ಧರ್ಮಸ್ಥಳದಲ್ಲಿ ಪುನೀತ್ ಫೋಟೋ ಹಿಡಿದು ರಾತ್ರಿ ಇಡೀ ಜಾಗರಣೆ ಮಾಡಿದ ಅಭಿಮಾನಿ!
ಪುನೀತ್ ರಾಜ್ಕುಮಾರ್ ಅಗಲಿಕೆಯನ್ನು ಕನ್ನಡ ಸಿನಿ ಪ್ರೇಮಿಗಳಿಗೆ, ಅಪ್ಪು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ಪುನೀತ್ ನೆನಪು ಜೀವಂತವಾಗಿಡುವ ಒಂದಲ್ಲ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ.
ಅಪ್ಪುವನ್ನು ಬಹುವಾಗಿ ಹಚ್ಚಿಕೊಂಡಿದ್ದ ಅಭಿಮಾನಿಗಳು, ಶಬರಿಮಲೆಗೆ ಅಪ್ಪು ಚಿತ್ರ ತೆಗೆದುಕೊಂಡು ಹೋಗು ದೇವರ ದರ್ಶನ ಮಾಡಿಸಿದ್ದರು. ಜಾತ್ರೆಗಳಲ್ಲಿ ಅಪ್ಪುವಿನ ಚಿತ್ರಗಳು ರಾರಾಜಿಸಿದ್ದವು. ಇದೀಗ ನಿನ್ನೆ ನಡೆದ ಶಿವರಾತ್ರಿ ಜಾಗರಣೆಯಲ್ಲಿ ಅಪ್ಪುವಿನ ಭಾವಚಿತ್ರ ಹಿಡಿದು ಅಭಿಮಾನಿಗಳು ರಾತ್ರಿಪೂರ್ಣ ಜಾಗರಣೆ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಿನ್ನೆ ನಡೆದ ಶಿವರಾತ್ರಿ ಭಜನೆ, ಜಾಗರಣೆಯಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಚಿತ್ರ ಹಿಡಿದು ಭಾಗವಹಿಸಿದ್ದರು. ಇಡೀ ರಾತ್ರಿ ಅಪ್ಪು ಚಿತ್ರವನ್ನಿಟ್ಟುಕೊಂಡು ಭಜನೆ ಮಾಡಿದರು.

ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಶಿವರಾತ್ರಿ ಸಂಭ್ರಮ ಸಂಪನ್ನ ವಾಗಿದೆ. ಬುಧವಾರ ಮುಂಜಾನೆಯವರೆಗೂ ಕ್ಷೇತ್ರದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದಿದ್ದು,ಲಕ್ಷಾಂತರ ಮಂದಿ ಭಕ್ತರು ಶಿವರಾತ್ರಿಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ..
ಭಕ್ತರ ಪಾಲಿಗೆ ಕಲಿಯುಗ ಕೈಲಾಸ, ದಕ್ಷಿಣ ಭಾರತದ ಪುಣ್ಯ ಪ್ರಸಿದ್ಧ ತೀರ್ಥ ಕ್ಷೇತ್ರ, ಚತುರ್ವಿಧ ದಾನಗಳ ಆಗರ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಮಹಾಶಿವರಾತ್ರಿಯ ಸಂಭ್ರಮ ಸಂಪನ್ನವಾಗಿದೆ. ಲಕ್ಷಾಂತರ ಮಂದಿ ಭಕ್ತರು ಧರ್ಮಸ್ಥಳ ದಲ್ಲಿ ಮಹಾ ಶಿವರಾತ್ರಿಯ ಜಾಗರಣೆ ಮಾಡಿ ಪಾವನರಾಗಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು, ಗುಡಿ ಬಿಟ್ಟು ಹೊರಗೆ ಬಂದೂ ರಥಾರೂಢನಾದ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗಿದ್ದಾರೆ.
ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಶಿವರಾತ್ರಿ ಯ ಸಂಧರ್ಭದಲ್ಲಿ ಸಾಕ್ಷಿಭೂತರಾಗಿದ್ದಾರೆ. ಮಂಗಳವಾರ ಮುಂಜಾನೆ ಆರಂಭವಾದ ಮಂಜುನಾಥ ಸ್ವಾಮಿಯ ದರ್ಶನ ತಡ ರಾತ್ರಿಯವರೆಗೂ ನಡೆದಿದ್ದು,ಶಿವರಾತ್ರಿ ಯ ಪುಣ್ಯ ದಿನದಂದು ಸಾಗರೋಪಾದಿಯಲ್ಲಿ ಭಕ್ತರು ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ದ ಮಂಜುನಾಥ ಸ್ವಾಮಿಯ ಶಿವರಾತ್ರಿ ಉತ್ಸವದ ಪ್ರಮುಖ ಆಕರ್ಷಣೆ ಪಾದಯಾತ್ರೆಯ ಮೂಲಕವೂ ಲಕ್ಷಕ್ಕೂ ಅಧಿಕ ಜನ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ರಾಜ್ಯದ ಬೆಂಗಳೂರು, ಯಾದಗಿರಿ, ಬಳ್ಳಾರಿ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿ ದರ್ಶನ ಮಾಡಿದ್ದಾರೆ.
ಭಕ್ತರ ಜೊತೆಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡಾ ಧರ್ಮಸ್ಥಳ ಕ್ಕೆ ಹಾಸನದಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದು,ಬುಧವಾರ ಬೆಳಗ್ಗೆ ಧರ್ಮಸ್ಥಳ ಕ್ಕೆ ತಲುಪಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯ ಪಾದಯಾತ್ರಿಗಳು ಕ್ಷೇತ್ರಕ್ಕೆ ಆಗಮಿಸಿದ್ದ ಕಾರಣ, ಪಾದಯಾತ್ರಿಗಳಿಗೆ ಕಲ್ಪಿಸಲಾಗಿದ್ದ ನೇರ ದರ್ಶನದ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿತ್ತು.
ರಾತ್ರಿ ಇಡೀ ಮಂಜುನಾಥ ಸ್ವಾಮಿಯ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸಿ ಶಿವರಾತ್ರಿ ಯ ಜಾಗರಣೆಯನ್ನು ಭಕ್ತರು ಮಾಡಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ರಾತ್ರಿ ಇಡೀ ಕ್ಷೇತ್ರದಲ್ಲಿ ಕಲಾ ಪ್ರದರ್ಶನ ಮಾಡಿದ್ದಾರೆ. ಡೊಳ್ಳು ಕುಣಿತ, ವೀರಗಾಸೆ, ನಾಗಸ್ವರ, ತಮಟೆ ಕಲಾವಿದರು ಕಲಾ ಪ್ರದರ್ಶನವನ್ನು ಮಾಡಿದ್ದಾರೆ. ಮಂಗಳವಾರ ತಡರಾತ್ರಿ ಎರಡು ಗಂಟೆಯ ವೇಳೆಗೆ ಮಂಜುನಾಥ ಸ್ವಾಮಿಯ ಬೆಳ್ಳಿ ರಥೋತ್ಸವ ನಡೆದಿದ್ದು, ದೇವಳಕ್ಕೆ ಪ್ರದಕ್ಷಿಣೆ ಹಾಕಿ,ರಥಬೀದಿಯಲ್ಲಿ ಸಾಗಿ ಮತ್ತೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ಬೆಳ್ಳಿ ರಥೋತ್ಸವ ನೆರವೇರಿದೆ.
ಬಳಿಕ ದೊಡ್ಡ ತೇರಿನಲ್ಲೂ ಮಂಜುನಾಥ ಸ್ವಾಮಿಯ ರಥೋತ್ಸವ ಜರುಗಿದೆ..ರಥದ ನಾಲ್ಕೂ ಚಕ್ರಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದ್ದಾರೆ..ಮುಂಜಾನೆ ನಾಲ್ಕು ಗಂಟೆಯ ವೇಳಗೆ ದೊಡ್ಡ ರಥೋತ್ಸವವೂ ಜರುಗಿದ್ದು, ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿದ್ದಾರೆ..
ಜಾಗರಣೆಯ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ರಾತ್ರಿಯ ಅನ್ನದಾನದ ವ್ಯವಸ್ಥೆಯನ್ನು ಮಾಡಿರಲಿಲ್ಲ. ಈ ಹಿನ್ನಲೆಯಲ್ಲಿ ಭಕ್ತರ ಒಂದು ತಂಡ ಸೇವೆಯ ರೂಪದಲ್ಲಿ ಬಂದ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಿದೆ. ಶಿವರಾತ್ರಿ ಯ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೋಟೋ ಹಿಡಿದ ಅಭಿಮಾನಿ, ಪುನೀತ್ ಫೋಟೋ ದೊಂದಿಗೆ ಶಿವರಾತ್ರಿ ಜಾಗರಣೆ ಮಾಡಿದ್ದು ವಿಶೇಷ ವಾಗಿತ್ತು.


Click it and Unblock the Notifications











