ಬೆಂಗಳೂರಿನ ಮೂಲೆ ಮೂಲೆಯಲ್ಲಿಯೂ ಪುನೀತ್ ರಾಜ್ ಕುಮಾರ್ ಇದ್ದಾರೆ-ಅಪ್ಪುಗೆ ದಿನೇಶ್ ಕಾರ್ತಿಕ್ ಸೆಲ್ಯೂಟ್ ...!
ಪುನೀತ್ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಯಾಕಂದರೆ .. ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಪರಮಾತ್ಮ ಪುನೀತ್ ರಾಜ್ಕುಮಾರ್ ಅಂದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದವರಿಗೆ ಕೂಡ ಅಚ್ಚು ಮೆಚ್ಚು. ಕೇವಲ ಜನಸಾಮಾನ್ಯರು ಮಾತ್ರವಲ್ಲ, ಸೆಲೆಬ್ರಿಟಿಗಳು ಕೂಡ ಅಪ್ಪು ಅಭಿಮಾನಿಗಳೇ. ಇದಕ್ಕೆ ದಿನೇಶ್ ಕಾರ್ತಿಕ್ ಸದ್ಯದ ಉದಾಹರಣೆ.
ಹೌದು, ಭಾರತ ತಂಡದ ಕ್ರಿಕೆಟಿಗ ಮತ್ತು ಆರ್ ಸಿ ಬಿ ತಂಡದ ಸ್ಟಾರ್ ಆಟಗಾರನಾಗಿದ್ದ ದಿನೇಶ್ ಕಾರ್ತಿಕ್ ಅಪ್ಪು ಅವರ 50ನೇ ಜಯಂತಿಯ ಪ್ರಯುಕ್ತ ಮಾತನಾಡಿದ್ದಾರೆ. ಅಪ್ಪು ಮೇಲಿನ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.

ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ದಿನೇಶ್ ಕಾರ್ತಿಕ್ ಚೆನ್ನೈದಿಂದ ಬಂದಿರುವ ನಾನು ಮೊದಲಿಂದ ಸಿನಿಮಾ ಪ್ರಿಯ. ನಮ್ಮಲ್ಲಿ ರಜಿನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಧನುಷ್, ವಿಜಯ್ ಸೇತುಪತಿ ಹೀಗೆ ಸಾಕಷ್ಟು ಸೂಪರ್ ಸ್ಟಾರ್ಗಳಿದ್ದಾರೆ.
ಆದರೆ ಆರ್ಸಿಬಿ ಪರ ಮೂರು ವರ್ಷಗಳ ಕಾಲ ಆಡುವಾಗ ಸಾಕಷ್ಟು ಸಮಯ ನಾನು ಬೆಂಗಳೂರಿನಲ್ಲಿ ಕಳೆದಿದ್ದೆ ಆಗ ಮತ್ತೊಬ್ಬರು ಇದ್ದಾರೆ ಎನ್ನುವುದು ಗೊತ್ತಾಯ್ತು. ಬೆಂಗಳೂರು ಅವರನ್ನು ತುಂಬಾ ಇಷ್ಟ ಪಡುತ್ತದೆ. ಅವರೇ ಪುನೀತ್ ರಾಜ್ ಕುಮಾರ್ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲಿಯೇ ಹೋದರು ಪುನೀತ್ ರಾಜ್ ಕುಮಾರ್ ಕಾಣ್ತಾರೆ, ಅವರ ಕಟೌಟ್ ಪೋಸ್ಟರ್ಗಳು ನೋಡಲು ಸಿಗುತ್ತವೆ ಎಂದಿರುವ ದಿನೇಶ್ ಕಾರ್ತಿಕ್ ರಸ್ತೆಗಳಿಗೆ ಕೂಡ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಬಹುಬೇಗ ಅಗಲಿದರು ಆದರೆ ಅವರ ನೆನಪುಗಳು ಸದಾ ಜೀವಂತವಾಗಿವೆ ಎಂದು ಹೇಳಿರುವ ದಿನೇಶ್ ಕಾರ್ತಿಕ್ ಹಲವು ಅಂಗಡಿಗಳಿಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಇಲ್ಲಿನ ಜನ ಅವರನ್ನು ಅತ್ಯಂತ ಪ್ರೀತಿಯಿಂದ ಹೃದಯಾಳದಿಂದ ಆರಾಧಿಸುತ್ತಾರೆ ಪೂಜಿಸುತ್ತಾರೆ ಎಂದಿರುವ ದಿನೇಶ್ ಕಾರ್ತಿಕ್ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಅವರ ಪರಂಪರೆ ಪಸರಿಸಿದೆ ಎಂದು ಹೇಳಿದ್ದಾರೆ. ಅವರ ಹುಟ್ಟುಹಬ್ಬದ ದಿನ ಲೆಜೆಂಡ್ಗೆ ನನ್ನ ನಮನ ಅವರ ಯಾವ ಚಿತ್ರಗಳನ್ನು ನಾನು ನೋಡಬೇಕು ಎಂದು ನನಗೆ ಹೇಳಿ ಎಂದು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಭಾವುಕರಾಗಿದ್ದಾರೆ.
ಆರ್ ಸಿ ಬಿ ತಂಡದ ಕೋಚ್ ದಿನೇಶ್ ಕಾರ್ತಿಕ್ ಅವರ ಈ ನುಡಿಗಳನ್ನು ಕೇಳಿ ಅನೇಕರು ಭಾವುಕರಾಗಿದ್ದಾರೆ. ಅಪ್ಪು ಮೇಲೇ ನಿಮಗೆ ಇರುವ ಅಭಿಮಾನ ಕಂಡು ನಿಮ್ಮ ಮೇಲೆ ನಮಗೆ ಇದ್ದ ಅಭಿಮಾನ ಇನ್ನು ಹೆಚ್ಚಾಯ್ತು ಎಂದು ಹೇಳಿದ್ದಾರೆ. ಅಪ್ಪು, ಅರಸು, ಅಭಿ, ಬಿಂದಾಸ್, ಜಾಲಿ, ಮಿಲನಾ, ರಾಜಕುಮಾರ, ಚಿತ್ರಗಳನ್ನು ವೀಕ್ಷಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಅಪ್ಪು ಚಿತ್ರಮಂದಿರದಲ್ಲಿ ಮರುಬಿಡುಗಡೆಯಾದ ಹಿನ್ನೆಲೆ ಚಿತ್ರಮಂದಿರದಲ್ಲಿ ಅಪ್ಪು ಚಿತ್ರವನ್ನು ನೋಡಿ ಎಂದು ಕೂಡ ಕೆಲವರು ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಅವರಿಗೆ ಧನ್ಯವಾದವನ್ನು ಕೂಡ ಹೇಳಿದ್ಧಾರೆ.
ಇನ್ನು ನಿನ್ನೆ ಪುನೀತ್ ರಾಜ್ ಕುಮಾರ್ ಅವರ 50ನೇ ಜಯಂತಿ ಹಿನ್ನೆಲೆ ಕಂಠೀರವ ಸ್ಟುಡಿಯೋಗೆ ಜನಸಾಗರವೇ ಹರಿದು ಬಂದಿತ್ತು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪುತ್ರಿಯರಾದ ಧೃತಿ ಮತ್ತು ವಂದಿತಾ, ಶಿವರಾಜ್ ಕುಮಾರ್ ದಂಪತಿ, ರಾಘವೇಂದ್ರ ರಾಜ್ ಕುಮಾರ್ ದಂಪತಿ ಯುವರಾಜ್ ಕುಮಾರ್ ಸೇರಿ ದೊಡ್ಮನೆಯ ಸದಸ್ಯರೆಲ್ಲರು ಪುನೀತ್ ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆಯನ್ನು ಸಲ್ಲಿಸಿದರು. ಪುನೀತ್ ಅವರ ನೆಚ್ಚಿನ ತಿಂಡಿ ತಿನಿಸುಗಳನ್ನು ಸಮಾಧಿಯ ಮುಂದೆ ಇಡಲಾಗಿತ್ತು. ಪೂಜೆಯ ನಂತರ ಅಭಿಮಾನಿಗಳಿಗೆ ಅಶ್ವಿನಿ, ಧೃತಿ ಮತ್ತು ವಂದಿತಾ ಅನ್ನ ಸಂತರ್ಪಣೆಯನ್ನು ಮಾಡಿದರು.
50ನೇ ಜಯಂತಿ ಹಿನ್ನೆಲೆ ಸಮಾಧಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಅಭಿಮಾನಿಗಳು ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಹಲವಾರು ಜನ ಕೇಕ್ಗಳನ್ನು ತಂದು ಸಮಾಧಿಯ ಮುಂದೆ ಅಪ್ಪು ಅವರನ್ನು ನೆನೆದು ಕೇಕ್ ಕಟ್ ಮಾಡಿದರು. ಕವನ ಲೇಖನ ಬರೆದು ಹಾಡು ಹಾಡಿ ಅಪ್ಪು ಅವರನ್ನು ಸ್ಮರಿಸಿದರು. ಇನ್ನು ಅನುಶ್ರೀ, ನಮ್ರತಾ ಗೌಡ, ಪ್ರಥಮ್, ಸಾಧು ಕೋಕಿಲಾ ಸೇರಿ ಕನ್ನಡ ಚಿತ್ರರಂಗದ ಹಲವು ತಾರೆಯರು ಅಪ್ಪು ಸ್ಮಾರಕಕ್ಕೆ ನಮನವನ್ನು ಸಲ್ಲಿಸಿದರು. ಅಪ್ಪು ಜೊತೆ ತಮ್ಮ ನೆನಪುಗಳನ್ನು ಹಂಚಿಕೊಂಡರು. ಮಾತನಾಡುತ್ತಾ ಭಾವುಕರಾದರು.
ಅಂದ್ಹಾಗೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ { ಐಪಿಎಲ್ }ಗೆ ಇನ್ನೇನು ಕೇವಲ ನಾಲ್ಕು ದಿನಗಳಲ್ಲಿ ಚಾಲನೆ ಸಿಗಲಿದೆ. ಮಾರ್ಚ್ 22ರಂದು ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಮೂಲಕ ಹದಿನೆಂಟನೇ ಆವೃತ್ತಿಗೆ ಚಾಲನೆ ಸಿಗಲಿದೆ. ಇನ್ನು ಐಪಿಎಲ್ನಲ್ಲಿ 257 ಪಂದ್ಯಗಳನ್ನು ಆಡಿ 4842 ರನ್ಗಳಿಸಿರುವ ದಿನೇಶ್ ಕಾರ್ತಿಕ್ 2022 ಮತ್ತು 2023ರಲ್ಲಿ ಬೆಂಗಳೂರು ತಂಡದ ಪರ ಮೈದಾನಕ್ಕೆ ಇಳಿದಿದ್ದರು.
ಇಂಥಾ ದಿನೇಶ್ ಕಾರ್ತಿಕ್ ಸದ್ಯ ಎಲ್ಲ ಸ್ವರೂಪದ ಕ್ರಿಕೆಟ್ಗೆ ವಿದಾಯವನ್ನು ಹೇಳಿದ್ದು ಈ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನು, NDTV ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಈ ಹೊಸ ರೋಲ್ ಬಗ್ಗೆ ಮಾತನಾಡಿರುವ ದಿನೇಶ್ ಕಾರ್ತಿಕ್ ಈ ಬಾರಿ ಎಲ್ಲರಿಗೆ ಸಮಾನ ಅವಕಾಶ ನೀಡುವ ಮಾತುಗಳನ್ನಾಡಿದ್ದಾರೆ. ಐಪಿಎಲ್ ಹೇಗೆ ಭಾರತದ ಯುವ ಕ್ರಿಕೆಟ್ ಆಟಗಾರರಿಗೆ ಅತ್ಯುತ್ತಮವಾದ ವೇದಿಕೆಯಾಗಿದೆ ಎನ್ನುವುದರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಕಪ್ ಗೆಲ್ಲುವ ಭರವಸೆಯನ್ನು ಕೂಡ ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಕಳೆದ ಎರಡು ಸೀಸನ್ನಲ್ಲಿ ಆಟಗಾರನಾಗಿ ಮೈದಾನದಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಈ ಬಾರಿ ಕೋಚ್ ಸ್ಥಾನದಲ್ಲಿ ನಿಂತುಕೊಂಡು ಆರ್ಸಿಬಿಗೆ ಕಪ್ ತಂದು ಕೊಡುತ್ತಾರಾ ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಇನ್ನೆರಡು ತಿಂಗಳಿನಲ್ಲಿ ಸಿಗಲಿದೆಯಾದರೂ ಈ ಬಾರಿ ಕೂಡ ಕಪ್ ನಮ್ದೇ ಎನ್ನುವ ಘೋಷವಾಕ್ಯ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮೊಳಗುತ್ತಿದೆ.
ಇನ್ನುಳಿದಂತೆ ಈ ಬಾರಿ ರಜತ್ ಪಾಟಿದಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದು, ಮೊದಲ ಪಂದ್ಯ ಕೋಲ್ಕತ್ತಾ ವಿರುದ್ದ ಕಣಕ್ಕಿಳಿಯಬಹುದಾದ ಹನ್ನೊಂದು ಜನರ ತಂಡ ಈ ಕೆಳಗಿನಂತೆ ಇದೆ
ಕೋಲ್ಕತ್ತಾ ತಂಡದ ವಿರುದ್ಧ ಆರ್ಸಿಬಿ 11 ಜನರ ಸಂಭಾವ್ಯ ಪ್ಲೇಯಿಂಗ್ 11
ರಜತ್ ಪಾಟಿದಾರ್ { ನಾಯಕ }
ವಿರಾಟ್ ಕೊಹ್ಲಿ
ಲಿಯಾಮ್ ಲಿವಿಂಗ್ಸ್ಟೋನ್
ಫಿಲ್ ಸಾಲ್ಟ್
ಜಿತೇಶ್ ಶರ್ಮಾ
ಡಿವ್ ಡೇವಿಡ್
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಸುಯಾಶ್ ಶರ್ಮಾ
ಜೋಶ್ ಹ್ಯಾಜಲ್ವುಡ್
ಯಶ್ ದಯಾಳ್


Click it and Unblock the Notifications











