ಡಾ. ರಾಜ್ಕುಮಾರ್ 94ನೇ ಜನ್ಮದಿನೋತ್ಸವ: ವರನಟನ ನೆನೆದ ಅಭಿಮಾನಿಗಳು
ಇಂದು ನಟಸಾರ್ವಭೌಮ ಡಾ. ರಾಜ್ಕುಮಾರ್ 94ನೇ ವರ್ಷದ ಹುಟ್ಟುಹಬ್ಬ. ಕನ್ನಡ ಚಿತ್ರರಂಗ, ನಾಡು ನುಡಿಗೆ ಡಾ. ರಾಜ್ ಕೊಡುಗೆ ಅಪಾರ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ವರನಟನನ್ನು ಸ್ಮರಿಸುತ್ತಿದ್ದಾರೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಪೂಣ್ಯಭೂಮಿಗೆ ಆಗಮಿಸಿ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ಸಮಾಧಿಗೆ ಪೂಜೆ ನೆರವೇರಿಸಲಿದ್ದಾರೆ.
1929ರ ಏಪ್ರಿಲ್ 24ರಂದು ಚಾಮರಾಜನಗರ ಜಿಲ್ಲೆಯ ಗಾಜನೂರಿನಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರನಾಗಿ ಮುತ್ತುರಾಜ್ ಜನಿಸಿದರು. ತಂದೆ ಜೊತೆ ನಾಟಕಗಳಲ್ಲಿ ನಟಿಸುತತಾ ಬೆಳೆದ ಅವರು ಮುಂದೆ ಕನ್ನಡ ಚಿತ್ರರಂಗಕ್ಕೆ ಬಂದರು. ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಭೌತಿಕವಾಗಿ ಡಾ. ರಾಜ್ ನಮ್ಮೊಟ್ಟಿಗೆ ಇಲ್ಲದೇ ಇದ್ದರು ಅವರ ಸಿನಿಮಾಗಳು, ವ್ಯಕ್ತಿತ್ವ, ಸಾಧನೆಗಳೆಲ್ಲವೂ ಕನ್ನಡಿಗನ ಹೃದಯದಲ್ಲಿ ಚಿರಸ್ಥಾಯಿಯಾಗಿದೆ. ಅಣ್ಣಾವ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಸಂಘಸಂಸ್ಥೆಗಳು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನಟನಾಗಿ ಕನ್ನಡ ಸಿನಿರಸಿಕರ ಮುಂದೆ ಬಂದ ಡಾ. ರಾಜ್ಕುಮಾರ್ ಮುಂದೆ ಕನ್ನಡದ ಶಕ್ತಿಯಾಗಿ ಬೆಳೆದರು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದರು. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಭಾರತೀಯ ಚಿತ್ರರಂಗದ ಮೇರುನಟನಾಗಿ ಡಾ. ರಾಜ್ ಹೊರಹೊಮ್ಮಿದರು. ಆಡು ಮುಟ್ಟದ ಸೊಪ್ಪಿಲ್ಲ ಡಾ. ರಾಜ್ಕುಮಾರ್ ಮಾಡದ ಪಾತ್ರಗಳಿಲ್ಲ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಾಂಡ್ ಶೈಲಿಯ ಸಿನಿಮಾಗಳಲ್ಲಿ ಮೋಡಿ ಮಾಡಿದ್ದರು.
ಡಾ. ರಾಜ್ಕುಮಾರ್ ಬರೀ ಸಿನಿಮಾ ನಟನೆಯಿಂದ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಿಂದಲೂ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ಧಾರೆ. ಮಡದಿ ಪಾರ್ವತಮ್ಮ ರಾಜ್ಕುಮಾರ್ ತಮ್ಮದೇ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿ ಹಲವು ಹಿಟ್ ಸಿನಿಮಾಗಳನ್ನು ನೀಡಿದರು. ಇನ್ನು ಅಣ್ಣಾವ್ರ ಹಾದಿಯಲ್ಲೇ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಚಿತ್ರರಂಗಕ್ಕೆ ಬಂದರು. ತಮ್ಮದೇ ಪರಿಶ್ರಮದಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಇದೀಗ ಮುತ್ತುರಾಜನ ಮೊಮ್ಮಕ್ಕಳು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.
ಕನ್ನಡ ನಾಡು ನುಡಿಯ ವಿಚಾರ ಬಂದಾಗ ಡಾ. ರಾಜ್ಕುಮಾರ್ ಸದಾ ಮುಂದೆ ನಿಲ್ಲುತ್ತಿದ್ದರು. ಗೋಕಾಕ್ ಚಳುವಳಿ ಯಶಸ್ಸಿನಲ್ಲಿ ಅಣ್ಣಾವ್ರ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ಸ್ವತಂತ್ರ ಭಾರತದಲ್ಲಿ ಆಗಷ್ಟೇ ನಿಧಾನವಾಗಿ ಕಣ್ಣುಬಿಡುತ್ತಿದ್ದ ಕನ್ನಡ ಚಿತ್ರರಂಗವನ್ನು ತಮ್ಮ ಸಿನಿಮಾಗಳಿಂದ ದೊಡ್ಡದಾಗಿ ಕಟ್ಟಿ ಬೆಳೆದ ಕೀರ್ತಿ ಅಣ್ಣಾವ್ರಿಗೆ ಸಲ್ಲುತ್ತದೆ. ಸಿನಿಮಾಗಳ ಮೂಲಕ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದವರು ಡಾ. ರಾಜ್ಕುಮಾರ್. ನಟರಾಗಿ ಮಾತ್ರವಲ್ಲದೇ ಗಾಯನ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದರು.
ತಮ್ಮ ಸಿನಿಮಾಗಳು, ಚಳುವಳಿಗಳ ಮುಖೇನ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಮೌಲ್ಯಗಳನ್ನು ಡಾ. ರಾಜ್ಕುಮಾರ್ ಎತ್ತಿ ಹಿಡಿದರು. ಸಾಮಾಜಿಕ ಸಂದೇಶವುಳ್ಳ ಸಿನಿಮಾ ಮೂಲಕ ಜನತೆಗೆ ಮೌಲ್ಯಗಳನ್ನು ದಾಟಿಸಿದವರು ಅಣ್ಣಾವ್ರು. ನಿಜ ಜೀವನದಲ್ಲೂ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಎಲ್ಲರಿಗೂ ಮಾದರಿ ಆಗಿದ್ದರು. ಅದೆಷ್ಟೋ ಜನರಿಗೆ ಪ್ರೇರಣೆಯಾದರು, ದಾರಿ ದೀಪ ಆದವರು ಡಾ. ರಾಜ್ಕುಮಾರ್.
ತಮಗಿದ್ದ ಜನಪ್ರಿಯತೆಯಿಂದ ಡಾ. ರಾಜ್ಕುಮಾರ್ ಮನಸ್ಸು ಮಾಡಿದ್ದರೆ ರಾಜಕೀಯರಂಗಕ್ಕೆ ಧುಮುಕಿ ಮುಖ್ಯಮಂತ್ರಿ ಆಗಮಬಹುಗಿತ್ತು. ತಮ್ಮದೇ ಪಕ್ಷ ಕಟ್ಟಬಹುದಿತ್ತು. ಎನ್ಟಿಆರ್, ಎಂಜಿಆರ್ರಂತಹ ತಮ್ಮ ಸಮಕಾಲೀನ ಸಿನಿಮಾ ನಟರು ರಾಜಕೀಯರಂಗಕ್ಕೆ ಬಂದು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು ಅಣ್ಣಾವ್ರು ಮಾತ್ರ ಆ ಬಗ್ಗೆ ಯೋಚಿಸಲಿಲ್ಲ. ಸಾಕಷ್ಟು ಜನ ರಾಜಕೀಯ ಮುಖಂಡರು ಅವರನ್ನು ರಾಜಕೀಯರಂಗಕ್ಕೆ ಆಹ್ವಾನಿಸಿದರೂ ಒಪ್ಪಲಿಲ್ಲ. ರಾಜಕೀಯಕ್ಕೆ ಬರದೇ ಜನರನಾಯಕನಾಗಿ ಉಳಿದುಬಿಟ್ಟರು.


Click it and Unblock the Notifications











