'ಕ್ರಾಂತಿ' ಹೊಸ ಪೋಸ್ಟರ್ ರಿಲೀಸ್: ಜೂಮ್ ಮಾಡಿ ನೋಡಿದವರು ಬೇಸರಗೊಂಡಿದ್ಯಾಕೆ?
ಗಣೇಶ ಹಬ್ಬದ ಸಡಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಸೂಟ್ ಧರಿಸಿ ಸ್ಟೈಲಿಶ್ ಲುಕ್ನಲ್ಲಿ 'ಕ್ರಾಂತಿ'ವೀರ ದರ್ಶನ್ ಖಡಕ್ ಪೋಸ್ ಕೊಟ್ಟಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರ್ತಿದೆ. ಆದರೆ ಚಿತ್ರದ ಹೊಸ ಪೋಸ್ಟರ್ ಮಾತ್ರ ಕೆಲವರಿಗೆ ಇಷ್ಟವಾಗಿಲ್ಲ.
ಹೇಳಿ ಕೇಳಿ 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ. 5 ಭಾಷೆಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಇನ್ನು ಅಭಿಮಾನಿಗಳೇ ರಾಜ್ಯಾದ್ಯಂತ ಬಹಳ ಜೋರಾಗಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ 'ಕ್ರಾಂತಿ' ಪೋಸ್ಟರ್ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅದಕ್ಕೆ ಎರಡು ಕಾರಣಗಳಿವೆ. ಒಂದು ರಿಲೀಸ್ ಡೇಟ್ ಅನೌನ್ಸ್ ಮಾಡದೇ ಇರುವುದು. ಮತ್ತೊಂದು ಪೋಸ್ಟರ್ ಡಿಸೈನ್.

ಪ್ಯಾನ್ ಇಂಡಿಯಾ ಸಿನಿಮಾ ಅಂದಮೇಲೆ ಕ್ವಾಲಿಟಿ ಅಷ್ಟೇ ಮುಖ್ಯ. ಸಿನಿಮಾ ಪೋಸ್ಟರ್, ಟೀಸರ್, ಟ್ರೈಲರ್, ಸಾಂಗ್ಸ್ ಹೀಗೆ ಪ್ರತಿಯೊಂದರ ಬಗ್ಗೆಯೂ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇರುತ್ತದೆ. ಆದರೆ ಸದ್ಯ ರಿಲೀಸ್ ಆಗಿರುವ 'ಕ್ರಾಂತಿ' ಸಿನಿಮಾ ಪೋಸ್ಟರ್, ಟೀಸರ್ ಎಲ್ಲವೂ ಕೆಲವರಿಗೆ ನಿರಾಸೆ ಮೂಡಿಸುತ್ತಲೇ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಚಿತ್ರತಂಡ ಎಚ್ಚೆತ್ತುಕೊಂಡು ಸರಿಪಡಿಸಿಕೊಳ್ಳುತ್ತಾರೆ ಎಂದು ಕಾದಿದ್ದೇ ಬಂತು. ಪ್ರತಿಫಲ ಮಾತ್ರ ಶೂನ್ಯ. ಹೊಸ ಪೋಸ್ಟರ್ನಲ್ಲೂ ಅದೇ ರಾಗ ಮುಂದುವರೆದಿದ್ದು, ಇದಕ್ಕಿಂತ ಫ್ಯಾನ್ ಮೇಡ್ ಪೋಸ್ಟರ್ ವಾಸಿ ಎಂದು ಕೆಲವರು ಹೇಳುತ್ತಿದ್ದಾರೆ.
5 ಭಾಷೆಯ 'ಕ್ರಾಂತಿ' ಸಿನಿಮಾ ಪೋಸ್ಟರ್ ರಿಲೀಸ್ ಮಾಡಿ ದರ್ಶನ್ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ದರ್ಶನ್ ಟ್ಟಿಟ್ಟರ್ ಪೋಸ್ಟ್ ಸಾವಿರಾರು ಲೈಕ್ಸ್ ಹಾಗೂ ರೀಟ್ವಿಟ್ ಗಿಟ್ಟಿಸಿಕೊಳ್ತಿದೆ. ಅದೇ ರೀತಿ ಕಾಮೆಂಟ್ ಬಾಕ್ಸ್ನಲ್ಲಿ ಕೆಲವರು ಪೋಸ್ಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪೋಸ್ಟರ್ನ ಜೂಮ್ ಮಾಡಿ ತೋರಿಸಿ ಬೇಸರ ತೋಡಿಕೊಳ್ಳುತ್ತಿದ್ದಾರೆ. ಸರಿಯಾಗಿ ಎಡಿಟಿಂಗ್ ಮಾಡಿಲ್ಲ, ಎಡಿಟರ್ನ ಬದಲಾಯಿಸಿ, ಪ್ಯಾನ್ ಇಂಡಿಯಾ ಸಿನಿಮಾ ರೇಂಜಿಗೆ ತಕ್ಕಂತೆ ಪೋಸ್ಟರ್ ಡಿಸೈನ್ ಮಾಡಿ ಎಂದು ಹೇಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಂದ ಟೀಸರ್ಗೂ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

'ಯಜಮಾನ' ಸಿನಿಮಾ ಮಾಡಿದ್ದ ಅದೇ ತಂಡ 'ಕ್ರಾಂತಿ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ನಿರ್ಮಾಣದ ಮಾಡುತ್ತಿರುವ ಈ ಚಿತ್ರದಲ್ಲಿ ದರ್ಶನ್ ಎನ್ಆರ್ಐ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದು, ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸ್ವತಃ ನಿರ್ದೇಶಕ ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಆದರೆ ಚಿತ್ರತಂಡ ಇನ್ನು ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ.


Click it and Unblock the Notifications











