ಶಿವಮೊಗ್ಗ ಜೈಲಿನಿಂದ ಹೊರಬಂದು ಅಭಿಮಾನಿಗಳಿಗೆ ದರ್ಶನ ನೀಡಿದ ನಟ ವಿಜಯ್
ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಸದ್ಯ ಶಿವಮೊಗ್ಗ ಜೈಲಿನಲ್ಲಿ ಇದ್ದಾರೆ. ಕಳೆದ ಒಂದು ತಿಂಗಳಿಂದ ಶಿವಮೊಗ್ಗ ಜೈಲು ಸೇರಿದ್ದಾರೆ. ಅಂದ್ಹಾಗೆ ವಿಜಯ್ ತಮಿಳುನಾಡಿನಿಂದ ಶಿವಮೊಗ್ಗ ಜೈಲುಗೆ ಬಂದಿದ್ದು ಚಿತ್ರೀಕರಣಕ್ಕಾಗಿ. ಶಿವಮೊಗ್ಗ ಹಳೆ ಜೈಲಿನಲ್ಲಿ ದಳಪತಿ 64 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಇಡೀ ಚಿತ್ರತಂಡ ಶಿವಮೊಗ್ಗ ಜೈಲಿನಲ್ಲಿ ಬೀಡುಬಿಟ್ಟಿದೆ.
ಕಳೆದ ಒಂದು ವಾರದಿಂದ ಶಿವಮೊಗ್ಗ ಜೈಲಿನಲ್ಲಿ ಇರುವ ವಿಜಯ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಶಿವಮೊಗ್ಗದ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡುತ್ತಿದ್ದರೆ ಗೇಟ್ ಮುಂದೆ ಅಭಿಮಾನಿಗಳು ಕಾಯುತ್ತ ನಿಂತಿರುತ್ತಾರೆ. ಇನ್ನು ವಿಜಯ್ ತಂಗಿರುವ ಹೋಟೆಲ್ ಮುಂಬಾಗದಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿ ವಿಜಯ್ ತಂಗಿರುವ ಹೋಟೆಲ್ ಗೆ ಹೋಗುವಾಗ ಮತ್ತು ಚಿತ್ರೀಕರಣಕ್ಕೆಂದು ಜೈಲಿಗೆ ಹೋಗುವಾಗ ಅಭಿಮಾನಿಗಳು ವಿಜಯ್ ಕಾರನ್ನು ಮುತ್ತಿಕೊಳ್ಳುತ್ತಿದ್ದಾರೆ.
ಕಳೆದ ಒಂದು ವಾರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ವಿಜಯ್ ಕೊನೆಗೂ ದರ್ಶನ್ ನೀಡಿದ್ದಾರೆ. ನಿನ್ನೆ ಹೋಟಲ್ ಗೆ ಆಗಮಿಸುವಾಗ ಕಾರಿನಿಂದ ಇಳಿದು ಹೊರಬಂದು ವಿಜಯ್ ಅಭಿಮಾನಿಗಳತ್ತ ಕೈ ಬೀಸಿ ಅಭಿಮಾನಿಗಳನ್ನು ಸಂತಸ ಪಡಿಸಿದ್ದಾರೆ. ಹೋಟೆಲ್ ಮುಂಬಾಗದಲ್ಲಿ ಅಭಿಮಾನಿಗಳ ದಂಡೆ ನೆರದಿತ್ತು.

ವಿಜಯ್ ನೋಡಲು ಅಭಿಮಾನಿಗಳು ದೂರದ ಊರುಗಳಿಂದ ಬಂದಿದ್ದರು. ವಿಜಯ್ ನೋಡಲು ಬಿಡುತ್ತಿಲ್ಲ ಎಂದು ಅಭಿಮಾನಿಗಳು ಪೊಲೀಸರ ಜೊತೆ ವಾಗ್ವಾದ ಕೂಡ ನಡೆಸಿದ್ದಾರೆ. ಕೊನೆಗೂ ವಿಜಯ್ ಅಭಿಮಾನಿಗಳ ಮುಂದೆ ಕಾಣಿಸಿಕೊಂಡು ಅಭಿಮಾನಿಗಳ ಮುಖದಲ್ಲಿ ಸಂತಸಮೂಡಿದ್ದಾರೆ.
ವಿಜಯ್ ಜೊತೆ ಖ್ಯಾತ ನಟ ವಿಜಯ್ ಸೇತುಪತಿ ಕೂಡ ಶಿವಮೊಗ್ಗ ಜೈಲಿನಲ್ಲಿ ಇದ್ದಾರೆ. ಇಬ್ಬರು ಸ್ಟಾರ್ ನಟರು ಶಿವಮೊಗ್ಗ ಜೈಲಿನಲ್ಲಿ ಬೀಡುಬಿಟ್ಟಿದ್ದಾರೆ. ಇನ್ನು ಒಂದು ತಿಂಗಳುಗಳ ಕಾಲ ಚಿತ್ರೀಕರಣ ನಡೆಯಲಿದ್ದು ವಿಜಯ್ ಮತ್ತು ತಂಡ ಶಿವಮೊಗ್ಗದಲ್ಲಿ ಇರಲಿದ್ದಾರೆ. ದಳಪತಿ 64 ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ.


Click it and Unblock the Notifications











