23 ವರ್ಷದ ಸಂಭ್ರಮ: ದರ್ಶನ್ ಮತ್ತೆ ಅಂತಹ ಕಥೆ ಮಾಡಬೇಕೆನ್ನುತ್ತಿದೆ ಭಕ್ತಗಣ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಬೆಳ್ಳಿತೆರೆ ಮೇಲೆ ಅಧಿಕೃತವಾಗಿ ಪ್ರವೇಶ ಮಾಡಿ ಇಂದಿಗೆ 23 ವರ್ಷ ಕಳೆದಿದೆ. ಲೈಟ್ ಬಾಯ್ ಆಗಿದ್ದ ಡಿ ಬಾಸ್ ಚೊಚ್ಚಲ ಬಾರಿಗೆ ಸ್ಯಾಂಡಲ್ ವುಡ್ ಚಿತ್ರದಲ್ಲಿ ಬಣ್ಣ ಹಚ್ಚಿದ ದಿನ ಇದು.
Recommended Video
ಎಸ್ ನಾರಾಯಣ್ ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ ಪೋಷಕ ನಟನ ಪಾತ್ರದಲ್ಲಿ ಅಭಿನಯಿಸುವ ಮೂಲಕ ಇಂಡಸ್ಟ್ರಿಗೆ ಬಂದ ದರ್ಶನ್, ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
'ಮೆಜೆಸ್ಟಿಕ್' ಚಿತ್ರದಿಂದ ಕೊನೆಯದಾಗಿ ತೆರೆಕಂಡ ಕುರುಕ್ಷೇತ್ರ ಸಿನಿಮಾದವರೆಗೂ ಎಲ್ಲ ರೀತಿಯ ಪಾತ್ರಗಳಲ್ಲಿ ದರ್ಶನ್ ಅವರನ್ನು ಅಭಿಮಾನಿಗಳು ನೋಡಿ ಖುಷಿಪಟ್ಟಿದ್ದಾರೆ. ಆದರೆ, ಈಗಲೂ ಡಿ ಬಾಸ್ ಭಕ್ತಗಣವನ್ನು ಆ ಎರಡು ಚಿತ್ರಗಳು ಬಹಳ ಕಾಡುತ್ತಿದೆ. ಅದರ ಜೊತೆಗೆ ಸದ್ಯದ ಟ್ರೆಂಡ್ ಗೆ ಹೋಲುವಂತೆ ಹೊಸ ರೀತಿಯ ಕಥೆಯನ್ನು ದರ್ಶನ್ ಮಾಡಬೇಕೆಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಯಾವುದು ಆ ಚಿತ್ರಗಳು? ಮುಂದೆ ಓದಿ...

ನಮ್ಮ ಪ್ರೀತಿಯ ರಾಮು
ಮಾಸ್ ಪ್ರೇಕ್ಷಕರ ಪಾಲಿಗೆ ಮಹಾರಾಜ ಎನಿಸಿಕೊಂಡಿರುವ ದರ್ಶನ್, 2003ರಲ್ಲಿ 'ನಮ್ಮ ಪ್ರೀತಿಯ ರಾಮು' ಎಂಬ ಚಿತ್ರದಲ್ಲಿ ನಟಿಸಿದರು. ಮೂಲತಃ ತಮಿಳಿನ ರೀಮೇಕ್ ಆಗಿದ್ದರೂ ಕನ್ನಡದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ದರ್ಶನ್ ನಟನೆಗೆ ಪ್ರಶಂಸೆಗಳ ಸುರಿಮಳೆ ಸಿಕ್ಕಿತಾದರೂ ಕಮರ್ಷಿಯಲ್ ಆಗಿ ಈ ಸಿನಿಮಾ ನಿರ್ಮಾಪಕನಿಗೆ ಖುಷಿ ಕೊಡಲಿಲ್ಲ. ಅನ್ನದಾತನ ಹಿತ ಬಯಸುವ ದರ್ಶನ್ ಮತ್ತೆ ಜೀವನದಲ್ಲಿ ಇಂತಹ ಸಿನಿಮಾ ಮಾಡದಿರಲು ನಿರ್ಧರಿಸಿದರು. ಆದರೆ, ಅಭಿಮಾನಿಗಳು ದರ್ಶನ್ ಅವರನ್ನು ಮತ್ತೆ ಪ್ರಯೋಗಾತ್ಮಕ ಅಥವಾ ಚಾಲೆಂಜಿಂಗ್ ಪಾತ್ರದಲ್ಲಿ ನೋಡಲು ಬಯಸುತ್ತಿದ್ದಾರೆ.

ಮತ್ತೆ ನವಗ್ರಹ ಮಾಡಿ ಬಾಸ್
ದರ್ಶನ್ ವೃತ್ತಿ ಜೀವನದ ಮತ್ತೊಂದು ಹಿಟ್ ಸಿನಿಮಾ ನವಗ್ರಹ. ದಿನಕರ್ ತೂಗುದೀಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಚಿತ್ರ. ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳಿಗೆ ಬ್ರೇಕ್ ಕೊಟ್ಟ ಸಿನಿಮಾ. ಈ ಚಿತ್ರದಲ್ಲಿ ದರ್ಶನ್ ನೆಗಿಟಿವ್ ಶೇಡ್ನಲ್ಲಿ ನಟಿಸಿದ್ದರು. ಡಿ ಬಾಸ್ ಅವರನ್ನು ನವಗ್ರಹ ರೀತಿ ನೆಗಿಟಿವ್ ಶೇಡ್ನಲ್ಲಿ ನೋಡಲು ಈಗಲೂ ಅಭಿಮಾನಿಗಳು ಕಾಯ್ತಿದ್ದಾರೆ. ನವಗ್ರಹ 2 ಬರುತ್ತೆ ಅನ್ನೋ ನಿರೀಕ್ಷೆಯಲ್ಲೇ 12 ವರ್ಷ ಕಳೆದು ಹೋಗಿದೆ. ಬಹುಶಃ ದಿನಕರ್ ಮತ್ತು ದರ್ಶನ್ ಮತ್ತೆ ಅಂತಹದೊಂದು ಕಥೆಯ ಮೂಲಕ ಅಭಿಮಾನಿಗಳನ್ನು ರಂಜಿಸುವ ಚಿಂತನೆ ಮಾಡಬಹುದು.

ಕಾಮಿಡಿ ಟೈಂ ಚೆನ್ನಾಗಿದೆ
ಮಾಸ್ ಕಿಂಗ್ ದರ್ಶನ್ ಅವರಿಗೆ ಕಾಮಿಡಿ ಟೈಂ ತುಂಬಾ ಚೆನ್ನಾಗಿದೆ ಎಂದು ಅಭಿಪ್ರಾಯ ಇಂಡಸ್ಟ್ರಿಯಲ್ಲಿದೆ. ಅನಾಥರು ಚಿತ್ರದಲ್ಲಿ ರಾಧಿಕಾ ಹಾಗೂ ದರ್ಶನ್ ಕಾಂಬಿನೇಷನ್, ದತ್ತ ಚಿತ್ರದಲ್ಲಿ ಕೋಮಲ್ ಮತ್ತು ದರ್ಶನ್ ಜುಗಲ್ ಬಂಧಿ...ಹೀಗೆ ಕಾಮಿಡಿ ಟೈಂಗೆ ತಕ್ಕಂತೆ ಒಂದೊಳ್ಳೆ ಸಿನಿಮಾ ಬರಲಿ ಎಂದು ಬಯಸುವವರು ಇದ್ದಾರೆ.

ಪೊಲಿಟಿಕಲ್ ಥ್ರಿಲ್ಲರ್
2002ರಲ್ಲಿ ಬಿಡುಗಡೆಯಾಗಿದ್ದ ಧ್ರುವ ಚಿತ್ರದಲ್ಲಿ ದರ್ಶನ್ ವಿದ್ಯಾರ್ಥಿ ನಾಯಕ ಹಾಗೂ ರಾಜಕೀಯ ನಾಯಕನ ಪಾತ್ರ ಮಾಡಿದ್ದರು. ಅದಾದ ಬಳಿಕ ಮತ್ತೆ ಅಂತಹ ಪಾತ್ರ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ತೆಲುಗು ಹಾಗೂ ತಮಿಳಿನಲ್ಲಿ ಹೆಚ್ಚು ಪೊಲಿಟಿಕಲ್ ಡ್ರಾಮಾ ಬರ್ತಿದೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಇಂತಹ ಪ್ರಯತ್ನ ಕಮ್ಮಿ ಆಗಿದೆ. ದರ್ಶನ್ ಅವರಿಗೆ ಇಂತಹ ಸ್ಕ್ರಿಪ್ಟ್ ಸೂಕ್ತವಾಗುತ್ತೆ. ಡಿ ಬಾಸ್ ಪೊಲಿಟಿಕಲ್ ಥ್ರಿಲ್ಲರ್ ಕಥೆ ಆಯ್ಕೆ ಮಾಡಿಕೊಳ್ಳಲಿ ಎಂಬ ಅಭಿಪ್ರಾಯವೂ ಅಭಿಮಾನಿ ವಲಯದಲ್ಲಿದೆ.


Click it and Unblock the Notifications











