ಮಂಡ್ಯದ ಗಂಡಿಗೆ ಮದ್ದೂರಿನಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು
ಸಿನಿಮಾ ನಟರಿಗೆ ಗುಡಿ ಕಟ್ಟುವ ಸಂಪ್ರದಾಯ ನೆರೆಯ ತಮಿಳುನಾಡು ಹಾಗೂ ಆಂಧ್ರಗಳಲ್ಲಿ ಹೆಚ್ಚು. ಕರ್ನಾಟಕದಲ್ಲಿ ನಟರನ್ನು ಎಷ್ಟೇ ಅಭಿಮಾನಿಸಿದರೂ ಗುಡಿ ಕಟ್ಟಿ ಪೂಜಿಸುವ ಪರಿಪಾಠ ಕಡಿಮೆ. ಆದರೆ ಇದೀಗ ಖ್ಯಾತ ನಟರೊಬ್ಬರಿಗೆ ಮಂಡ್ಯದಲ್ಲಿ ಗುಡಿಯೊಂದನ್ನು ಕಟ್ಟಲಾಗಿದೆ.
Recommended Video
ಮಂಡ್ಯದ ಗಂಡು ಎಂದೇ ಖ್ಯಾತವಾಗಿರುವ ಖ್ಯಾತ ನಟ, ಮಾಜಿ ಸಂಸದ ದಿವಂಗತ ಅಂಬರೀಷ್ ಅವರ ಮೂರ್ತಿ ಸ್ಥಾಪಿಸಿ ಅವರಿಗಾಗಿ ಗುಡಿ ಕಟ್ಟಿದ್ದಾರೆ ಮಂಡ್ಯದ ಅಂಬರೀಶ್ ಅಭಿಮಾನಿಗಳು.
ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ತಮ್ಮ ನೆಚ್ಚಿನ ನಟನ ನೆನಪಿಗಾಗಿ ಅಭಿಮಾನಿಗಳು ಗುಡಿಯೊಂದನ್ನು ನಿರ್ಮಿಸಿದ್ದಾರೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.

8 ಲಕ್ಷ ವೆಚ್ಚದಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು
ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನು ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ಅಭಿಮಾನಿಗಳು ಹಾಕಿದ್ದಾರೆ.

ನವೆಂಬರ್ 24 ರಂದು ಅನಾವರಣ
ಪುತ್ಥಳಿ ಹಾಗೂ ಗುಡಿ ಕಾರ್ಯ ಪೂರ್ಣಗೊಂಡಿದ್ದು, ಅಂಬರೀಶ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ ನವೆಂಬರ್ 24ಕ್ಕೆ ನಡೆಯಲಿದೆ. ಅದೇ ದಿನ ಪುತ್ಥಳಿಯನ್ನು, ಅಂಬಿ ಅವರ ಪತ್ನಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ.

ಅಂಬಿ ಅಭಿಮಾನಿಗಳೇ ತುಂಬಿರುವ ಊರು
ಅಂಬರೀಶ್ ಇದ್ದಾಗ ಅವರ ಹುಟ್ಟುಹಬ್ಬವನ್ನು ತಮ್ಮದೇ ಗ್ರಾಮದ ಹಬ್ಬ ಎಂಬಂತೆ ಅಭಿಮಾನಿಗಳು ಅದ್ದೂರಿಯಿಂದ ಆಚರಣೆ ಮಾಡುತ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನು ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

2018 ನವೆಂಬರ್ 24 ರಂದು ನಿಧನರಾಗಿದ್ದ ಅಂಬರೀಶ್
ಅಂಬರೀಶ್ ಅವರು 2018 ರ ನವೆಂಬರ್ 24 ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನಹೊಂದಿದರು. ಅವರ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ದು ಜನಗಳ ದರ್ಶನಕ್ಕೆ ಇಡಲಾಗಿತ್ತು. ಅಂಬರೀಶ್ ಪುತ್ರ ಅಭಿಷೇಕ್ ಈಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪತ್ನಿ ಸುಮಲತಾ ಸಂಸದೆ ಆಗಿದ್ದಾರೆ.


Click it and Unblock the Notifications











