ಪವಿತ್ರಾ ಗೌಡ ರಿಲೀಸ್ ಆಗ್ತಿದ್ದಂತೆ ಮಾಜಿ ಪತಿ ಪ್ರತ್ಯಕ್ಷ; ಪ್ರೀತಿ ಬಯಸಿ ಬಂತೆ ಒಂಟಿ ಜೀವ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ ಪವಿತ್ರಾ ಗೌಡ ಜೈಲಿನಿಂದ ಹೊರ ಬಂದಿದ್ದಾರೆ. ಆರು ತಿಂಗಳ ಬಳಿಕ ಜೈಲಿನಿಂದ ಹೊರಬಂದ ನಿರಾಳರಾಗಿದ್ದಾರೆ. ಆದರೆ, ಇದೇ ವೇಳೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಕೂಡ ಬೆಂಗಳೂರಿಗೆ ಬಂದಿದ್ದಾರೆ. ಇದೇ ಸಮಯಕ್ಕೆ ಮಾಜಿ ಪತಿ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಮಾಜಿ ಪತ್ನಿಯ ಪ್ರೀತಿಯನ್ನು ಬಯಸಿ ಬಂದಿದ್ದಾರೆ.
ಪವಿತ್ರಾ ಗೌಡ 2007ರಲ್ಲಿ ಸಂಜಯ್ ಸಿಂಗ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರಿಗೆ ಒಬ್ಬ ಮಗಳು ಕೂಡ ಇದ್ದಾರೆ. ಸುಮಾರು ಐದು ವರ್ಷಗಳ ಕಾಲ ಸಂಸಾರ ಮಾಡಿದ್ದ ಈ ಜೋಡಿ ಕಾನೂನಾತ್ಮಕವಾಗಿ ಬೇರೆಯಾಗಿತ್ತು. ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಇಬ್ಬರೂ ವಿಚ್ಛೇದನ ಪಡೆದ ಬಳಿಕ ಇಬ್ಬರೂ ಮತ್ತೆ ಒಂದೇ ಒಂದು ಬಾರಿ ಭೇಟಿಯಾಗಿಲ್ಲ. ಒಂದೇ ಒಂದು ಬಾರಿ ಮಾತಾಡಿಲ್ಲ.

ಆದರೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಳಿಕ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ದಿಢೀರನೇ ಪ್ರತ್ಯಕ್ಷ ಆಗಿದ್ದರು. ಮಾಜಿ ಪತ್ನಿಯನ್ನು ಬೆಂಬಲಿಸಿ ಮಾಧ್ಯಮಗಳಿಗೆ ಮಾತಾಡಿದ್ದರು. ಸುಮಾರು ಆರು ತಿಂಗಳ ಬಳಿಕ ಸಂಜಯ್ ಸಿಂಗ್ ಅವರ ಪ್ರೀತಿ ಬಯಸಿ ಬಂದಿರೋ ಹಾಗಿದೆ. ಮಾಧ್ಯಮಗಳ ಮುಂದೆ ಸ್ನೇಹಿತರನ್ನು ಭೇಟಿ ಮಾಡುವುದಕ್ಕೆ ಬಂದಿದ್ದಾರೆ ಅಂತಿದ್ದಾರೆ. ಆದರೆ, ಅವರ ಮಾತುಗಳನ್ನು ಕೇಳಿದರೆ, ಪವಿತ್ರಾ ಗೌಡ ಮೇಲಿನ ಪ್ರೀತಿ ಇನ್ನೂ ಹಾಗೇ ಇದೆ ಅಂತ ಅನಿಸುತ್ತಿದೆ.
ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಬೇರೆಯಾಗಿ ಸುಮಾರು 12 ವರ್ಷಗಳಾಗಿವೆ. ಆದರೂ ಇನ್ನೂ ಸಂಜಯ್ ಸಿಂಗ್ ಮತ್ತೊಂದು ವಿವಾಹವಾಗಿಲ್ಲ. ಒಂಟಿ ಜೀವನವನ್ನು ನಡೆಸುತ್ತಿದ್ದಾರೆ. ಈಗ ಬೆಂಗಳೂರಿಗೆ ಬಂದಿಳಿದು ಮಾಧ್ಯಮಗಳ ಮುಂದೆ ಪ್ರತ್ಯಕ್ಷ ಆಗಿರುವ ಸಂಜಯ್ ಸಿಂಗ್ ಪ್ರೀತಿ ಬಗ್ಗೆ ಮಾತಾಡುತ್ತಿದ್ದಾರೆ. ಪವಿತ್ರಾ ಗೌಡ ಮೇಲಿರುವ ಪ್ರೀತಿ ಇನ್ನೂ ಹಾಗೇ ಇದೆ. ಅವರು ಮತ್ತೆ ತನ್ನ ಜೀವನದಲ್ಲಿ ಬರುವುದಕ್ಕೆ ಇಷ್ಟಪಟ್ಟರೆ ತನ್ನ ಒಪ್ಪಿಗೆ ಇದೆ ಎಂದು ಹೇಳುತ್ತಿದ್ದಾರೆ.
ವಿಚ್ಚೇದನ ಪಡೆದ ದಿನದಿಂದ ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ಭೇಟಿಯಾಗಿಲ್ಲ. ಫೋನ್ನಲ್ಲೂ ಮಾತಾಡಿಲ್ಲ. ಸಂಜಯ್ ಸಿಂಗ್ ಆಗಾಗ ಮಗಳೊಂದಿಗೆ ಮಾತಾಡಿದ್ದಾರೆ. ಅದು ಬಿಟ್ಟರೆ ಪವಿತ್ರಾ ಗೌಡ ಜೊತೆ ಯಾವುದೇ ಸಂಭಾಷಣೆ ಇದೂವರೆಗೂ ನಡೆದಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಅನ್ನೋದು ಸಂಜಯ್ ಸಿಂಗ್ಗೆ ಗೊತ್ತಿಲ್ಲ. ಈ ಕಾರಣಕ್ಕೆ ಅವರಾಗಿಯೇ ಫೋನ್ ಮಾಡಿ ಕರೆದರೆ ಭೇಟಿ ಮಾಡುತ್ತೇನೆ. ತಾನಿಗಿಯೇ ಹೋಗಿ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇಷ್ಟೆಲ್ಲ ಆದ್ಮೇಲೆ ದರ್ಶನ್ ಹಾಗೂ ಪವಿತ್ರಾ ಗೌಡ ಆತ್ಮೀಯತೆ ಮುಂದುವರೆದರೆ ತನ್ನದೇನು ಅಭ್ಯಂತರವಿಲ್ಲ. ದರ್ಶನ್ ಕೂಡ ಚೆನ್ನಾಗಿ ಇರಲಿ. ಪವಿತ್ರಾ ಗೌಡ ಕೂಡ ಚೆನ್ನಾಗಿ ಇರಲಿ ಎಂದು ಹೇಳಿದ್ದಾರೆ. ಪವಿತ್ರಾ ಗೌಡ ತುಂಬಾನೇ ಸ್ಟ್ರಾಂಗ್ ಇದ್ದಾರೆ. ಅವರ ಕರಿಯರ್ ಅನ್ನು ನೋಡಿಕೊಂಡು ಮುಂದಕ್ಕೆ ಹೋಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಾನು ಅವರಿಗೆ ಈಗ ತೊಂದರೆ ಕೊಡುವುದಕ್ಕೆ ಇಷ್ಟವಿಲ್ಲ ಎಂದಿದ್ದಾರೆ.
ಈ 12 ವರ್ಷಗಳಲ್ಲಿ ಪವಿತ್ರಾ ಗೌಡ ಅವರನ್ನು ಲೈವ್ ಆಗಿ ನೋಡಿಲ್ಲ. ಆದರೆ, ಪವಿತ್ರಾ ಗೌಡ ಅವರನ್ನು ನೋಡಬೇಕು ಎನಿಸಿದಾಗ ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ನಲ್ಲಿ ನೋಡುತ್ತಿದ್ದೆ ಎಂದಿದ್ದಾರೆ. ಮಾಜಿ ಪತಿ ಸಂಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದು ಪವಿತ್ರಾ ಗೌಡ ಖುಷಿ ಕೊಟ್ಟಿದೆಯೋ? ಇಲ್ವೋ ಗೊತ್ತಿಲ್ಲ. ಸಂಜಯ್ ಆಸೆಯಂತೆ ಎಲ್ಲ ಮರೆತು ಮಾಜಿ ಪತಿಯನ್ನು ಸೇರುತ್ತಾ? ಇಲ್ಲ ದರ್ಶನ್ ಗೆಳತಿಯಾಗಿಯೇ ಮುಂದುವರೆಯುತ್ತಾರಾ? ಸಂಜಯ್ ಸಿಂಗ್ ಆಸೆ ಈಡೇರುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ.


Click it and Unblock the Notifications











