ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಂದ ಫಿಲ್ಮ್ ಚೇಂಬರ್ ಮುತ್ತಿಗೆ ಯತ್ನ
ದಿವಂಗತ ನಟ ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೀತಿದೆ. ಇತ್ತೀಚೆಗೆ ವಿಷ್ಣು ಅಭಿಮಾನಿಗಳು ಪ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಿ ಹೋರಾಟ ನಡೆಸಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿ ಜಾಗವನ್ನು ಬಿಟ್ಟುಕೊಡಬೇಕು ಎಂದು ಆಗ್ರಹಿಸಿದ್ದರು.
ವಿಷ್ಣು ಪೂಣ್ಯಭೂಮಿ ವಿಚಾರವಾಗಿ ಇದೀಗ ಅಭಿಮಾನಿಗಳು ಫಿಲ್ಮ್ ಚೇಂಬರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಫಿಲ್ಮ್ ಚೇಂಬರ್ ಯಾಕೆ ಇನ್ನು ಮೌನವಾಗಿದೆ ಎಂದು ಪ್ರಶ್ನಿಸಿದ್ದಾರೆ. ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಧ್ವನಿಯೆತ್ತದ ಫಿಲ್ಮ್ ಚೇಂಬರ್ ವಿರುದ್ದ ಆಕ್ರೋಶಗೊಂಡಿದ್ದರು. ಫಿಲ್ಮ್ ಚೇಂಬರ್ ವಿರುದ್ಧ ಘೋಷಣೆ ಕೂಗಿದರು.

ವಿಷ್ಣುವರ್ಧನ್ ಅಭಿಮಾನಿಗಳಾದ ಕ್ರಾಂತಿ ರಾಜು, ನಟರಾಜ್ ಸೇರಿದಂತೆ ಹಲವು ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಫಿಲಂ ಚೇಂಬರ್ ನಡೆಗೆ ಬೇಸರ ವ್ಯಕ್ತಪಡಿಸಿದರು. ಕಲಾವಿದರು ಸೇರಿದಂತೆ ಸಾವಿರಾರು ವಿಷ್ಣು ಪುಣ್ಯಭೂಮಿ ಬಗ್ಗೆ ಧ್ವನಿ ಎತ್ತಿದ್ದಾರೆ. ಆದರೆ ಫಿಲಂ ಚೇಂಬರ್ ವತಿಯಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಈ ಹಿಂದೆ ಭಾಮಾ ಹರೀಶ್, ಜಯಮಾಲ ಅಧ್ಯಕ್ಷರಾಗಿದ್ದಾಗಿ ಹೋರಾಟಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಈಗಿನ ಅಧ್ಯಕ್ಷ ಎನ್. ಎಂ ಸುರೇಶ್ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.
ಒಂದು ವಾರದೊಳಗೆ ವಿಷ್ಣು ಪುಣ್ಯಭೂಮಿಕಬಗ್ಗೆ ಫಿಲ್ಮ್ ಚೇಂಬರ್ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಫಿಲಂ ಚೇಂಬರ್ ಕಚೇರಿಗೆ ಬೀಗ ಜಡಿತೀವಿ ಎಂದು ಎಚ್ಚರಿಸಿದ್ದಾರೆ. ಕೊನೆಗೆ ವಿಷ್ಣು ಅಭಿಮಾನಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ ಸುರೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

"ವಿಷ್ಣು ಅಭಿಮಾನಿಗಳು ಮೆಮೋರ್ಯಾಂಡಮ್ ಕೊಟ್ಟಿದ್ದಾರೆ. ನಮ್ಮ ಮನವಿ ಅಂದ್ರೆ ವಿಷ್ಣು ವರ್ಧನ್ ಟ್ರಸ್ಟ್ ವಿಚಾರ ಬಂದಾಗ ಮನೆಯವರ ನಿರ್ಧಾರದ ಮೇರೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಈಗ ಸರ್ಕಾರ ಮೈಸೂರಿನಲ್ಲಿ ಜಾಗ ಕೊಟ್ಟಿದೆ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಡಬೇಕು ಅಂತ ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಸ್ಪಂದಿಸುವ ಕೆಲಸವಾಗುತ್ತದೆ. ನಾಳೆ ಸಭೆ ನಡೆಸುತ್ತೇವೆ. ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಸರ್ಕಾರ ಪ್ರತಿಕ್ರಿಯೆ ಏನು ಬರುತ್ತದೆ ಎಂದು ಕಾಯಬೇಕು. ನಮ್ಮ ಬಳಿ ಮಾತನಾಡದೇ ಫಿಲ್ಮ್ ಚೇಂಬರ್ ಸ್ಪಂದಿಸ್ತಿಲ್ಲ ಎಂದು ದೂಷಿಸುವುದು ತಪ್ಪು. ಫಿಲ್ಮ್ ಛೇಂಬರ್ಗೆ ಅದರದ್ದೇ ಆದ ಗೌರವ, ಘನತೆ ಇದೆ. ವಿಷ್ಣು ವರ್ಧನ್ ನಮ್ಮ ಆಸ್ಥಿ" ಎಂದಿದ್ದಾರೆ.
ನಟ ವಿಷ್ಣುವರ್ಧನ್ ಅಂತ್ಯಕ್ರಿಯೆ ಅಭಿಮಾನ್ ಸ್ಟುಡಿಯೋದಲ್ಲಿ ನಡೆದಿತ್ತು. ಆದರೆ ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡುವ ಬಗ್ಗೆ ವಿವಾದ ಶುರುವಾಯಿತು. ಒಂದು ದಶಕ ಕಳೆದರೂ ಈ ವಿವಾದ ಬಗೆಹರಿಯಲೇ ಇಲ್ಲ. ಅಂಬರೀಶ್, ವಿಷ್ಣು ಕುಟುಂಬ ಸೇರಿದಂತೆ ಹಲವರು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಕೊನೆಗೆ ವಿಷ್ಣು ಕುಟುಂಬ ಸದಸ್ಯರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದರು. ಅರಮನೆ ನಗರಿಯಲ್ಲಿ ಸ್ಮಾರಕ ನಿರ್ಮಾಣವಾಗಿ ಲೋಕಾರ್ಪಣೆ ಆಗಿದೆ.
ಅಭಿಮಾನಿಗಳು ಮಾತ್ರ ಸಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂದು ಆಗ್ರಹಿಸುತ್ತಾ ಬರುತ್ತಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರಕಕ್ಕೆ ಅಭಿಮಾನಿಗಳು ಹೋಗಲು ನಿರ್ಬಂಧ ಹೇರಲಾಗುತ್ತಿದೆ. ದಾದಾ ಹುಟ್ಟುಹಬ್ಬ, ಪುಣ್ಯಸ್ಮರಣೆ ಸಂದರ್ಭಗಳಲ್ಲಿ ಅಭಿಮಾನಿಗಳು ಅಲ್ಲಿ ಸೇರಲು ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆ ಜಾಗವನ್ನು ಬಿಡಿಸಿ ಕೊಡುವಂತೆ ಕೇಳುತ್ತಾ ಬರುತ್ತಿದ್ದಾರೆ. ಬೇಕಿದ್ದರೆ ಪುಣ್ಯಭೂಮಿಯ ಜಾಗಕ್ಕೆ ನಾವೇ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಈ ಸಂಬಂಧ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚೆಗೆ ಅಭಿಮಾನಿಗಳು ವಿಷ್ಣು ಪುಣ್ಯಭೂಮಿಗಾಗಿ ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ನಟ ಸುದೀಪ್, ಧನಂಜಯ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದರು.


Click it and Unblock the Notifications











