೆವೆಲ್ ಚಿತ್ರಗಳನ್ನು ನಿರ್ದೇಶಿಸಬಲ್ಲ ನಿರ್ದೇಶಕ, ಅವರು ಯಾರನ್ನು ಬೇಕಾದರೂ ಕಬ್ಜ ಮಾಡಿಕೊಂಡು ಬಿಡ್ತಾರೆ, ಅಂತಹ ಒಳ್ಳೆಯ ಕ್ಯಾರೆಕ್ಟರ್ ಎಂದು ಉಪ್ಪಿ ತಿಳಿಸಿದರು.
ಸದ್ಯ ಈ ಚಿತ್ರ ಯಶಸ್ಸಿನ ಬೆನ್ನಲ್ಲೇ ಮುಂದುವರಿದ ಭಾಗದ ಮೇಲೆ ಸಿನಿ ರಸಿಕರಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಶಿವ ರಾಜ್ಕುಮಾರ್ ಆಗಮನವಾಗಿದ್ದು, ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಕಬ್ಜ ಎರಡನೇ ಭಾಗದಲ್ಲಿ ತೆಲುಗು ನಟ ಪವನ್ ಕಲ್ಯಾಣ್ ಸಹ ಇರಲಿದ್ದಾರೆ ಎಂಬ ಸುದ್ದಿ ಇದ್ದು, ಚಿತ್ರ ಮತ್ತಷ್ಟು ದೊಡ್ಡ ಮಟ್ಟದಲ್ಲಿ ರೆಡಿಯಾಗುವುದಂತೂ ಪಕ್ಕಾ.


Click it and Unblock the Notifications











