ಸಪ್ತಸಾಗರದಾಚೆ ದರ್ಶನ್ ಹವಾ, ಅಮೆರಿಕಾದ ಪ್ರತಿಷ್ಠಿತ ಸ್ಥಳದಲ್ಲಿ ಮಿಂಚಿದ ದಾಸ..!
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು.
ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು.

ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು ಅಷ್ಟೇ ಅಲ್ಲ. ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರ ವ್ಯಾಮೋಹಿ ಕೆಲಸಗಳನ್ನು ಮಾಡುವುದು ಕೂಡ ಅಭಿಮಾನವೇ.
ಹೀಗೆ ನಾನಾ ರೀತಿಯ ಅಭಿಮಾನದ ಪ್ರದರ್ಶನ ಮಾಡುವ ಅಭಿಮಾನಿಗಳನ್ನು ಕನ್ನಡದ ಎಲ್ಲ ಸ್ಟಾರ್ಗಳು ಕೂಡ ಹೊಂದಿದ್ದಾರೆ. ಆ ಪೈಕಿ ಒಂದು ಹೆಜ್ಜೆ ಮುಂದೆ ಹೋಗಿರುವ ದರ್ಶನ್ ಅವರ ಅಭಿಮಾನಿ ಅಮೆರಿಕಾದ ಟೈಮ್ ಸ್ಕ್ವೇರ್ನಲ್ಲಿ ದರ್ಶನ್ ಅವರ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನ ಮಾಡಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿರುವ ಟೈಮ್ ಸ್ಕ್ವೇರ್ನಲ್ಲಿ ದರ್ಶನ್ ಅವರ ಫೋಟೊ ಪ್ರದರ್ಶಿಸಿರುವ ದರ್ಶನ್ ಅವರ ಅಭಿಮಾನಿ ಫೋಟೊ ಪಕ್ಕ ಜೀವನದಲ್ಲಿ ಏನೇ ಬಂದರೂ ಕೂಡ ನಾವು ಒಟ್ಟಿಗೆ ಎದುರಿಸುತ್ತೇವೆ, ಅದನ್ನು ದಾಟಿಕೊಂಡು ಮುಂದೆ ಬರುತ್ತೇವೆ, ಲವ್ ಯೂ ಡಿ ಬಾಸ್ ಎಂಬ ಸಂದೇಶವನ್ನು ಕೂಡ ಹಾಕಿದ್ದಾರೆ. ಈ ಮೂಲಕ ತಮ್ಮ ಅಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.
ಸದ್ಯ ಅಭಿಮಾನಿಯ ಈ ಅಭಿಮಾನದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದರ್ಶನ್ ಅವರ ಅಸಂಖ್ಯಾತ, ಅಗಣಿತ ಅಭಿಮಾನಿಗಳ ಸಂಭ್ರಮವನ್ನು ಕೂಡ ಹೆಚ್ಚಿಸಿದೆ. ಹಲವರು ಈ ಫೋಟೊಗಳಿಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಮಾನವನ್ನು ಸದ್ಯ ತೋರಿಸುತ್ತಿದ್ದಾರೆ. ಟೈಮ್ಸ್ ಸ್ಕ್ವೇರ್ನಲ್ಲಿ ಫೋಟೊ ಪ್ರದರ್ಶಿಸಿದ ಅಭಿಮಾನಿಗೆ ಧನ್ಯವಾದವನ್ನು ಕೂಡ ಹೇಳುತ್ತಿದ್ದಾರೆ.
ಇನ್ನುಳಿದಂತೆ ದರ್ಶನ್ ಮೊನ್ನೆಯಷ್ಟೇ ಡೆವಿಲ್ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ರಾಜಸ್ಥಾನದಿಂದ ಮರಳಿ ಬಂದಿದ್ಧಾರೆ. ರಾಜಸ್ಥಾನದಲ್ಲಿ ಎಡಬಿಡದೆ 28 ಗಂಟೆಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದರಿಂದ ಅವರಿಗೆ ಮತ್ತೆ ಬೆನ್ನು ನೋವು ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇನ್ನು ಮೊನ್ನೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಬೆನ್ನು ನೋವಿನ ಕಾರಣವನ್ನು ನೀಡಿ ದರ್ಶನ್ ವಿಚಾರಣೆಗೆ ಗೈರಾಗಿದ್ದರು. ಈ ಹಿನ್ನೆಲೆ ನ್ಯಾಯಾಧೀಶರು ತಮ್ಮ ಅಸಮಾಧಾನ ಹೊರ ಹಾಕಿ ಮುಂದಿನ ವಿಚಾರಣೆಗೆ ಬರುವಂತೆ ತಾಕಿತ್ತು ಮಾಡಿದ್ದರು. ವಿಚಾರಣೆಗೆ ಗೈರಾದ ದರ್ಶನ್ ಆ ನಂತರ ತಮ್ಮ ಅತ್ಯಾಪ್ತ ಸ್ನೇಹಿತ ಧನ್ವೀರ್ ಗೌಡ ಅವರ ವಾಮನ ಚಿತ್ರವನ್ನು ನೋಡಲು ಕೂಡ ಹೋಗಿದ್ದರು. ಚಿತ್ರ ನೋಡಿ ಧನ್ವೀರ್ ಅವರನ್ನು ಬಾಯ್ತುಂಬ ಹೊಗಳಿದ್ದರು.
ಒಟ್ನಲ್ಲಿ ಅನೇಕರು ಆಗಾಗ ಅಮೆರಿಕಾದ ಟೈಮ್ಸ್ ಸ್ಕ್ವೇರ್ನಲ್ಲಿ ತಮ್ಮ ನೆಚ್ಚಿನ ತಾರೆಯರ ಫೋಟೊಗಳನ್ನು ಪ್ರದರ್ಶಿಸುತ್ತಾರೆ. ಖುಷಿ ಪಡುತ್ತಾರೆ. ಸದ್ಯಕ್ಕೆ ದರ್ಶನ್ ಅವರ ಅಭಿಮಾನಿ ಕೂಡ ಇದೇ ಸಾಲಿಗೆ ಸೇರಿದ್ದಾರೆ. ದರ್ಶನ್ ಅವರ ಭಾವಚಿತ್ರವನ್ನು ಅಮೆರಿಕಾದ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶಿಸಿದ್ದಾರೆ.


Click it and Unblock the Notifications











