ನಾಳೆ ದರ್ಶನ್ ಹುಟ್ಟುಹಬ್ಬ ; ಅಭಿಮಾನವನ್ನು ಅರ್ಥಪೂರ್ಣಗೊಳಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ..!
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು.
ಇನ್ನೂ ಅಭಿಮಾನ ಅಂದರೆ ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು ಅಷ್ಟೇ ಅಲ್ಲ. ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ಮಾಡುವುದು ಕೂಡ ಅಭಿಮಾನವೇ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಇಂಥಹದ್ದೇ ಒಂದು ಅಭಿಮಾನದ ಪ್ರದರ್ಶನವನ್ನ ಮಾಡಿದ್ದಾರೆ. ದರ್ಶನ್ ಹುಟ್ಟುಹಬ್ಬವನ್ನ ಅರ್ಥಪೂರ್ಣವನ್ನಾಗಿ ಆಚರಿಸುತ್ತಿದ್ದಾರೆ.

ಹೌದು, ಪ್ರತಿ ವರ್ಷದಂತೆ ಈ ವರ್ಷ ಕೂಡ ದರ್ಶನ್ ಅವರ ಅಭಿಮಾನಿಗಳನ್ನ ಒಗ್ಗೂಡಿಸಿ, ಸಾಮಾಜಿಕ ಕಾರ್ಯಗಳು, ಜನಪರ ಕೆಲಸಗಳನ್ನು ಮಾಡುತ್ತಲೇ ಬಂದಿರುವ ಡಿ ಕಂಪನಿ ಈ ವರ್ಷ ಕೂಡ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬಕ್ಕೆ ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಕರ್ನಾಟಕದೆಲ್ಲೆಡೆ ಹರಡಿರುವ ಡಿ ಕಂಪನಿ ಮಾಯಕೊಂಡದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬಂದ ರೋಗಿಗಳಿಗೆ ಇಂದು ಅನ್ನ ಸಂತರ್ಪಣೆಯನ್ನ ಮಾಡಿದೆ. ಇನ್ನೂ ಶಿರಾದಲ್ಲಿರುವ ದರ್ಶನ್ ಅವರ ಅಭಿಮಾನಿ ಬಳಗ ಮುದ್ದೇನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಪೆನ್ ಹಾಗೂ ನೋಟ್ ಬುಕ್ ಗಳನ್ನ ವಿತರಿಸಿದೆ.

ಇನ್ನೂ ನಾಳೆ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಅಂಧ ಮಕ್ಕಳ ಪಾಠಶಾಲೆಯಲ್ಲಿ ಅಭಿಮಾನಿಗಳು ದರ್ಶನ್ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕೇಕ್ ಕತ್ತರಿಸಿ, ದಿನಸಿ ಪದಾರ್ಥಗಳನ್ನ ಕೊಡಲು ಸಕಲ ತಯಾರಿಯನ್ನೂ ಮಾಡಿಕೊಳ್ತಿದ್ದಾರೆ. ತಿಪಟೂರು ರೇಲ್ವೆ ಸ್ಟೇಷನ್ ಹತ್ತಿರ ಇರುವ ಸರಕಾರಿ ಶಾಲೆಯ ಬಳಿ ಕೂಡ ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳು ಬಂದು ನಾಳೆ ಸೇರಲಿದ್ದಾರೆ. ಇದಿಷ್ಟೇ ಅಲ್ಲ ರಾಜ್ಯದ ಇನ್ನೂ ಅನೇಕ ಕಡೆ ನಾನಾ ಕಾರ್ಯಕ್ರಮಗಳನ್ನ ದರ್ಶನ್ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದೆ. ಪ್ರತಿ ವರ್ಷದಂತೆ ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳನ್ನ ಕೈಗೊಂಡಿದೆ.

ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದ ದರ್ಶನ್
ಪ್ರತಿ ವರ್ಷದಂತೆ ಈ ವರ್ಷ ಕೂಡ ದರ್ಶನ್ ತಿಂಗಳು ಮುಂಚೆಯೇ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಈ ವರ್ಷವೂ ಅದೇ ಹಣದಲ್ಲಿ ಅಕ್ಕಿ, ಬೇಳೆ, ಸಕ್ಕರೆ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಅವಶ್ಯಕತೆ ಇರುವ ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ವರ್ತಿಸಿ. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂಡಗಳನ್ನು ಬೀಳಿಸುವುದು ಅವರ ಸ್ವತ್ತುಗಳಿಗೆ ಹಾನಿ ಮಾಡುವಂಥಹಾ ವರ್ತನೆಗಳು ಬೇಡ. ನನ್ನ ಮೇಲೆ ಇಷ್ಟೆಲ್ಲ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀರಿ ಎಂದು ನಂಬಿದ್ದೇನೆ. ಹಾಗೂ ಸಂಘದ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ' ಎಂದು ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು.

ಒಟ್ಟಿನಲ್ಲಿ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ದರ್ಶನ್ ಅವರ ಅಭಿಮಾನಿಗಳು ಪ್ರತಿ ವರ್ಷ ಮಾಡ್ತಾನೇ ಬಂದಿದ್ದಾರೆ. ಈ ವರ್ಷ ಕೂಡ ಸಮಾಜಮುಖಿ ಕೆಲಸಗಳನ್ನ ಮುಂದುವರೆಸಿದ್ದಾರೆ.


Click it and Unblock the Notifications











