ಅಪ್ಪು 3ನೇ ಪುಣ್ಯಸ್ಮರಣೆ; ಕರಗದ ಅಭಿಮಾನಿಗಳ ನೋವು
ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಇದು ಕರಾಳ ದಿನ. ಅಪ್ಪು ಅಗಲಿ 3 ವರ್ಷ ಕಳೆದಿದೆ. ಆದರೆ ಅವರ ಅಗಲಿಕೆಯ ನೋವು ಮಾತ್ರ ಇನ್ನು ಕರಗಿಲ್ಲ. ಅಕ್ಟೋಬರ್ 29, 2021ರಂದು ಕರುನಾಡಿಗೆ ಅಪ್ಪು ಇನ್ನಿಲ್ಲ ಎನ್ನುವ ಬರಸಿಡಿಲು ಬಂದೆರಗಿತ್ತು. ಯಾರೂ ಕೂಡ ಇದನ್ನು ನಂಬಲು ಸಿದ್ಧರಿರಲಿಲ್ಲ. ಆದರೆ ನಂಬದೇ ಬೇರೆ ವಿಧಿ ಇರಲಿಲ್ಲ.
ತಮ್ಮ 46ನೇ ವಯಸ್ಸಿನಲ್ಲೇ ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಬಹಳ ಗಟ್ಟಿಮುಟ್ಟಾಗಿ ಇದ್ದ ಅಪ್ಪುಗೆ ಹೃದಯಾಘಾತವೇ? ಪ್ರಾಣಪಕ್ಷಿಯೇ ಹಾರಿ ಹೋಯಿತಾ? ಎಂದು ಎಲ್ಲರೂ ಶಾಕ್ ಆಗಿದ್ದರು. ತಮ್ಮ ಸಿನಿಮಾಗಳು ಹಾಗೂ ಸರಳ, ಸಜ್ಜನ ನಡೆ ನುಡಿಯಿಂದ ಪುನೀತ್ ಕರುನಾಡಿನ ಮನೆಮಗನೇ ಆಗಿಬಿಟ್ಟಿದ್ದರು. ಅಂದು ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಇಡೀ ರಾಜ್ಯವೇ ಸ್ತಬ್ಧವಾಗಿತ್ತು, ವಾರದಮಟ್ಟಿಗೆ ಸೂತಕದ ಛಾಯೆ ಆವರಿಸಿತ್ತು.

ಲಕ್ಷಾಂತರ ಜನ ಅಪ್ಪು ಅಂತಿಮ ದರ್ಶನ ಪಡೆದರು. ಇವತ್ತಿಗೂ ಪ್ರತಿ ಕ್ಷಣ ಅಭಿಮಾನಿಗಳು ನೆಚ್ಚಿನ ನಟನನ್ನು ಸ್ಮರಿಸುತ್ತಲೇ ಇದ್ದಾರೆ. ಅಪ್ಪು ಇಲ್ಲದ ನೋಡವು ಕಾಡುತ್ತಲೇ ಇದೆ. ಕಂಠೀರವ ಸ್ಟುಡಿಯೋದಲ್ಲಿ ತಂದೆ ಡಾ. ರಾಜ್ಕುಮಾರ್, ತಾಯಿ ಪಾರ್ವತಮ್ಮ ರಾಜ್ಕುಮಾರ್ ಸಮಾಧಿ ಪಕ್ಕದಲ್ಲೇ ಅಪ್ಪು ಅಂತ್ಯಕ್ರಿಯೆ ನಡೆದಿತ್ತು. ಪ್ರತಿದಿನ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡುತ್ತಲೇ ಇದ್ದಾರೆ. ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸಮಾಧಿ ಬಳಿಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಮಾಧಿಯನ್ನು ಬಿಳಿ ಬಣ್ಣದ ಹೂಗಳಿಂದ ಸಿಂಗರಿಸಲಾಗಿದೆ. ಬೆಳ್ಳಂಬೆಳಗ್ಗೆ ಸಾಕಷ್ಟು ಅಭಿಮಾನಿಗಳು ಆಗಮಿಸಿ ಸಮಾಧಿನೆ ನಮನ ಸಲ್ಲಿಸುತ್ತಿದ್ದಾರೆ. ಕುಟುಂಬ ಸದಸ್ಯರು ಭೇಟಿ ನೀಡಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಲಿದ್ದಾರೆ.
ದೂರ ದೂರುಗಳಿಂದ ಅಭಿಮಾನಿಗಳು ಅಪ್ಪು ಸಮಾಧಿಗೆ ಆಗಮಿಸಲಿದ್ದಾರೆ. ಅವರಿಗಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅನ್ನದಾನದ ವ್ಯವಸ್ಥೆ ಮಾಡಿಸಿದ್ದಾರೆ. ನಿನ್ನೆ ನಗರದ ಯಡಿಯೂರು ವಾರ್ಡ್ನಲ್ಲಿ ಪುನೀತ್ ರಾಜ್ಕುಮಾರ್ ಕಂಚಿನ ಪುತ್ಥಳಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಲೋಕಾರ್ಪಣೆ ಮಾಡಿದ್ದರು.
ಸೌತ್ ಎಂಡ್ ಸರ್ಕಲ್ನಲ್ಲಿ ಯಡಿಯೂರು ನಾಗರಿಕರ ವೇದಿಕೆ ವತಿಯಿಂದ ಅದಾಗಲೇ ಡಾ. ರಾಜ್ಕುಮಾರ್, ಪಾರ್ವತಮ್ಮ ರಾಜ್ಕುಮಾರ್ ಕಂಚಿನ ಪುತ್ಥಳಿ ನಿರ್ಮಿಸಲಾಗಿತ್ತು. ಅದರ ಪಕ್ಕದಲ್ಲೇ ಈಗ ಅಪ್ಪು ಪುತ್ಥಳಿ ಕೂಡ ಜಾಗ ಮಾಡಿಕೊಂಡಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಹುಟ್ಟಿದ 6 ತಿಂಗಳಿಗೆ ಪುನೀತ್ ರಾಜ್ಕುಮಾರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ತಂದೆ ಜೊತೆ ಬಾಲನಟನಾಗಿ ಚಿತ್ರರಂಗಕ್ಕೆ ಬಂದರು. 'ಬೆಟ್ಟದ ಹೂವು', 'ಯಾರಿವನು', 'ಎರಡು ನಕ್ಷತ್ರ' ರೀತಿಯ ಚಿತ್ರಗಳಲ್ಲಿ ಲೀಡ್ ರೋಲ್ಗಳಲ್ಲಿ ನಟಿಸಿ ಗೆದ್ದಿದ್ದರು. ಬಳಿಕ 'ಅಪ್ಪು' ಚಿತ್ರದ ಮೂಲಕ ಹೀರೊ ಆಗಿ ಸಿನಿರಸಿಕರ ಮುಂದೆ ಬಂದಿದ್ದರು. ಬಳಿಕ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು.
ತಮ್ಮ ಡ್ಯಾನ್ಸ್ ಹಾಗೂ ಸ್ಟಂಟ್ಸ್ ಮೂಲಕ ಅಪ್ಪು ಸಿನಿರಸಿಕರನ್ನು ಹೆಚ್ಚು ರಂಜಿಸಿದರು. ಬರೀ ನಟನಾಗಿ ಮಾತ್ರವಲ್ಲದೇ ಚಿಕ್ಕಂದಿನಲ್ಲೇ ಗಾಯಕನಾಗಿಯೂ ಪುನೀತ್ ಗುರ್ತಿಸಿಕೊಂಡರು. ಸಾಕಷ್ಟು ಹಿಟ್ ಗೀತೆಗಳಿಗೆ ಅಪ್ಪು ದನಿಯಾಗಿದ್ದಾರೆ. ನಟನೆ, ಗಾಯನದ ಜೊತೆಗೆ ಕಿರುತೆರೆಯ ನಿರೂಪಕನಾಗಿಯೂ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. 'ಕನ್ನಡದ ಕೊಟ್ಯಾಧಿಪತಿ' ಹಾಗೂ 'ಫ್ಯಾಮಿಲಿ ಪವರ್' ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. 'ಗಂಧದಗುಡಿ' ಡಾಕ್ಯು ಡ್ರಾಮಾ ಚಿತ್ರದಲ್ಲಿ ಕೊನೆಯದಾಗಿ ಪುನೀತ್ ರಾಜ್ಕುಮಾರ್ ಮಿಂಚಿದ್ದರು. 2 ವರ್ಷದ ಹಿಂದೆ ಆ ಸಿನಿಮಾ ತೆರೆಗೆ ಬಂದಿತ್ತು.


Click it and Unblock the Notifications











