'ಸಿನಿಮಾ ಮಾಡಬೇಡಿ' ಎಂದು ಸುದೀಪ್ ವಿರುದ್ಧ ಉರಿದುಬಿದ್ದ ಓರ್ವ ಅಭಿಮಾನಿ
ನಟ ಕಿಚ್ಚ ಸುದೀಪ್ ಈ ವರ್ಷದ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿಲ್ಲ. ಕೆಲ ತಿಂಗಳುಗಳ ಹಿಂದೆ ಹೇಳಿದಂತೆ ಈ ಬಾರಿ ಅವರು ಬರ್ತ್ ಡೇ ದಿನದಂದು ಅಭಿಮಾನಿಗಳ ಕೈಗೆ ಸಿಗಲಿಲ್ಲ. ಇದೇ ವಿಷಯ ಈಗ ಕೆಲ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
''ನಾನು ಈ ವರ್ಷದಿಂದ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ದಾನ ಮಾಡಿ'' ಅಂತ ಸುದೀಪ್ ಹೇಳಿದ್ದರು. ಈಗ ಅವರ ಅಭಿಮಾನಿ ''ಇನ್ನು ಮುಂದೆ ನೀವು ಸಿನಿಮಾ ಮಾಡಬೇಡಿ. ನಾವು ನಿಮ್ಮ ಸಿನಿಮಾ ನೋಡುವುದಿಲ್ಲ'' ಅಂತ ಹೇಳಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಸುದೀಪ್ ಕಟ್ಟಾ ಅಭಿಮಾನಿಯಾಗಿದ್ದ ಈತನ ಕೋಪಕ್ಕೆ ಕಾರಣವಾಗಿದ್ದು ಏನು ಎಂಬುದು ಇಲ್ಲಿದೆ ಓದಿ...

ಸುದೀಪ್ ಸಿಗಲಿಲ್ಲ
ಸೆಪ್ಟೆಂಬರ್ 2 ರಂದು ಸುದೀಪ್ ಅವರ ಹುಟ್ಟುಹಬ್ಬ ಇತ್ತು. ಈ ಹಿನ್ನಲೆಯಲ್ಲಿ ಅವರ ಅಭಿಮಾನಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಬಂದಿದ್ದರು. ಆದರೆ ಅಭಿಮಾನಿಗಳಿಗೆ ಸುದೀಪ್ ಸಿಗದೆ ಇರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಅಭಿಮಾನಿಯ ಮಾತು
''ನಾವು ನಿಮಗೆ ತುಂಬ ಬೆಲೆ ಕೊಡುತ್ತಾ ಇದ್ವಿ. ನಮ್ಮ ಹೀರೋ ಬೆಳೆಯಬೇಕು ಅಂತ ನಾವು ಕಷ್ಟಪಡುತ್ತೇವೆ. ನಾವು ದಿನಪೂರ್ತಿ ದುಡಿಯುತ್ತೇವೆ. ವರ್ಷದಲ್ಲಿ ಒಂದು ದಿನ ನಿಮ್ಮ ಹುಟ್ಟುಹಬ್ಬಕ್ಕೆ ಖರ್ಚು ಮಾಡಿದ್ದರೆ ನಮಗೆ ಏನು ಲಾಸ್ ಆಗುವುದಿಲ್ಲ.'' ಎಂದು ಅಭಿಮಾನಿಯೊಬ್ಬರು ಕಿಚ್ಚನಿಗೆ ಹೇಳಿದ್ದಾರೆ.

ಸಿನಿಮಾ ಮಾಡಬೇಡಿ
''ಬಡವರಿಗೆ ಸಹಾಯ ಮಾಡಿ ಅಂತ ಹೇಳುತ್ತೀರಿ. ನೀವು ಕೋಟ್ಯಾಧಿಪತಿಗಳು ಅದನ್ನು ಮಾಡಿ. ಸರ್ಕಾರ ಮಾಡಲಿ. ನಾವು ಬಡವರು, ಅನೇಕ ಜಿಲ್ಲೆಗಳಿಂದ ನಿಮಗಾಗಿ ಬಂದಿರುತ್ತೇವೆ. ಈ ರೀತಿ ಹುಟ್ಟುಹಬ್ಬ ಮಾಡಿಕೊಳ್ಳುವುದಿಲ್ಲ ಅಂದರೆ ಸಿನಿಮಾ ಮಾಡಬೇಡಿ.'' ಎಂದು ಓರ್ವ ಅಭಿಮಾನಿ ಗರಂ ಆಗಿದ್ದಾರೆ.

ನಿಮ್ಮ ಸಿನಿಮಾ ನೋಡುವುದಿಲ್ಲ.
''ನಾವು ಇಂದಿನಿಂದ ನಿಮ್ಮನ್ನು ಇಷ್ಟಪಡುವುದಿಲ್ಲ. ನಾವು ಇನ್ನು ಮುಂದೆ ನಿಮ್ಮ ಸಿನಿಮಾ ನೋಡುವುದಿಲ್ಲ. ನೀವು ಸಿನಿಮಾ ಮಾಡಬೇಡಿ.'' ಎಂದು ಹೇಳಿ ಸುದೀಪ್ ವಿರುದ್ಧ ಈ ಅಭಿಮಾನಿ ಉರಿದು ಬಿದ್ದಿದ್ದಾರೆ.

ಕಾರಣ ಇಷ್ಟೆ
ಸುದೀಪ್ ವಿರುದ್ಧ ಈ ಅಭಿಮಾನಿ ಕೋಪಕ್ಕೆ ಕಾರಣ ಆಗಿರುವುದು ಹುಟ್ಟುಹಬ್ಬದಂದು ಸುದೀಪ್ ಅಭಿಮಾನಿಗಳಿಂದ ದೂರ ಇರುವುದು. ದೂರದ ಊರಿನಿಂದ ಕಷ್ಟಪಟ್ಟು ಬಂದರು ಸುದೀಪ್ ಸಿಗಲಿಲ್ಲ ಎಂದು ಅಭಿಮಾನಿ ಬೇಸರವಾಗಿದ್ದಾರೆ.

ಅರ್ಥ ಮಾಡಿಕೊಳ್ಳಿ
ಸುದೀಪ್ ಒಂದು ಒಳ್ಳೆಯ ಕಾರಣದಿಂದ ಹುಟ್ಟುಹಬ್ಬವನ್ನು ನಿರಾಕರಿಸಿದ್ದಾರೆ. ಹುಟ್ಟುಹಬ್ಬಕ್ಕೆ ಮಾಡುವ ದುಂದುವೆಚ್ಚವನ್ನು ಒಳ್ಳೆಯ ಕೆಲಸಕ್ಕೆ ಬಳಸಿ ಅಂತ ಹೇಳಿದ್ದಾರೆ. ಸುದೀಪ್ ಅವರ ಈ ಒಳ್ಳೆಯ ನಿರ್ಧಾರವನ್ನು ಅಭಿಮಾನಿಗಳು ಕೂಡ ಅರ್ಥ ಮಾಡಿಕೊಳ್ಳಬೇಕು.


Click it and Unblock the Notifications











